ಕೋರೆಗಾಂವ ದಲಿತರ ಸ್ವಾಭಿಮಾನದ ಹೋರಾಟ: ನಿಜಲಿಂಗ ದೊಡ್ಮನಿ

0
181

ಜೇವರ್ಗಿ: ಭೀಮಾ ಕೋರೆಗಾಂವ ದಲಿತರ ಹಕ್ಕುಗಳಿಗಾಗಿ ನಡೆದ ಹೋರಾಟ ಎಂದು ಸೊನ್ನ ಎಸ್.ಜಿ.ಎಸ್.ವಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಏರ್ಪಡಿಸಿದ್ದ ೨೦೨ನೇ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಪೇಶ್ವೆಗಳು ಆಚರಣೆ ಮಾಡುತ್ತಿದ್ದ ಅಸ್ಪ್ರಶ್ಯತೆಯ ವಿರುದ್ದದ ಹೋರಾಟವೇ ಮಹಾರ್ ದಂಗೆ ಎನ್ನಲಾಗುತ್ತಿದ್ದು, ಇದು ದಲಿತರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟವಾಗಿದೆ. ಇದು ಯಾವುದೇ ಸಾಮ್ರಾಜ್ಯದ ವಿರುದ್ಧ ನಡೆದ ಹೋರಾಟವಲ್ಲ. ಒಂದು ವ್ಯವಸ್ಥೆಯಿಂದ ಬೇಸತ್ತ ಜನರ ಸ್ವಾಭಿಮಾನದ ದಂಗೆಯಾಗಿದೆ ಎಂದರು.

೫೦೦ ಜನ ಮಹಾರ್ ಸೈನಿಕರು ಪೇಶ್ವೆಗಳ ೨೦ ಸಾವಿರ ಅಶ್ವದಳ, ೮ ಸಾವಿರ ಕಾಲ್ದಳಗಳನ್ನು ಹೊಂದಿದ ದೊಡ್ಡ ಸೈನ್ಯದ ವಿರುದ್ಧ ಹೋರಾಡಿ ಜಯಿಸಿದರು. ಅಂದು ನಡೆದ ಘಟನೆಯ ಸವಿನೆನಪಿಗಾಗಿ ಬ್ರಿಟಿಷರು ಮಹಾರಾಷ್ಷ್ರದ ಕೋರೆಗಾಂವದಲ್ಲಿ ವಿಜಯಸ್ಥಂಭ ನಿರ್ಮಿಸಿದ್ದರು. ಅಂತಹ ಇತಿಹಾಸವನ್ನು ಅರಿತ ಡಾ.ಅಂಬೇಡ್ಕರ್ ಅವರು ಕುಟುಂಬ ಸಮೇತರಾಗಿ ಈ ಸ್ಥಳಕ್ಕೆ ಬಂದು ಹೋಗುತ್ತಿದ್ದರು. ದಲಿತರ ಸ್ವಾಭಿಮಾನದ ಸಂಕೇತವಾದ ಈ ಸ್ಥಳಕ್ಕೆ ಇಂದು ಲಕ್ಷಾಂತರ ಜನರು ಸೇರುತ್ತಿರುವುದು ಸಂತಸದ ವಿಷಯವಾಗಿದೆ. ದಲಿತರು ತಮ್ಮ ಇತಿಹಾಸವನ್ನು ತಾವೇ ರಚಿಸಬೇಕಾದ ಅನಿವಾರ್ಯತೆ ಇದೆ. ಇವತ್ತಿಗೂ ಸಹ ಮಹಾರ್ ಸೈನ್ಯದ ಶೌರ್ಯವನ್ನು ಯಾವ ಪಠ್ಯಪುಸ್ತಕದಲ್ಲಿಯೂ ದಾಖಲಾಗದಿರುವುದು ದುರಂತ ಎಂದರು.

ನನ್ನ ಜನಕ್ಕೆ ಆಯುಧ ಹಿಡಿಯುವ ಅಧಿಕಾರ ನೀಡಿದ್ದರೆ, ದೇಶ ಯಾವತ್ತೂ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರಲಿಲ್ಲ ಎಂದು ಬಾಬಾ ಸಾಹೇಬರು ಹೇಳಿದ್ದರು. ದೇಶದ ಇತಿಹಾಸದಲ್ಲಿ ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ಯುದ್ಧ ನಡೆದಿವೆ ಆದರೆ ಸ್ವಾಭಿಮಾನಕ್ಕಾಗಿ ನಡೆದ ಯುದ್ಧ ಭೀಮಾ ಕೋರೆಗಾಂವ ಎಂದರು.

ಡಾ.ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸೀಮಿತ ಮಾಡುತ್ತಿರುವುದು ಸರಿಯಲ್ಲ. ಅವರೊಬ್ಬ ರಾಷ್ಟ್ರದ ನಾಯಕ. ಈ ದೇಶದ ದಲಿತರಿಗೆ ೧೮ ಪ್ರತಿಶತ ಮೀಸಲಾತಿ ನೀಡಿದರೆ, ಹಿಂದುಳಿದ ವರ್ಗಗಳಿಗೆ ೩೨ ಪ್ರತಿಶತ ನೀಡಿದ್ದಾರೆ. ಮುಖ್ಯವಾಗಿ ಈ ದೇಶದ ಮಹಿಳೆಯರಿಗೆ ಬದುಕುವ ಹಕ್ಕು ನೀಡಿದ್ದು ಡಾ.ಅಂಬೇಡ್ಕರ್ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮರೆಪ್ಪ ಬಡಿಗೇರ, ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲಿಕ ಗಾಯಕವಾಡ, ಶಾಂತಪ್ಪ ಯಲಗೋಡ, ಕೆರೆಪ್ಪ ಹಿಪ್ಪರಗಿ, ಜಗದೇವಿ ಜಟ್ನಾಕರ, ಶರಣಪ್ಪ ಹೊಸಮನಿ, ಬಸಣ್ಣ ಬಬಲಾದ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಭೂತಾಳಿ ಹೆಗಡೆ, ಬಸವರಾಜ ಹೆಗಡೆ, ಭೀಮಾಶಂಕರ ಹರನಾಳ, ಬಸಣ್ಣ ಸರಕಾರ, ಭಾಗಣ್ಣ ಕೊಳಕೂರ, ಸಿದ್ದಪ್ಪ ಆಲೂರ, ಶಿವಕುಮಾರ ಗೋಲಾ, ವಿಶ್ವರಾಧ್ಯ ಮಾಯಿ, ಮಿಲಿಂದ ಸಾಗರ, ವಿಶ್ವ ಆಲೂರ, ಮೌನೇಶ ಹಂಗರಗಿ, ಜೈಭೀಂ ಸಿದ್ನಾಳ, ವಿಶಾಲ ಕುಲಾಲಿ ಸೇರಿದಂತೆ ಇತರರು ಇದ್ದರು. ಬಿವಿಎಸ್ ವಿದ್ಯಾರ್ಥಿಗಳು ಸ್ವಾಗತಿಸಿದರು. ಡಾ.ಅಶೋಕ ದೊಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ಬಡಿಗೇರ ನಿರೂಪಿಸಿದರು. ಶ್ರೀಹರಿ ಕರಕಿಹಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here