ಸುರಪುರ: ತಾಲೂಕಿನ ದೇವಿಕೆರಾ ಗ್ರಾಮದಲ್ಲಿನ ಒಂದೆ ಕುಟುಂಬದಲ್ಲಿ ನಾಲ್ಕು ಜನ ವಿಕಲಚೇತನರಿರುವ ಕುರಿತು ಕುಟುಂಬದ ಸಮಸ್ಯೆಯ ಕುರಿತು ಮಾದ್ಯಮದಲ್ಲಿ ಬಂದ ವರದಿಯನ್ನು ಗಮನಿಸಿದ್ದ ವೀರಶೈವ ಲಿಂಗಾಯತ ಯುವ ವೇದಿಕೆ ಸಂಘಟನೆಯು ವಿಕಲಚೇತನರ ಕುಟುಂಬಕ್ಕೆ ಭೇಟಿ ನೀಡಿ ನೆರವು ನೀಡುವ ಬಗ್ಗೆ ಭರವಸೆ ಮೂಡಿಸಿದ್ದರು.
ಅದರಂತೆ ವಿಕಲ ಚೇತನರ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿದ್ದ ಮನೆ ದುರಸ್ಥಿಗೆ ಮುಂದಾಗಿದ್ದ ಸಂಘಟನೆಯು ಕಳೆದ ಒಂದು ತಿಂಗಳಿನಿಂದ ಮನೆಯ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಿ ಮನೆಯ ದುರಸ್ಥಿ ಕಾರ್ಯ ಪೂರ್ಣಗೊಳಿಸಿ ಮಂಗಳವಾರ ಮನೆಯನ್ನು ಸಂತ್ರಸ್ತರ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಸಿ ಮನೆಯನ್ನು ವಹಿಸಿ ಕೊಡಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.ಮನೆಯ ಹಸ್ತಾಂತರ ಕಾರ್ಯಕ್ರಮದ ಆರಂಭದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ನಂತರ ಸಿದ್ದಗಂಗಾ ನಿಲಯ ಎಂದು ನಾಮಕರಣದ ಫಲಕಕ್ಕೆ ಪೂಜೆ ಸಲ್ಲಿಸಿ ಗೃಹ ಪ್ರವೇಶ ನಡೆಸಲಾಯಿತು.ಈ ಸಂದರ್ಭದಲ್ಲಿ ಸ್ವಾಮೀಜಿ ಮಾತನಾಡಿ,ವಿಕಲಚೇತನ ಸಮಸ್ಯೆಗೆ ಸ್ಪಂಧಿಸಿದ ವೀರಶೈವ ಲಿಂಗಾಯತ ಯುವ ವೇದಿಕೆಯು ಮನೆಯನ್ನು ದುರಸ್ಥಿಗೊಳಿಸಿ ಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ,ಮುಂದೆಯು ಸಂಘಟನೆಯಿಂದ ಇಂತಹ ಕಾರ್ಯ ನಡೆಯಲೆಂದು ಹಾರೈಸಿದರು.
ನಂತರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ವೀರಶೈವ ಲಿಂಗಾಯತ ಯುವ ವೇದಿಕೆ ನೇತೃತ್ವದಲ್ಲಿ ಅನೇಕ ಜನರ ಸಹಕಾರದಲ್ಲಿ ಇಂದು ಮನೆಯನ್ನು ದುರಸ್ಥಿಗೊಳಿಸಲಾಗಿದೆ,ಈ ಕುಟುಂಬಕ್ಕೆ ಮುಂದೆ ಇನ್ನೂ ಅವಶ್ಯಕವಾದ ನೆರವು ನಿಡೋಣ ಹಾಗು ಇದೇರೀತಿ ಯುವಕರು ಬೇರೆಯವರ ಸಮಸ್ಯೆಗಳಿಗು ಸ್ಪಂಧಿಸುವ ಮೂಲಕ ಆದರ್ಶ ಸಮಾಜ ನಿರ್ಮಿಸಿ ಮಾದರಿ ಸಂಘಟನೆಯಾಗಿ ಬೆಳೆಸೋಣ ಎಂದರು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ಸಿದ್ದಗಂಗಾ ಶ್ರೀಗಳ ಭಾವಚಿತ್ರ ವಿತರಿಸಲಾಯಿತು.ನಂತರ ಶ್ರೀಗಿರಿ ಮಠದಲ್ಲಿ ಮನೆ ದುರಸ್ಥಿಗೆ ಸಹಕರಿಸಿದವರಿಗೆ ವೇದಿಕೆ ವತಿಯಿಂದ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಿಎಸೈಗಳಾದ ಚೇತನ್,ಚಂದ್ರಶೇಖರ ನಾರಾಯಣಪುರ,ಶಾಂತರಾಜ ಬಾರಿ,ಶರಣಪ್ಪ ಕಲಕೇರಿ,ಗುರು ಮಣಿಕಂಠ,ಮಂಜುನಾಥ ಜಾಲಹಳ್ಳಿ,ಚಂದ್ರಶೇಖರ ಡೊಣೂರ,ಪ್ರದೀಪ ಕದರಾಪುರ,ಜಗದೀಶ ಪಾಟೀಲ,ಶಿವರಾಜ ಕಲಕೇರಿ,ಜಗದೀಶ ಪಾಟೀಲ,ರವಿ ಮೋರಟಗಿ,ಮಲ್ಲಿಕಾರ್ಜುನ ಚಾಮನಾಳ,ಅರವಿಂದ ಉಪ್ಪಿನ,ರಂಗನಗೌಡ ಪಾಟೀಲ,ಪ್ರಕಾಶ ಅಂಗಡಿ, ಸಂಗಮೇಶ ಚನ್ನಶೆಟ್ಟಿ,ಆನಂದ ಮಡ್ಡಿ,ರಾಘವೇಂದ್ರ ಸಗರ,ಮಲ್ಲು ಬಾದ್ಯಾಪುರ ಇತರರಿದ್ದರು.