ಲಾಕ್‍ಡೌನ್ ಸಂಕಟ ಮರೆಸಿದ ಉದ್ಯೋಗ ಖಾತ್ರಿ

0
74

ವಾಡಿ: ಭಾರತದಲ್ಲಿ ಕೊರೊನಾ ಸೋಂಕು ಮೊದಲ ಬಲಿ ಪಡೆದದ್ದು ಕಲಬುರಗಿ ಜಿಲ್ಲೆಯಲ್ಲಿ. ಜಿಲ್ಲೆಯ ವಿವಿಧೆಡೆ ವ್ಯಾಪಿಸಿದ ಕೊರೊನಾ ಸೋಂಕು, ರಾಜ್ಯದ ಭೂಪಟದಲ್ಲಿ ಕೆಂಪು ವಲಯ ಎಂಬ ಅಪಖ್ಯಾತಿಯ ಪಟ್ಟಿಗೆ ಸೇರ್ಪಡೆಗೊಂಡಿತು. ಭದ್ರತೆ ಕಠಿಣಗೊಂಡು ಜನರು ಬದುಕಿನ ಬಿಕ್ಕಟ್ಟು ಎದುರಿಸುವಂತಾಯಿತು.

ಕಳೆದ ಒಂದು ತಿಂಗಳಿಂದ ಮನೆಯಲ್ಲಿಯೇ ಲಾಕ್ ಆಗಿರುವ ಜನರ ಜೀವನಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲಸ ಕೈಬಿಟ್ಟು ಗೃಹ ಬಂಧನಕ್ಕೆ ಜಾರಿ ಆದಾಯವಿಲ್ಲದೆ ತೀವ್ರ ತೊಂದರೆ ಅನುಭವಿಸಿದ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಹೊಟ್ಟೆಗೆ ಗಂಜಿ ಒದಗಿಸುತ್ತಿದೆ. ಬಂಜಾರಾ ಜನಸಮುದಾಯ ಹೆಚ್ಚು ವಾಸವಿರುವ ಗುಡ್ಡಗಾಡಿನ ಪ್ರದೇಶ ಯಾಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಕಾಮಗಾರಿ ಗರಿಗೆದರಿದ್ದು, ದುಡಿಯುವ ಕೈಗಳಿಗೆ ಕೆಲಸ ದಕ್ಕಿದೆ.

Contact Your\'s Advertisement; 9902492681

ಕೊರೊನಾ ಹೋರಾಟದಲ್ಲಿ ತೊಡಗಿರುವ ಗ್ರಾಪಂ ಪಿಡಿಒ ಪಾರ್ವತಿ ಪೂಜಾರಿ ಅವರು ಮುಂಬೈ ನಗರದಿಂದ ಬಂದಿದ್ದ ಗುಳೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಹೋಂ ಕ್ವಾರೆಂಟೈನ್ ಮಾಡಿದ್ದಾರೆ. ಇದರ ಮಧ್ಯೆಯೂ ರೈತರ ಹೊಲಗಳಲ್ಲಿ ಬದು ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಜಮೀನುಗಳಿಗೆ ನೀರು ಹರಿದು ಹೋಗಲು ನಾಲಾಗಳನ್ನು ನಿರ್ಮಿಸಲಾಗುತ್ತಿದೆ. 60ಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಲ್ಲಿ ತೊಡಗಿದ್ದಾರೆ. ದುಡಿಮೆಯಿಲ್ಲದೆ ಮನೆಯಲ್ಲಿ ಕುಳಿತ ಕೃಷಿ ಕೂಲಿಕಾರ್ಮಿಕರಿಗೆ ದಿನಗೂಲಿ ಒದಗಿಸುವ ಉದ್ದೇಶದಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದಾದ ನಂತರ ಕೆರೆ ಹೂಳೆತ್ತುವ ಕಾರ್ಯಕ್ಕೂ ಚಾಲನೆ ನೀಡಲಿದ್ದೇವೆ ಎಂದು ಯಾಗಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾರ್ವತಿ ಪೂಜಾರಿ ತಿಳಿಸಿದ್ದಾರೆ. ಮನೆಯಲ್ಲಿದ್ದು ಬೇಸರ ವ್ಯಕ್ತಪಡಿಸುತ್ತಿದ್ದ ಕಾರ್ಮಿಕರು ಉದ್ಯೋಗಖಾತ್ರಿಯಡಿ ದುಡಿಯಲು ಹೊರಟಿದ್ದು, ಕೊರೊನಾ ಸಂಕಟವೇ ಮರೆತುಹೋಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here