ಶರಣರ ಸ್ಮಾರಕ: ಉಡುತಡಿಯ ಅಕ್ಕಮಹಾದೇವಿ, ಗುಡ್ಡಾಪುರ ದಾನಮ್ಮ

0
173

ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವಿತ್ತು. ಅವರು ೧೨ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ೩೩ ವಚನಕಾರ್ತಿಯರ ಜೊತೆಗೆ ಅನೇಕ ಶಿವರಣೆಯರಿದ್ದರು. ಆದರೆ ೧೮-ರಿಂದ ೨೦ ಶಿವಶರಣೆಯರ ಸ್ಮಾರಕಗಳ ಮಾಹಿತಿಯನ್ನು ಮಾತ್ರ ನಾವು ಕಲೆ ಹಾಕಿದ್ದೇವೆ. ಈ ಸ್ಮಾರಕಗಳ ಹಿಂದೆ ಅವರ ಬದುಕಿನ ಅನೇಕ ಸಂಗತಿಗಳು ಅಡಗಿರುವುದನ್ನು ನಾವು ಗಮನಿಸಬಹುದು.

ಅಕ್ಕಮಹಾದೇವಿಯ ಸೌಂಧರ್ಯಕ್ಕೆ ಮನಸೋತ ಕೌಶಿಕ ಅರಸ, ಆಕೆ ವಿಧಿಸಿದ ಷರತ್ತುಗಳನ್ನು ಒಪ್ಪಿ ಮದುವೆಯಾದ. ಕೌಶಿಕ ಷರತ್ತುಗಳನ್ನು ಮುರಿದಿದ್ದರಿಂದ ತಾನುಟ್ಟ ಸೀರೆಯನ್ನು ಮುಖಕ್ಕೆ ಎಸೆದು ಕಂಬಳಿಯಂತಹ ಕೇಶಾಂಬರವನ್ನು ಹೊದ್ದು ಕಲ್ಯಾಣದೆಡೆಗೆ ನಡೆದ ಅಕ್ಕ, ಅಲ್ಲಿಂದ ಶ್ರೀಶೈಲಕ್ಕೆ ತೆರಳಿ ಅಲ್ಲಿಯೇ ಐಕ್ಯರಾಗುತ್ತಾರೆ. ಅಕ್ಕನ ಕುರಿತಾಗಿ ಹರಿಹರ ಮುಂತಾದವರು ಹೇಳುವ ಕಥೆ ಇದು.

Contact Your\'s Advertisement; 9902492681

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ (ಉಡುಗಣಿ) ಗ್ರಾಮದ ಮುಸ್ಲಿಂ ಸಮುದಾಯದವರ ವಶದಲ್ಲಿದ್ದ ಅಕ್ಕನ ಸ್ಥಳವನ್ನು ಮಾಜಿ ಉಪರಾಷ್ಟ್ರಪತಿ ಡಾ. ಬಿ.ಡಿ. ಜತ್ತಿಯವರು ಪ್ರಯತ್ನಿಸುತ್ತಾರೆ. ಈಗಲೂ ಕೋಟೆಯ ಪ್ರದೇಶ, ಸುತ್ತಲೂ ದಿಬ್ಬ ಮತ್ತು ಕಂದಕ ಇರುವುದನ್ನು ನಾವು ಕಾಣಬಹುದು. ಅಕ್ಕಮಹಾದೇವಿಯನ್ನು ಮೋಹಿಸಿ ಮದುವೆಯಾದ ಕೌಶಿಕ ಅಕ್ಕಮಹಾದೇವಿ ಇರಲು ವ್ಯವಸ್ಥೆ ಮಾಡಿದ ಸಣ್ಣ ಅರಮನೆ ಇದಾಗಿತ್ತು ಎಂದು ಹೇಳಲಾಗುತ್ತಿದೆ. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ ಅವರು ಸರ್ಕಾರದಿಂದ ೧೦ ಎಕರೆ ಜಮೀನು ಪಡೆದು ಹಲವರ ಸಹಾಯದಿಂದ ಈಗ ಅಲ್ಲೊಂದು ಅತ್ಯುತ್ತಮ ಸ್ಮಾರಕ ನಿರ್ಮಿಸಿದ್ದಾರೆ.

ಮೊದಲಿದ್ದ ಅಕ್ಕಮಹಾದೇವಿಯ ಹಳೆ ಗುಡಿಯನ್ನು ಹಾಗೆಯೇ ಉಳಿಸಿಕೊಂಡು ಅಲ್ಲೊಂದು ಅಕ್ಕಮಹಾದೇವಿ ಮೂರ್ತಿ ಸ್ಥಾಪಿಸಿದ್ದಾರೆ. ದಿಬ್ಬದ ಮೇಲೆ ಮತ್ತೊಂದು ಅಕ್ಕನ ಕಂಚಿನ ಮೂರ್ತಿ, ಉದ್ಯಾನ ಇತ್ಯಾದಿಗಳನ್ನು ನಿರ್ಮಿಸಿದ್ದಾರೆ. ಅರಮನೆಯ ಸುತ್ತಲೂ ಕಂದಕ, ಊರ ಹೊರಗೆ ಪರದೇಶಿ ಮಲ್ಲಿಕಾರ್ಜುನ ದೇವಾಲಯ, ಒಳಗಿನ ಗರ್ಭಗುಡಿಯ ಮಗ್ಗುಲಲ್ಲೇ ಅಕ್ಕಮಹಾದೇವಿ ಗುಡಿ ಇರುವುದನ್ನು ಕಾಣಬಹುದು.

ಉಡುತಡಿಯಿಂದ ಪಶ್ಚಿಮ ದಿಕ್ಕಿಗೆ ೨ ಕಿ.ಮೀ. ದೂರದಲ್ಲಿ ಹಿರೇಕಸವಿ ಎಂಬ ಗ್ರಾಮವಿದೆ. ಕೌಶಿಕನ ಅರಮನೆ ಇಲ್ಲಿಯೇ ಇತ್ತು. ಉಡತಡಿಗೆ ಹೋಗಲು ಇಲ್ಲಿಂದ ಸುರಂಗ ಮಾರ್ಗವಿತ್ತು ಎಂದು ಅಲ್ಲಿನ ಜನ ಹೇಳುತ್ತಾರೆ. ಅವರ ಮಾತುಗಳಿಗೆ ಪೂರಕವೆಂಬಂತೆ ಲಿಂಗಮುದ್ರೆಯ ಕಲ್ಲುಗಳು ಹೊಲದಲ್ಲಿ ದೊರೆಯುತ್ತವೆ. ಅಲ್ಲೊಂದು ಹಿರೇಮಠವಿದೆ. ಕೌಶಿಕ ಬಳಸಿದ ಲಿಂಗಮುದ್ರೆಯುಳ್ಳ ಖಡ್ಗ, ಬಟ್ಟಲು ಇಲ್ಲಿ ಈಗಲೂ ಕಾಣಸಿಗುತ್ತವೆ. ಮಠದ ಎದುರಿಗೆ ಸಿದ್ರಾಮೇಶ್ವರ ದೇವಾಲಯವಿದೆ.

ಅಕ್ಕಮಹಾದೇವಿ ಕಲಬುರಗಿ ಜಿಲ್ಲೆಯ ಮಹಾಗಾಂವ ಪ್ರದೇಶದಲ್ಲಿ ಒಂದು ದಿನ ವಸತಿಯಿದ್ದಳು. ಎನ್ನುವುದಕ್ಕೆ ಈಗಲೂ ಅಲ್ಲಿ ಕುರುಹುಗಳಿರುವುದನ್ನು ನೋಡಬಹುದು. ಅಲ್ಲೊಂದು ವಿರಕ್ತ ಮಠವಿದೆ. ಪಕ್ಕದಲ್ಲಿರುವ ಗಂಡೋರಿ ನಾಲಾದ ಎದುರಿಗೆ ನಿಂತರೆ ಬೆಣ್ಣೆ ತೊರೆ ಹರಿಯುವುದು ಕಾಣುತ್ತವೆ. ನಾಲೆ ಮತ್ತು ತೊರೆ ಕೂಡುವಲ್ಲಿ ಸಂಗಮೇಶ್ವರ ಲಿಂಗ ಕಾಣಬಹುದು. ಅದರ ಮಗ್ಗುಲ್ಲಿಯೇ ಅಕ್ಕನ ನೆಲೆ ಸಿಗುತ್ತದೆ. ಅಕ್ಕಮಹಾದೇವಿಯ ಕರಿ ಕಲ್ಲಿನ ಮೂರ್ತಿ ಅಲ್ಲಿದೆ. ಮಲ್ಲಿಕಾರ್ಜುನ ದೇವಾಲಯ, ರೇವಣಸಿದ್ಧರ ದೇವಾಲಯ ಕೂಡ ಇಲ್ಲಿದೆ. ಅಕ್ಕ ಕಲ್ಯಾಣದ ಹೊರಟಿರುವಾಗ ಹಳ್ಳಿಖೇಡದ ಕಿನ್ನರಿ ಬೊಮ್ಮಯ್ಯ ಸ್ವಾಗತಿಸಿದ ಎಂಬ ಗುರುತು ಕೂಡ ಇದೆ.

ಬಸವಕಲ್ಯಾಣದ ಬಂದವರ (ಬಾಂಧವರ) ಓಣಿಯಲ್ಲಿ ಅಕ್ಕಮಹಾದೇವಿಯ ಗವಿ ಇದೆ. ನಾರಾಯಣಪುರದ ಮಠ ಈ ಸ್ಮಾರಕಗಳನ್ನು ಬಿಟ್ಟರೆ ಕರ್ನಾಟಕದ ಯಾವ ಕಡೆಯೂ ಅಕ್ಕನ ಸ್ಮಾರಕಗಳು ಕಾಣಿಸುವುದಿಲ್ಲ. ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಲ್ಲಿಕಾರ್ಜುನ ದೇವಾಲಯದ ಪಕ್ಕದಲ್ಲಿ ಅಕ್ಕನ ಹಳೆಯ ಶಿಲಾ ಮೂರ್ತಿ ಇದೆ. ಅದೇ ಪರಿಸರದಲ್ಲಿ ಇತ್ತೀಚಿಗೆ ಅಕ್ಕನ ಕಂಚಿನ ಪ್ರತಿಮೆ ಕೂಡ ನಿಲ್ಲಿಸಲಾಗಿದೆ. ಅಕ್ಕಮಹಾದೇವಿ ಪೂಜೆ ಮಾಡಿದ, ತಪ್ಪಸ್ಸಿಗೆ ಕುಳಿತ ಅಕ್ಕಮಹಾದೇವಿ ಗವಿಯಿದ್ದು, ಕೃಷ್ಣಾ ನದಿಯ ಮೂಲಕ ೧೬ ಕಿ.ಮೀ. ತೆಪ್ಪದಲ್ಲಿ ಹೋಗಬೇಕು. ಗವಿಯಲ್ಲಿ ಹೋದಾಗ ದಾರಿ ಇಕ್ಕಟ್ಟಾಗುತ್ತದೆ. ಎಡಗಡೆ ಶಿವಲಿಂಗ ಮೂರ್ತಿಯಿದೆ. ಅಕ್ಕ ಐಕ್ಯವಾದ ಕದಳಿ ಗವಿಯಲ್ಲಿ ಎರಡು ಅಕ್ಕಮಹಾದೇವಿ ಮೂರ್ತಿಗಳಿವೆ. ಈ ಮೂರ್ತಿಗಳ ಹಿಂದಿರುವ ಗೋಡೆಯ ಆಕಡೆ ಅಕ್ಕನ ಐಕ್ಯ ಸ್ಥಳ ಎಂದು ತೋರಿತ್ತಾರೆ.

ದಾನಮ್ಮ: ಉಮ್ರಾಣಿ ಗುಡ್ಡಾಪುರದ ದಾನಮ್ಮ ವಿಶ್ವಕರ್ಮ ಕುಟುಂಬದಲ್ಲಿ ಜನಿಸಿದ ಈ ಮಗು ಹಾಲು ಕುಡಿಯುತ್ತಿರಲಿಲ್ಲ. ಯಾರೋ ಒಬ್ಬ ಜಂಗಮ ಬಂದು ಲಿಂಗದೀಕ್ಷೆ ನೀಡಿದ ನಂತರ ಹಾಲು ಕುಡಿಯಲು ಪ್ರಾರಂಭಿಸಿದಳು. ಹೀಗಾಗಿ ಅವಳಿಗೆ ಲಿಂಗಮ್ಮ ಎಂಬ ಹೆಸರಿಟ್ಟರು ಎಂದು ಹೇಳಲಾಗುತ್ತಿದ್ದು, ಬಸವಣ್ಣನವರ ಕೀರ್ತಿವಾರ್ತೆ ಕೇಳಿದ ಈಕೆ ತನ್ನ ಸ್ನೇಹಿತೆ ಗಿರಿಜೆಗೆ ತಾ ಪೂಜಿಸುವ ಲಿಂಗ ಕೊಟ್ಟು ಕಲ್ಯಾಣದ ಕಡೆಗೆ ಹೋದಳು. ಮನೆಯಲ್ಲಿ ಹೇಳಿ ಬಂದಿಲ್ಲ ಎಂಬುದು ನೆನಪಾಗಿ ಸಂಖ ಎಂಬ ಊರಿನ ಶಿವಭಕ್ತ ಸೋಮೇಶ್ವರ ಎಂಬುವವರನ್ನು ಮದುವೆಯಾಗುತ್ತಾಳೆ. ಈಕೆ ಬಸವತತ್ವವನ್ನು ವ್ಯಾಪಕವಾಗಿ ಪ್ರಚಾರ ಮಾಡಿದ ಶ್ರೇಷ್ಠ ಶಿವಶರಣೆ ಎಂಬುದಕ್ಕೆ ಮಹಾರಾಷ್ಟ್ರದ ಗುಡ್ಡಾಪುರ, ಆಂಧ್ರಪ್ರದೇಶದ ಆಲಂಪುರ, ಕರ್ನಾಟಕದ ನಾರಾಯಣಪುರಗಳಲ್ಲಿ ಇವರ ಹೆಸರಿನ ಸ್ಮಾರಕಗಳೇ ಸಾಕ್ಷಿಯಾಗಿವೆ.

ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here