ಕೊರೊನಾ ಎಫೆಕ್ಟ್: ಮಾರಾಟವಾಗದ ಮಡಿಕೆಗಳು ಕುಂಬಾರ ಬದುಕು ಬೀದಿಗೆ

0
81

ಸುರಪುರ: ಜಗತ್ತಿನಲ್ಲಿ ಕರೊನಾ ವೈರಸ್ ತನ್ನ ರಣಕೇಕೆ ಮುಂದುವರೆಸಿದ್ದರಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳು ತಲ್ಲಣಗೊಂಡಿವೆ.ಅದರಂತೆ ಭಾರತ ದೇಶದಲ್ಲಿಯೂ ಕೊರೊನಾ ಹಾವಳಿ ಹೆಚ್ಚುತ್ತಿರುವುದರಿಂದ ದೇಶವೇ ಲಾಕ್‌ಡೌನ್ ಜಾರಿಗೊಳಗಾಗಿ ಸ್ತಬ್ಧವಾಗಿದೆ.ಕೇವಲ ದೇಶ ಮಾತ್ರ ಸ್ತಬ್ಧವಾಗದೆ ದೇಶದೊಳಗಣ ಎಲ್ಲಾ ವರ್ಗಗಳಾದ ಕೃಷಿಕ,ಕಾರ್ಮಿಕ,ಶ್ರಮಿಕ ಮತ್ತು ಉತ್ಪಾದನಾ ವಲಯಗಳು ಕಾರ್ಯ ನಿಲ್ಲಿಸಿ ದುಡಿಯುವವರಿಗೆ ಕೆಲಸವು ಇಲ್ಲ,ಬಡವರ ಬದುಕು ಸಂಕಟಕ್ಕೆ ದೂಡಿದೆ.

ಅದರಂತೆ ದೇಶದೊಳಗಣ ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲಿನ ಕುಂಬಾರ ಸಮುದಾಯದ ಜನರ ಬದುಕು ಬೀದಿಗೆ ಬಂದಿದೆ.ಕುಂಬಾರಿಕೆ ಮಾಡುವವರಿಗೆ ಮಡಿಕೆ ಕುಡಿಕೆಗಳು ಮಾರಟವಾದರೆ ಬದುಕು ಇಲ್ಲವಾದರೆ ಹೊಟ್ಟೆಗ ತಣ್ಣೀರ ಬಟ್ಟೆಯೆ ಗತಿ ಎಂಬಂತಿರುವ ಸಾವಿರಾರು ಕುಟುಂಬಗಳು ಇಂದು ತೀವ್ರವಾದ ಸಂಕಷ್ಟಕ್ಕೆ ಬಿದ್ದಿವೆ.
ನಗರದ ರಂಗಂಪೇಟೆಯಲ್ಲಿನ ಇಪ್ಪತ್ತಕ್ಕು ಹೆಚ್ಚಿನ ಕುಟುಂಬಗಳ ಆಧಾರ ಎಂದರೆ ಕುಂಬಾರಿಕೆ, ಈ ಕುಟುಂಬಗಳು ನಿತ್ಯವು ಮಡಿಕೆ ಕುಡಿಕೆಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿಯೆ ಜೀವನ ನಡೆಸುವಂತವುಗಳಾಗಿವೆ.

Contact Your\'s Advertisement; 9902492681

ಪ್ರತಿ ವರ್ಷ ಬೇಸಿಗೆ ಬಂತೆಂದರೆ ಲಕ್ಷಾಂತರ ರೂಪಾಯಿಗಳ ಸಾಲ ಮಾಡಿ ಹೂದರಾಬಾದ್, ಸೋಲಾಪುರ, ರಾಜಸ್ತಾನ ಮತ್ತಿತರೆಡೆಗಳಿಂದ ಹೊಸ ಹೊಸ ವಿನ್ಯಾಸದ ಮಡಿಕೆ,ಕೊಡ,ಹೂಜಿ,ತಟ್ಟೆ,ಗ್ಲಾಸು ಹೀಗೆ ನಾನಾ ರೀತಿಯ ಮಣ್ಣಿನ ವಸ್ತುಗಳನ್ನು ತಂದು ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ.

ಲಕ್ಷ ರೂಪಾಯಿ ಸಾಲ ತೊಗೊಂಡು ಬ್ಯಾಸಗಿ ಆದ ವ್ಯಾಪಾರ ಮಾಡಿ ಸಾಲ ಮುಟ್ಟಸಿದ್ರಾಯ್ತಂತ ಗಡಿಗಿ ಕೊಡ ತಂದೆ,ಈಗ ಕೊರೊನಾ ಬಂದಿದ್ರಿಂದ ಯಾರೂ ತೊಗೊಳ ಬರವಲ್ರು.ಎಲ್ಲಾ ಗಡಿಗಿ ಹಂಗೆ ಉಳದಾವ.ಸರಕಾರ ನಮಗ್ ಸಹಾಯ ಮಾಡಿಲ್ಲಾಂದ್ರ ಸಾಲಕ್ಕಾಗಿ ಸಾಯ್ಬೇಕಾಗ್ತದ.ನಮಗ್ ಸಹಾಯ ಮಾಡಲೆಂದು ಸರಕಾರಕ್ಕೆ ಮನವಿ ಮಾಡ್ತಿವಿ. – ವಿಶ್ವನಾಥ ಕುಂಬಾರ, ರಂಗಂಪೇಟೆ.

ಈ ವರ್ಷವು ಅದೇರೀತಿಯಾಗಿ ಬೇಸಿಗೆಯಲ್ಲಿ ಒಳ್ಳೆ ವ್ಯಾಪಾರ ಮಾಡಬಹುದೆಂದು ಯೋಚಿಸಿ ಸಾಲ ಮಾಡಿ ಮಣ್ಣಿನ ಮಡಿಕೆ ಮತ್ತಿತರೆ ವಸ್ತುಗಳನ್ನು ತಂದು ಸಂಗ್ರಹಿಸಿಕೊಂಡಿದ್ದು ಬೇಸಿಗೆ ಆರಂಭದಲ್ಲೆ ಕೊರೊನಾ ವೈರಸ್ ತನ್ನ ಕಬಂದ ಬಾಹು ಚಾಚುವ ಮೂಲಕ ಇಡೀ ದೇಶವೇ ಲಾಕ್‌ಡೌನ್ ಆಗುವಂತೆ ಮಾಡಿದೆ. ಸದ್ಯ ದೇಶದಲ್ಲಿ ಲಾಕ್‌ಡೌನ್ ಜಾರಿಯಿರುವುದರಿಂದ ಮಡಿಕೆಗಳನ್ನು ಕೊಳ್ಳಲು ಯಾರೂ ಮನೆಯಿಂದ ಹೊರಗೆ ಬರದಿರುವುದರಿಂದ ತಂದ ಲಕ್ಷಾಂತರ ರೂಪಾಯಿಯ ಮಡಿಕೆಗಳು ಹಾಗೆಯೆ ಉಳಿದಿದ್ದು ಕುಂಬಾರ ಜನತೆ ಈಗ ಕಣ್ಣೀರು ಹಾಕುವಂತಾಗಿದೆ. ಆದ್ದರಿಂದ ಸರಕಾರ ನಮ್ಮ ನೆರವಿಗೆ ಬರಬೇಕು ಇಲ್ಲವಾದರೆ ಸಾಲದ ಭಾದೆಯಿಂದ ನಮಗೆ ಸಾವೇ ಗತಿಯಾಗಲಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಕುಂಬಾರ ವೃತ್ತಿ ನಿರತ ಮಡಿವಾಳಪ್ಪ ಕುಂಬಾರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here