ಎನ್ನೊಳಗೆ ತನ್ನ ತೋರಿ ತನ್ನೊಳಗೆ ಎನ್ನನಿಂಬಿಟ್ಟುಕೊಂಡ “ಇಷ್ಟಲಿಂಗ”

0
85

ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯ ತೋರಿದ ಆ ಕಳೆಯ ಮಧ್ಯದಲ್ಲಿ
ಮಹಾಜ್ಞಾನದ ಬೆಳಗು ತೋರಿದ ಆ
ಬೆಳಗಿನ ನಿಲುವಿನೊಳಗೆ ಎನ್ನ ತೋರಿದ
ಎನ್ನೊಳಗೆ ತನ್ನ ತೋರಿದ ತನ್ನೊಳಗೆ ಎನ್ನ
ನಿಂಬಿಟ್ಟುಕೊಂಡ ಮಹಾ ಗುರುವಿಗೆ
ನಮೋ ನಮೋ ಎನುತಿರ್ಪೆನಯ್ಯಾ ಅಖಂಡೇಶ್ವರ
-ಷಣ್ಮುಖ ಶಿವಯೋಗಿಗಳು

ಶರಣರು “ಲಿಂಗ” ಪದವನ್ನು ಬಹಳ ವ್ಯಾಪಕ ಅರ್ಥದಲ್ಲಿ ಬಳಸಿದ್ದಾರೆ. ಸಾಮಾನ್ಯವಾಗಿ ಲಿಂಗವನ್ನು ಚಿಹ್ನೆ, ಗುರುತು, ಕುರುಹು ಎಂದು ಹೇಳಬಹುದು. ಆದರೆ ವಚನ ವಾಜ್ಮಯದಲ್ಲಿ ಪರಶಿವ, ಶಿವ, ಲಿಂಗ ಮುಂತಾದ ಶಬ್ದಗಳು ಪರಮಾತ್ಮನನ್ನು ಕುರಿತು ಹೇಳಿದಂತಿವೆ. ಪರಮಾತ್ಮ ಎಂದರೆ ಆತ ಕೈಲಾಸ ವಾಸಿಯಲ್ಲ. ಪರಮ ಆತ್ಮವೇ ಆತನ ನಿಜವಾದ ವಾಸಸ್ಥಾನ. ಸ್ಥಾವರ ಲಿಂಗವನ್ನು ಕಂಡಿದ್ದ ಶರಣರು ಸದಾ ನಮ್ಮೊಂದಿಗೆ ಚಲಿಸುವ ಕೊರಳಲ್ಲಿ ಹಾಕಿಕೊಳ್ಳುವ ಕರದಿಷ್ಟಲಿಂಗವನ್ನು ಕರುಣಿಸಿದರು. ಇದರ ಅರ್ಥ, ವ್ಯಾಪ್ತಿ “ಜಗದಗಲ ಮುಗಿಲಗಲ. ಮಿಗೆಯಗಲ, ನಿಮ್ಮಗಲ. ಅಗೋಚರ. ಅಪ್ರಮಾಣ. ಅಪ್ರತಿಮ ಲಿಂಗವೇ ಕೂಡಲ ಸಂಗದೇವ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ” ಎಂದು ಬಸವಣ್ಣನವರು ತಿಳಿಸಿದ್ದಾರೆ.

Contact Your\'s Advertisement; 9902492681

ಕಣ್ಣಿಗೆ ಕಾಣುವ ಸಚರಾಚರ ಸೃಷ್ಟಿಯೆಲ್ಲವೂ ಯಾವುದರಿಂದ ಹೊರಹೊಮ್ಮಿದೆಯೋ ಎಲ್ಲಿ ಲೀಲೆಯಾಡಿ ಕೊನೆಗೆ ಯಾವುದರಲ್ಲಿ ಲಯವಾಗುವುದೋ ಅದು ಲಿಂಗ. ಅವ್ಯಕ್ತ ಚೈತನ್ಯವೇ ಲಿಂಗ ಎಂದು ಮೊಗ್ಗೆಯ ಮಾಯಿದೇವ ಲಿಂಗಕ್ಕೆ ನಿರ್ವಚನ ನೀಡಿದ್ದಾರೆ. ಲಿಂಗವೆಂಬುದು ಪರಶಕ್ತಿಯುತ, ಪರಶಿವನ ನಿಜದೇಹ, ಪರಶಿವನ ನಿಜತೇಜ, ಪರಶಿವನ ನಿರತಿಶಯಾನಂದ ಸುಖ, ಅದು ಪರಶಿವನ ಪರಮಜ್ಞಾನ. ಸಾಧನೆಯ ಮೂಲಕ ಇದೆಲ್ಲವನ್ನು ಅನುಭವಿಸಬಹುದು. ಆದರೆ ಅದು ತೋರುವುದಿಲ್ಲ. ಏಕದಂರೆ ತೋರುವುದು ದೇವರಲ್ಲ. ಇದುವೇ ಇಷ್ಟಲಿಂಗದ ಮರ್ಮ.

ಲಿಂಗ ನಿರೀಕ್ಷಣೆಯಿಂದ, ಶಿವಯೋಗ ಸಾಧನೆಯಿಂದ ಸತ್, ಚಿತ್, ಆನಂದ ಪ್ರಾಪ್ತವಾಗುತ್ತದೆ. ಭವ ದಾಟಿಸುವ ಭಾವಲಿಂಗ ಇದು. ಇಷ್ಟಪಟ್ಟದ್ದನ್ನು ಕೊಡುವ ಕರಸ್ಥಲದ ಲಿಂಗ. ನರ ಜನ್ಮವ ತೊಡೆದು ಹರಜನ್ಮದ ಹಾದಿ ತೋರುವ ಪಕ್ಕಾ ವೈಜ್ಞಾನಿಕ ಮತ್ತು ವೈಚಾರಿಕವಾದ ಪ್ರಕಾಶ ಲಿಂಗವಿದು. ಇಷ್ಟಲಿಂಗ ಧಾರಣೆ ಮಾಡಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಿದರೆ ಅಸಮಾನತೆ, ಶೋಷಣೆ, ಅನಿಷ್ಟ ಪದ್ಧತಿ, ಮೂಢನಂಬಿಕೆ, ಕಂದಾಚಾರಗಳು ಮಾಯವಾಗಬಲ್ಲವು. ಮಾನವ ವಿಶ್ವ ಮಾನವನಾಗುವ ಬಗೆಯನ್ನು ವಿವರಿಸುವ, ಕುರುಹಿನ ಮೂಲಕ ಅರಿವು ಪಡೆವ ವಿಶ್ವದ ಏಕೈಕ ಸಾಧನವಿದು.

ಬಸವಾದಿ ಪ್ರಮಥರೆಲ್ಲರೂ ಲಿಂಗವನ್ನು ಪರಾತ್ಪರ ವಸ್ತು, ಶಿವ, ಬಯಲು, ಶೂನ್ಯ, ನಿಶೂನ್ಯ ಎಂದು ಕರೆದಿದ್ದಾರೆ. ಹಾಗೆ ನೋಡಿದರೆ ಯಾವ ದ್ವಂದಗಳಿಲ್ಲದೆ ಹರನೇ ತಾನಾಗುವ, ತಾನೇ ಹರನಾಗುವ ದಿವ್ಯ ದೃಷ್ಟಿಯೋಗ ಸಿದ್ಧಾಂತ ಕೂಡ ಇದಾಗಿದೆ. ಬೆಲೆ ಕಟ್ಟಲಾಗದ ಪರಮಾತ್ಮ ಅಮೂಲ್ಯನು, ಅನುಪಮಶೀಲನೂ ಆಗಿದ್ದಾನೆ. ಯಾವುದೇ ಲೌಕಿಕ ಪ್ರಮಾಣಗಳಿಂದ ಆತನನ್ನು ಅಳೆಯಲು ಬರುವುದಿಲ್ಲ. ಪಂಚೇಂದ್ರೀಯಗಳ ಅನುಭವಕ್ಕೂ ನಿಲುಕದ ಅಗೋಚರ ಆತ. ಆತ ತಾಯಿ-ತಂದೆಗಳ ಉದರದಲ್ಲಿ ಜನಿಸಿದವನಲ್ಲ. ಆತನಿಗೆ ಹುಟ್ಟು-ಸಾವುಗಳಿಲ್ಲ. ಇನ್ನೊಬ್ಬರನ್ನು ಆತ ಅವಲಂಬಿಸಿಲ್ಲ. ಆತ ಸ್ವತಂತ್ರಧೀರ.

ಕಾಮ-ಕ್ರೋದಾದಿಗಳಿಲ್ಲದ, ಮೋಹ-ಲೋಭಗಳಿಲ್ಲದ ನಿರ್ಮಲ, ನಿರ್ಮೋಹಿ, ಅಸಂಭವ, ಅಜಾತ ಆತ. ಇಂತಹ ದೇವರ ಹುಡುಕಾಟದಲ್ಲಿದ್ದ ಲಿಂಗಾನುಭಾವಿಗಳ ಸಂಗವೇ ಲೇಸು. ಬಯಲು ಆಲಯದೊಳಗೋ? ಆಲಯ ಬಯಲೊಳಗೋ? ಎಂಬಂತಿರುವ “ಬೆರಗು” ಎಂದು ಶರಣರು ತಿಳಿಸಿದ್ದಾರೆ. ಅನಿಷ್ಟಗಳೆಂಬವು ನಮ್ಮ ಅಂತರಂಗ, ಬಹಿರಂಗದಲ್ಲೂ ಇರಬಹುದು. ಮಠದೊಳಗೆ ಇರಬಹುದು, ಘಟದೊಳಗೂ ಇರಬಹುದು. ಇಲ್ಲವೇ ಸಮಾಜದೊಳಗೂ ಇರಬಹುದು. ಅವೆಲ್ಲವುಗಳನ್ನು ತೊಡೆದು ಹಾಕಿ ಸಕಲ ಜೀವಾತ್ಮರಿಗೆ ಇಷ್ಟವನ್ನು, ಒಳಿತನ್ನು, ಲೇಸನ್ನು ಪ್ರತಿಷ್ಠಾಪಿಸುವ, ಮನೋಬಲ, ಬುದ್ಧಿಬಲ, ಆತ್ಮಬಲವನ್ನು ಬೆಳೆಸುವುದು ಯಾವುದೋ ಅದುವೇ ಇಷ್ಟಲಿಂಗ.

ನಿರಾಕಾರವಾದ ದೇವರನ್ನು ಮನುಷ್ಯರ, ಪ್ರಾಣಿಗಳ ಆಕಾರದಲ್ಲಿ ಕಲ್ಪಿಸದೆ ವಿಶ್ವದ ಆಕಾರದಲ್ಲಿ ರೂಪಿಸಿ ಇಷ್ಟಲಿಂಗವನ್ನಾಗಿ ಕೊಟ್ಟವರು ವಿಶ್ವಗುರು ಬಸವಣ್ಣನವರು. ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಈ ಬಗೆಯ ದೇವರ ಸ್ವರೂಪವನ್ನು ಕಾಣಲು ಬುರುವುದಿಲ್ಲ. ನಿರಾಕಾರವನ್ನು ಆಕಾರಕ್ಕೆ ತಂದು ಪೂಜಿಸುವ ತಾತ್ವಿಕ, ಆತ್ಮ ಚೈತನ್ಯದ ಕುರುಹು ಇದು. ಇದನ್ನು ಪೂಜಿಸಿದರೆ ಅರುಹಿನ ಕಳೆ ಬರುತ್ತದೆ ಮಾತ್ರವಲ್ಲ; ಮಹಾಜ್ಞಾನದ ಬೆಳಗು ಸಹ ಪ್ರಾಪ್ತವಾಗಬಲ್ಲುದು. ಅಂತೆಯೇ ಜೇವರ್ಗಿಯ ಷಣ್ಮುಖ ಶಿವಯೋಗಿಗಳು “ಎನ್ನೊಳಗೆ ತನ್ನ ತೋರಿ ತನ್ನೊಳಗೆ ಎನ್ನನಿಂಬಿಟ್ಟುಕೊಂಡ ಇಷ್ಟಲಿಂಗಕ್ಕೆ ನಮೋ ನಮೋ” ಎಂದಿದ್ದಾರೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here