ವಿದ್ಯಾರ್ಥಿ ವೇತನವನ್ನು ಕಿತ್ತುಕೊಂಡ ರಾಜ್ಯ ಸರ್ಕಾರ: SFI ಖಂಡನೆ

0
89

ರಾಯಚೂರು: ವಿದ್ಯಾರ್ಥಿವೇತನ ಮಂಜೂರಾತಿ ಗೆ ಹೊಸ ವಿದ್ಯಾರ್ಥಿಗಳನ್ನು ಪರಿಗಣಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ SFI ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ ಎಂದು SFIನ ರಾಜ್ಯಾಧ್ಯಕ್ಷರಾದ ವಿ. ಅಂಬರೀಶ್ ಮತ್ತು ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಆಗ್ರಹಿಸಿದ್ದಾರೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ನೀಡಲು ಮುಂದಾಗಿದ್ದು, ಇದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನಿತ್ಯವೂ ಸೈಬರ್ ಸೆಂಟರ್ ಮತ್ತು ಶಾಲೆಗಳಿಗೆ ತಿರುಗುತ್ತಲೇ ಇದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕೂಡ ವಿದ್ಯಾರ್ಥಿಗಳಿಂದ ಆನ್ ಲೈನ್ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಸಮಯವನ್ನೂ ನೀಡಿತ್ತು. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಪ್ರತಿದಿನ ಎರಡ್ಮೂರು ಬಾರಿಯಾದರೂ ಸೈಬರ್ ಸೆಂಟರ್ ಮತ್ತು ಶಾಲೆಗಳಲ್ಲಿ ವಿಚಾರಿಸುತ್ತಲೇ ಇದ್ದರು. ಕೊನೆ ಗಳಿಗೆಯಲ್ಲಿ ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನೇ ಬಿಜೆಪಿ ಸರ್ಕಾರ ನಿಲ್ಲಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಪಿ.ವಸಂತಕುಮಾರ್ ವಿದ್ಯಾರ್ಥಿ ವೇತನ ರದ್ದುಗೊಳಿಸಲಾಗಿದೆ ಎಂಬ ಆದೇಶ ನೀಡಿರುವುದು ವಿದ್ಯಾರ್ಥಿಗಳು, ಪೋಷಕರಿಗೆ ದ್ರೋಹ ಬಗೆದಂತಾಗಿದೆ.

Contact Your\'s Advertisement; 9902492681

ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಲೇ ಬರುತ್ತಿದೆ. ನೆರೆ ಪರಿಹಾರ ಹಣವೂ ಬಿಡುಗಡೆ ಮಾಡಿ ನೆರವು ನೀಡಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡುತ್ತಿಲ್ಲ. ಈಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವೇತನಕ್ಕೂ ಕತ್ತರಿ ಹಾಕಿದೆ. ತಮ್ಮ ಮಗ/ಳ ಭವಿಷ್ಯಕ್ಕೆ ಸ್ವಲ್ಪ ಮಟ್ಟಿನ ದಾರಿಯಾಗಬಹುದು ಎಂಬ ಪೋಷಕರ ಕನಸಿಗೆ ರಾಜ್ಯ ಸರ್ಕಾರ ತಣ್ಣೀರು ಎರಚಿದೆ. ಆರಂಭದಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 31ರವರೆಗೆ ಅವಧಿ ನೀಡಿ ಈಗ ದಿಢೀರ್ ರದ್ದುಪಡಿಸಿದ್ದೇಕೆ ಎಂಬ ಪ್ರಶ್ನೆ ಎದುರಾಗಿದೆ. ಸರಕಾರದ ಈ ನಿರ್ಧಾರದಿಂದಾಗಿ ಬಹುಸಂಖ್ಯಾತ ವಿದ್ಯಾರ್ಥಿಗಳು ಶಿಷ್ಯವೇತನದಿಂದ ಹೊರಗುಳಿಯುತ್ತಿದ್ದಾರೆ. ಗ್ರಾಮೀಣ ಭಾಗ ಹಾಗೂ, ನಗರ ಪ್ರದೇಶದ ಕೆಲ ಶಾಲೆಗಳಲ್ಲಿ ಶಿಷ್ಯವೇತನ ಸಿಗುತ್ತದೆ ಎಂಬ ಮಾಹಿತಿಯೇ ಸರಿಯಾಗಿ ಸಿಗುತ್ತಿಲ್ಲ. ಶಿಷ್ಯವೇತನದ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಇಲಾಖೆಯ ಕೆಲಸ. ಯಾವ ವಿದ್ಯಾರ್ಥಿಗಳನ್ನು ಹೊರಗಿಡದೆ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ ಹಾಕಲು ಅವಕಾಶ ನೀಡಬೇಕು ಹಾಗೂ ಅರ್ಜಿ ಹಾಕಿದ ಎಲ್ಲರಿಗೂ ಶಿಷ್ಯವೇತನ ನೀಡಬೇಕು ಎಂದು SFI ಒತ್ತಾಯಿಸುತ್ತದೆ.

ವಿದ್ಯಾರ್ಥಿಗಳ ಪೋಷಕರು ಸೈಬರ್ ಸೆಂಟರ್ ಗೆ ಹೋಗಿ ಅರ್ಜಿ ಭರ್ತಿ ಮಾಡಲು ಹೋದರೆ ಅಥವಾ ಭರ್ತಿ ಮಾಡಿಸಲು ಹೋದರೆ ಎಸ್ಎಸ್.ಪಿ ಕರ್ನಾಟಕ ಡಾಟ್ ಕಾಮ್ ಪೋರ್ಟಲ್ ತೆರೆದುಕೊಳ್ಳುತ್ತಿತ್ತು. ವಿದ್ಯಾರ್ಥಿ ಲಾಗಿನ್ ಇಲ್ಲವೆ ಖಾತೆಯನ್ನು ಸೃಜಿಸಿ ಖಾತೆ ಓಪನ್ ಮಾಡಲು ಹೋದರೆ ವಿದ್ಯಾರ್ಥಿಗಳ ಮಾಹಿತಿಯೇ ಸ್ಕ್ರೀನ್ ಮೇಲೆ ಬರುತ್ತಿರಲಿಲ್ಲ. ಯಾಕೆಂದರೆ ಅರ್ಜಿಯನ್ನು ಬಿಟ್ಟಿದ್ದರೆ ತಾನೆ ಅದು ಸ್ಕ್ರೀನ್ ಮೇಲೆ ವಿದ್ಯಾರ್ಥಿಯ ಮಾಹಿತಿ ಬರುವುದು. ಅದು ಮಾಹಿತಿ ಬರುತ್ತಿರಲಿಲ್ಲ. ಆದರೆ 2018-19ನೇ ಸಾಲಿನ ವಿದ್ಯಾರ್ಥಿ ವೇತನ ಪಡೆದಿರುವುದನ್ನು ಮಾತ್ರ ತೋರಿಸುತ್ತಿತ್ತು.

ಅಷ್ಟೇ ಅಲ್ಲ ವಿದ್ಯಾರ್ಥಿ ಮುಂದಿನ ತರಗತಿಗೆ ಹೋಗಿರುವ ವಿಷಯವನ್ನೇ ಅಪ್ ಡೇಟ್ ಮಾಡಿರಲಿಲ್ಲ. ಯಾವುದೇ ವಿದ್ಯಾರ್ಥಿಯ ಮಾಹಿತಿ ಹುಡುಕಿದರೆ ವಿದ್ಯಾರ್ಥಿಯ ಹಿಂದಿನ ವರ್ಷದ ಮಾಹಿತಿ ಮತ್ತು ಪಡೆದಿರುವ ಹಣ ಮಾತ್ರ ತೋರಿಸುತ್ತಿತ್ತು. ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳ ಮಾಹಿತಿ ಅಪ್ ಡೇಟ್ ಮಾಡಬೇಕಾಗಿದ್ದ ಇಲಾಖೆ ಮೌನವಹಿಸಿತ್ತು. ಇಲಾಖೆಗೆ ಮೊದಲೇ ಈ ಬಾರಿ ವಿದ್ಯಾರ್ಥಿ ವೇತನ ಬಿಡುಗಡೆಯಾಗುವುದಿಲ್ಲ ಎಂಬುದು ಗೊತ್ತಿತ್ತು. ಹೀಗಾಗಿ ವಿಷಯವನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮುಚ್ಚಿಟ್ಟ ಇಲಾಖೆ ಅರ್ಜಿ ಆಹ್ವಾನಿಸುವ ನಾಟಕವನ್ನು ಮಾಡಿದ್ದು ದುರಂತ.

ನೂರು ದಿನಗಳನ್ನು ಪೂರೈಸಿರುವ ಬಿ.ಎಸ್.ಯಡಿಯೂರಪ್ಪ ಸರ್ಕಾರ ಹಿಂದುಳಿದ ವಿದ್ಯಾರ್ಥಿಗಳಿಗೆ ದ್ರೋಹ ಎಸಗಿದೆ. ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಿದೆ. ವಿದ್ಯಾರ್ಥಿಗಳಿಗೆ ಮೊದಲೇ ಮಾಹಿತಿ ನೀಡಿದರೆ ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. 1 ರಿಂದ 10 ತರಗತಿಯವರೆಗಿನ ಲಕ್ಷಾಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವುದರಿಂದ ವಂಚಿತರಾಗುತ್ತಾರೆ. ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮತ್ತು ಇಲಾಖೆ ದ್ರೋಹ ಬಗೆದಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ವಾಪಸ್ಸ ಪಡೆದು ಶಿಷ್ಯ ವೇತನಕ್ಕೆ ಎಲ್ಲರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here