ಶ್ರೀ ರಾಮಮಂದಿರ ಶಂಕುಸ್ಥಾಪನೆ ಹಿನ್ನೆಲೆ: ಕಲಬುರಗಿ ನಗರದಲ್ಲಿ ಮದ್ಯ ಮಾರಾಟ ನಿಷೇಧ

0
50
ಕಲಬುರಗಿ: ಬುಧವಾರ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಲಬುರಗಿ ನಗರದಲ್ಲಿ 2020ರ ಆಗಸ್ಟ್ 4 ರ ಮಧ್ಯಾಹ್ನ 3 ರಿಂದ ಆಗಸ್ಟ್ 6ರ ಬೆಳಗಿನ 6 ಗಂಟೆಯವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನವನ್ನು ನಿಷೇಧಿಸಿ ಕಲಬುರಗಿ ನಗರದ ಪೊಲೀಸ್ ಆಯುಕ್ತರಾದ ಎನ್. ಸತೀಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21(1) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 31ರ ಪ್ರಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ ಆದೇಶ ಹೊರಡಿಸಿದ್ದಾರೆ. ಕಲಬುರಗಿ ನಗರದಲ್ಲಿ ಮೇಲ್ಕಂಡ ದಿನಾಂಕಗಳಂದು ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳಲ್ಲಿ, ಬಾರ್ಗಳಲ್ಲಿ, ಕ್ಲಬ್ಗಳಲ್ಲಿ, ಮತ್ತು ಹೊಟೇಲ್ಗಳಲ್ಲಿ ಮದ್ಯ ಮಾರಾಟ ಹಾಗೂ ಮದ್ಯ ಸಾಗಾಟವನ್ನು ನಿಷೇಧಿಸಿ, ಮದ್ಯದ ಅಂಗಡಿ ಹಾಗೂ ಕೆ.ಎಸ್.ಬಿ.ಸಿ.ಎಲ್. ಡಿಪೋ, ಹೊಟೇಲ್ಗಳಲ್ಲಿರುವ ಬಾರ್ಗಳನ್ನು ಮುಚ್ಚಬೇಕು. ಎಲ್ಲ ಅಬಕಾರಿ ಸನ್ನದು ಅಂಗಡಿಗಳನ್ನು ಮುಚ್ಚಿ ಸೀಲ್ ಮಾಡಬೇಕು.
ವಲಯ ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಉಪವಿಭಾಗ ಅಬಕಾರಿ ಅಧೀಕ್ಷಕರು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(2) ರನ್ವಯ ಅವಶ್ಯಕತೆ ಕಂಡು ಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮಕೈಗೊಳ್ಳಬೇಕು. ಅಬಕಾರಿ ಉಪ-ಆಯುಕ್ತರು ಕಲಬುರಗಿ ನಗರ ಹಾಗೂ ಡಿಸಿಪಿ (ಕಾ-ಸು) ಕಲಬುರಗಿ ನಗರ ಹಾಗೂ ಅವರ ಅಧೀನ ಅಧಿಕಾರಿಗಳು, ಹೆಚ್ಚುವರಿ ಅಬಕಾರಿ ಅಧೀಕ್ಷಕರು ಕಲಬುರಗಿ ಇವರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು. ಈ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here