ಕರಿಯ ಕನ್ನಡಿಯಲ್ಲಿ ಅಡಗಿಸಿದಂತಿರುವ “ಕರಸ್ಥಲದ ದೇವರು”

0
169
ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು
ಬಹಿರರ್ಗತವಾದಂತೆ
ಮುಗಿಲ ಮರೆಯಲ್ಲಿ ಅಡಗಿರ್ದ
ಕ್ಷಣಿತವು ಸ್ಫುರಿಸಿದಂತೆ
ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನ ಲಿಂಗವು
ತನ್ನ ಲೀಲೆಯಿಂದ ತಾನೇ ಉದಯವಾಗಲು
ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯ ಅಖಂಡೇಶ್ವರ
-ಷಣ್ಮುಖ ಶಿವಯೋಗಿಗಳು

ಪರಮಾತ್ಮ ರಚನೆ ಮಾಡಿದ ಈ ಸೃಷ್ಟಿಯಲ್ಲಿ ಸಕಾರಾತ್ಮಕ-ನಕಾರಾತ್ಮಕ ಇಟ್ಟಿದ್ದಾನೆ. ಆದರೆ ದೇವರು ಸಕಾರಾತ್ಮಕನೂ ಅಲ್ಲ. ನಕಾರಾತ್ಮಕನೂ ಅಲ್ಲ. ನಮ್ಮೆಲ್ಲರ ಸಾಧನೆ ಸೃಷ್ಟಿಯಲ್ಲಿರುವ ಶಕ್ತಿ ತೆಗೆದುಕೊಳ್ಳುತ್ತದೆ ಹೊರತು ಸೃಷ್ಟಿಕರ್ತನ ಶಕ್ತಿ ತೆಗೆದುಕೊಳ್ಳುವುದಿಲ್ಲ. ಪರಮಾತ್ಮನ ಶಕ್ತಿ ನಮಗೆ ಬಂದು ಬಿಟ್ಟರೆ ನಮ್ಮನ್ನು ಯಾರೂ ಹಿಡಿಯಲಾಗುವುದಿಲ್ಲ. ಇದನ್ನೇ ಬಸವಣ್ಣನವರು “ಕರಿಯ ಕನ್ನಡಿಯೋಳ್ ಅಡಗಿಸಿದಂತೆ ನೀನು ಎನ್ನೊಳಗೆ ಅಡಗಿದೆ ಎಂದಿದ್ದಾರೆ. ಜಗತ್ತು ಸೃಷ್ಟಿ ಮಾಡಿರುವ ಪರಮಾತ್ಮ ಹುಟ್ಟಿಲ್ಲ. ಆತ ಈ ಜಗತ್ತನ್ನು ಹೊರಹೊಮ್ಮಿಸಿದ್ದಾನಷ್ಟೇ! ಬಿಗ್ ಬ್ಯಾಂಕ್ ಥೇರಿ ಕೂಡ ಇದನ್ನೇ ಹೇಳುತ್ತದೆ. ತನ್ನಷ್ಟಕ್ಕೆ ತಾನಿದ್ದೂ ಇಲ್ಲದಂತೆ ಇರುವ ಅಗೋಚರವಾದ ಸಮ್ಮಿಲನ ಶಕ್ತಿಯನ್ನೊಳಗೊಂಡಿರುವ ಅತ್ಯದ್ಭುತ ಪ್ರೇರಣೆಯೇ ಈ ಸೃಷ್ಟಿ.

Contact Your\'s Advertisement; 9902492681

ಪರಮಾತ್ಮ ಎಲ್ಲಿದ್ದಾನೆ ಎಂದು ಹುಡುಕಲು ಬರುವುದಿಲ್ಲ. ಆದರೆ ಆತ ಇಲ್ಲದಿರುವ ಜಾಗವಿಲ್ಲ. ಜಗತ್ತು ವಿಭಿನ್ನವಾಗಿದೆ. ವಿಶಿಷ್ಟವಾಗಿದೆ ನಿಜ. ಆದರೆ ಪರಮಾತ್ಮ ಮಾತ್ರ ಒಬ್ಬನಿದ್ದಾನೆ. ನಾನೇ ನಿನ್ನ ಬಾಳಿನ ಬೆಳಕು ಎಂದು ಬೈಬಲ್ ಹೇಳುತ್ತದೆ. ದೇವರು ಸರ್ವವ್ಯಾಪಿ ಅಲ್ಲ. ದೇವರು ಸರ್ವಶಕ್ತ ಎಂದು ಕುರಾನ್ ಹೇಳುತ್ತದೆ. ದೇವರು ಸರ್ವವ್ಯಾಪಿ. ದೇವರಿಗೆ ಯಾವುದೇ ಆಕಾರವಿಲ್ಲ ಎಂದು ವೇದಾಗಮ, ಶಾಸ್ತ್ರ, ಉಪನಿಷತ್ ಹೇಳುತ್ತವೆ. “ಅಹಂ ಬ್ರಹ್ಮಾಷ್ಮಿ; ತತ್ವಂ ಮಸಿ” ಎಂದು ಶಂಕರಾಚಾರ್ಯರು ಹೇಳಿದರೆ, ದೇವರು ಬೇರೆ. ನಾನು ಬೇರೆ ಎಂದು ದ್ವೈತ ಸಿದ್ಧಾಂತ ಬೋಧಿಸುತ್ತದೆ. ಆತ್ಮ, ಪರಮಾತ್ಮ ಮತ್ತು ನಾನು ಬೇರೆ ಬೇರೆ ಎಂದು ವಿಶಿಷ್ಟಾದೈತ ಸಿದ್ಧಾಂತ ಬೋಧಿಸುತ್ತದೆ. ಆದರೆ ಬಸವಾದಿ ಶರಣರು ನೀನು ದೇವರಲ್ಲ. ನಿನ್ನೊಳಗಿರುವ ಶಕ್ತಿಯೇ ದೇವರು ಎಂದು ಬಹಳ ವಿಭಿನ್ನವಾಗಿ ತಿಳಿಸಿದರು.

ಕಾಡುವ, ಬೇಡುವ ದೇವರುಗಳು ದೇವರಲ್ಲ. ದೇವರು ಕಾಡುವುದಿಲ್ಲ. ಬೇಡುವುದಿಲ್ಲ. ಪ್ರೇಮವನ್ನು ಕೊಡುವಾತ ದೇವರು ಎಂದು ಹೇಳಿದ ಬಸವಣ್ಣನವರು ಈ ಜಗತ್ತು ಕಂಡ ಮಹಾನ್ ಪ್ರವಾದಿಯಾಗಿದ್ದಾರೆ. ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವರನ್ನೊಳಗೊಂಡ ಧರ್ಮವೇ ಪ್ರಜಾಧರ್ಮ. ಪ್ರಜಾಪ್ರಭುತ್ವ ಧರ್ಮ. ಅದುವೇ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಜಾತಿಯ ಧರ್ಮ ಅಲ್ಲ. ಅದು ಜಾತ್ಯತೀತ ಧರ್ಮ. ನಮ್ಮ ಮನೆ ಕತ್ತಲೆಯಾಗಿ, ಬೇರೆಯವರ ಮನೆ ಬೆಳಕಾಗಿ ಕಾಣುವುದರ ವಿರುದ್ಧ, ಮನೆಯಲ್ಲಿನ ತಾಯಿಗೆ ಅಂಬಲಿ ಕೊಟ್ಟು, ಹೊರಗಿನ ತಾಯಿಗೆ ಮೃಷ್ಟಾನ್ನ ಭೋಜನ ಮಾಡಿಸುವವರ ಕುಟೀಲತೆ ಕಂಡ ಬಸವಣ್ಣನವರು ದೇವರ ಹೆಸರು ಹೇಳಿ ಹೊಟ್ಟೆ ಹೊರೆದುಕೊಳ್ಳುವ ಜನರ ಬೂಟಾಟಿಕೆಯ ನಾಟಕವನ್ನು ಬಯಲಿಗಿಟ್ಟರು ಮಾತ್ರವಲ್ಲ ಪರಮಾತ್ಮನ ನಿಜ ಸ್ವರೂಪವನ್ನು ಕಟ್ಟಿ ಕೊಟ್ಟರು.

ಬಸವಣ್ಣನವರ ಕತೃತ್ವ ಶಕ್ತಿಯ ಬಗೆಯನ್ನು ಅರಿತುಕೊಂಡ ಜೇವರ್ಗಿಯ ಷಣ್ಮುಖ ಶಿವಯೋಗಿಗಳು “ಬಸವಾ, ಬಸವಾ ಎಂದು ಭವಸಾಗರ ದಾಟಿದೆನಯ್ಯಾ” ಎಂದು ಹೇಳಿದ್ದಾರೆ. ಗಾಂಧೀಜಿಯನ್ನು ಗುಂಡಿಟ್ಟು ಕೊಂದರು. ಏಸುಕ್ರಿಸ್ತನನ್ನು ಶಿಲುಬೆಗೇರಿಸಿದರು. ಸಾಕ್ರಿಟಿಸ್‌ನಿಗೆ ವಿಷ ಕುಡಿಸಿದರು. ಬಸವಣ್ಣನವರನ್ನು ಗಡಿಪಾರು ಮಾಡಿದರು. ಆದರೂ ಅವರ ಹೇಳಿದ ವಿಚಾರಧಾರೆಯನ್ನು ಕೊಲ್ಲುವುದು ಆಗಿಲ್ಲ. ಬಸವಣ್ಣನವರನ್ನು ನಂಬಿದವರು ಯಾರೂ ಕೆಟ್ಟಿಲ್ಲ. ಕೆಟ್ಟವರು ಬಸವಣ್ಣನನ್ನು ನಂಬುವುದಿಲ್ಲ. ಭಾರತದಲ್ಲಿ ಅನೇಕ ಧರ್ಮ, ಸಿದ್ಧಾಂತಗಳಿರಬಹುದು. ಆದರೆ ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವ ಬಸವಣ್ಣನವರ ಲಿಂಗಾಯತ ಧರ್ಮದಂತೆ ಮತ್ತೊಂದು ಸಿದ್ಧಾಂತ ಇರಲಾರದು.

ಬಸವಾದಿ ಶರಣರು ಗುಡಿ-ಗುಂಡಾರಗಳ ವಿರೋಧಿಯಾಗಿರಲಿಲ್ಲ. ಗುಡಿ ಗುಂಡಾರಗಳಲ್ಲಿ ನಡೆಯುವ ಶೋಷಣೆಯ ವಿರೋಧಿಗಳಾಗಿದ್ದರು. ಅವರು ವೈದಿಕರನ್ನು ವಿರೋಧಿಸಲಿಲ್ಲ. ಆದರೆ ಅವರು ಮೋಸಗೊಳಿಸುವ ವೈದಿಕತೆಯನ್ನು ವಿರೋಧಿಸಿದರು. ಬಸವ ಧರ್ಮ ಅಪ್ಪಟ ಬದುಕುವ ಧರ್ಮ. ಶರಣರ ವಚನಗಳು ಬದುಕಿಗೆ ಬೆಳಕಾಗಬಲ್ಲವು. ಆಗಿನ ಕಾಲದಲ್ಲೇ ೭೭೦ ಅಮರಗಣಂಗಳನ್ನು, ಲಕ್ಷದ ಮೇಲೆ ತೊಂಭತ್ತಾರು ಸಾವಿರ ಜನ ಅನುಯಾಯಿಗಳನ್ನು ಹೊಂದಿದ್ದ ಬಸವ ಧರ್ಮದ “ಇವ ನಮ್ಮವ, ಇವ ನಮ್ಮವ” ಎಂಬ ತತ್ವ ಜಗತ್ತಿನೆಲ್ಲಡೆ ಪಸರಿಸಬೇಕಿದೆ. ಸಚ್ಚಿದಾನಂದ ಸ್ವರೂಪನಾಗಿರುವ ದೇವರ ಹೆಸರಿನಲ್ಲಿ, ದಯೆ ತುಂಬಿರುವ ಧರ್ಮದ ಹೆಸರಿನಲ್ಲಿ ಗಲಭೆ, ಗಲಾಟೆಗಳಾಗಿ ಭಯದ ವಾತಾವರಣ ಮನೆ ಮಾಡಿರುವ ಈ ಸಂದರ್ಭಕ್ಕೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬಲ್ಲ ಬಸವತತ್ವದ ಪಾಲನೆ ಅಗತ್ಯವಾಗಿದೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here