ಪಡಿತರ ಚೀಟಿದಾರರಿಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಲು ಸೂಚನೆ

0
152

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಎಲ್ಲಾ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಹಾಜರಾಗಿ ಕಡ್ಡಾಯವಾಗಿ ಪಡಿತರ ಚೀಟಿದಾರರ ಆಧಾರ ದೃಢೀಕರಣ (ಇ-ಕೆವೈಸಿ)ವನ್ನು ಮಾಡಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರು ತಿಳಿಸಿದ್ದಾರೆ.

ಆಧಾರ್ ದೃಢೀಕರಣ (ಇ-ಕೆವೈಸಿ) ಸಂಗ್ರಹಣಾ ಕಾರ್ಯವನ್ನು ತಿಂಗಳ ಮೊದಲ ಹತ್ತು ದಿನಗಳ ಅಂದರೆ ಡಿಸೆಂಬರ್ ಮಾಹೆಯಲ್ಲಿ 2019ರ ಡಿಸೆಂಬರ್ 1ರಿಂದ 10ರವರೆಗೆ ಮತ್ತು 2020ರ ಜನವರಿ 1ರಿಂದ ಜನವರಿ 10ರ ವರೆಗೆ ಮಾಡಲಾಗುತ್ತದೆ. ಈ ಹತ್ತು ದಿನಗಳಲ್ಲಿ ಆನ್‍ಲೈನ್ ಮೂಲಕ ಪಡಿತರ ವಿತರಣೆ ಇರುವುದಿಲ್ಲ. ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡದೆ ಇರುವ ಫಲಾನುಭವಿಗಳಿಗೆ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುತ್ತದೆ.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯಲ್ಲಿ 51950 ಅಂತ್ಯೋದಯ ಪಡಿತರ ಚೀಟಿಯ 205600 ಸದಸ್ಯರು ಹಾಗೂ 487208 ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿಯ 1633660 ಸದಸ್ಯರು ಸೇರಿದಂತೆ ಒಟ್ಟು 1839260 ಫಲಾನುಭವಿಗಳಿದ್ದು, ಶೇ. 100 ರಷ್ಟು ಆಧಾರನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಪ್ರತಿ ಪಡಿತರ ಚೀಟಿಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸಲು ಹಾಗೂ ಅರ್ಹ ಪಡಿತರ ಚೀಟಿದಾರರನ್ನು ಗುರುತಿಸಿ ಪಡಿತರ ಚೀಟಿಯನ್ನು ನೀಡಲು ತಿಳಿಸಲಾಗಿದೆ.

ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ 51950 ಅಂತ್ಯೋದಯ ಪಡಿತರ ಚೀಟಿಯಲ್ಲಿ 6652 ಪಡಿತರ ಚೀಟಿಯ 41810 ಸದಸ್ಯರು ಹಾಗೂ 487208 ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿಯಲ್ಲಿ 170293 ಪಡಿತರ ಚೀಟಿಯ 621183 ಸದಸ್ಯರ ಆಧಾರ್ ದೃಢೀಕರಣವನ್ನು (ಇ-ಕೆವೈಸಿ) ಪಡೆದಿದ್ದು, ಇವರಿಂದ ಮತ್ತೊಮ್ಮೆ ಇ-ಕೆವೈಸಿ ಸಂಗ್ರಹಿಸುವ ಅವಶ್ಯಕತೆ ಇರುವುದಿಲ್ಲ. ಜಿಲ್ಲೆಯಲ್ಲಿ ಇನ್ನುಳಿದ 51950 ಅಂತ್ಯೋದಯ ಪಡಿತರ ಚೀಟಿಯಲ್ಲಿ 45298 ಪಡಿತರ ಚೀಟಿಯ 163790 ಸದಸ್ಯರು ಹಾಗೂ 487208 ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿಯಲ್ಲಿ 316915 ಪಡಿತರ ಚೀಟಿಯ 1012477 ಸದಸ್ಯರ ಆಧಾರ್ ದೃಢೀಕರಣವನ್ನು (ಇ-ಕೆವೈಸಿ) ಪಡೆಯುವುದು ಬಾಕಿ ಇರುತ್ತದೆ.

ಕಲಬುರಗಿ ಜಿಲ್ಲೆಯ ಎಲ್ಲಾ ಫಲಾನುಭವಿಗಳ ಮಾಹಿತಿಯೊಂದಿಗೆ ಆಧಾರ್ ಜೋಡಣೆಯಾಗಿರುವುದರಿಂದ ಚಾಲ್ತಿಯಲ್ಲಿರದ, ಕುಟುಂಬದೊಂದಿಗೆ ವಾಸವಿಲ್ಲದ, ಮೃತರಾದ ಫಲಾನುಭವಿಗಳಿಗೆ ಮಾಹಿತಿಗಳನ್ನು ಗುರುತಿಸಿ ಅಂತಹ ಫಲನುಭವಿಗಳ ಮಾಹಿತಿಗಳನ್ನು ಆಹಾರ ದತ್ತಾಂಶದಿಂದ ಕಡಿತಗೊಳಿಸಿ ಪಡಿತರ ದಾಸ್ತಾನು ಉಳಿಕೆಯಾಗಲು ಕ್ರಮವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎನ್.ಐ.ಸಿ. ಯವರು ಈಗಾಗಲೇ ಸಿದ್ಧಪಡಿಸಿರುವ ತಂತ್ರಾಂಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಮಾತ್ರ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಡಿತರ ಚೀಟಿಯ ಫಲಾನುಭವಿಗಳು ತಮ್ಮ ಪಡಿತರ ಚೀಟಿಯ ಯಾವುದಾದರೂ ಒಬ್ಬ ಸದಸ್ಯರ ಜಾತಿ ಪ್ರಮಾಣ ಪತ್ರವನ್ನು (ಇ-ಕೆವೈಸಿ) ಮಾಡುವ ಸಂದರ್ಭದಲ್ಲಿ ಮಾಹಿತಿ ನೀಡಬೇಕು. ಅನಿಲ ಸಂಪರ್ಕ ಹೊಂದಿದರೆ, ಅಂತಹ ಪಡಿತರ ಚೀಟಿದಾರರ ಯಾವ ಯೋಜನೆಯ ಫಲಾನುಭವಿಗಳು ಅಥವಾ ನೇರವಾಗಿ ಖರೀದಿ ಮಾಡಿರುವ ಕುರಿತು ಮಾಹಿತಿ ನೀಡಬೇಕು.

ಆಧಾರ್ ದೃಢೀಕರಣ (ಇ-ಕೆ.ವೈ.ಸಿ.)ಯನ್ನು ನಿರ್ವಹಿಸುವ ನ್ಯಾಯ ಬೆಲೆ ಅಂಗಡಿಗಳಿಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಲು ಪ್ರತಿ ಫಲಾನುಭವಿಗೆ 5 ರೂ.ನಂತೆ ಒಂದು ಕುಟುಂಬಕ್ಕೆ ಗರಿಷ್ಠ ಮೊತ್ತ 20 ರೂ. ಮಾತ್ರ ಇಲಾಖೆ ವತಿಯಿಂದ ನೇರವಾಗಿ ಅಂಗಡಿಯವರಿಗೆ ಪಾವತಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಯವರು ಫಲಾನುಭವಿಯಿಂದ ಯಾವುದೇ ಮೊತ್ತವನ್ನು ಸಂಗ್ರಹಿಸಿದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಒಂದು ವೇಳೆ ಪಡಿತರ ಚೀಟಿದಾರರಿಂದ ಹಣ ಪಡೆದ ಬಗ್ಗೆ ದೂರುಗಳು ಬಂದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪಡಿತರ ಚೀಟಿದಾರರ ಆಧಾರ್ ದೃಢೀಕರಣ (ಇ-ಕೆವೈಸಿ)ವನ್ನು ಪಡೆಯುವ ಸಂದರ್ಭದಲ್ಲಿ ಯಾವುದಾದರು ಸಮಸ್ಯೆಗಳು ಮತ್ತು ದೂರುಗಳು ಇದ್ದರೆ ದೂರವಾಣಿ ಸಂಖ್ಯೆ: 08472-278678ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here