ಬಸವಣ್ಣ: ಶರಣ ಸಂಘಟನೆ-ರಾಚನಿಕ ಸ್ವರೂಪ

0
46

ಪರುಷ ಕಟ್ಟೆಯ ಮೂಲಕ ಜನಸಮಾನ್ಯರ ಬದುಕಿಗೆ ನೆರವಾದ ಬಸವಣ್ಣನವರು ಮಹಾಮನೆ ಮೂಲಕ ಶಿವಶರಣರನ್ನು ಕೂಡಿಸಿಕೊಂಡು ಅವರೊಂದಿಗೆ ಶಿವಾನುಭವದ ಚರ್ಚೆ ಮಾಡಿ ದಾಸೋಹ ವ್ಯವಸ್ಥೆ ಮಾಡಿ ಬೀಳ್ಕೊಡುವ ಕೆಲಸ ಮಾಡಿದರು. ಭಕ್ತಿಗೆ ಹೊಸ ನೆಲೆಗಟ್ಟು ಒದಗಿಸಿದರು. ನಂತರ ಲಿಂಗದ ವಿಚಾರ, ಪರಿಕಲ್ಪನೆಯನ್ನು ಹರಿಬಿಟ್ಟರು. ಅಂಗದ ಮೇಲೆ ಲಿಂಗವುಳ್ಳವರು ಸಂಗಮನಾಥನಿಗೆ ಸಮಾನ, ಜಂಗಮ ಮುಖದಲ್ಲಿ ಲಿಂಗವನರಿಸು ಎಂದು ಬೋಧಿಸಿದರು. ದಾಸೋಹ ಮತ್ತು ಲಿಂಗಾರ್ಚನೆ ಎಂಬ ಈ ಎರಡು ತತ್ವ ಇಟ್ಟುಕೊಂಡು ಸಂಘಟನೆಗೆ ತೊಡಗಿದರು. ಶರಣರ ಈ ಚರ್ಚೆ, ದಾಸೋಹ, ಲಿಂಗದೀಕ್ಷೆ ಇತ್ಯಾದಿ ಕೆಲಸಗಳನ್ನು ಕಂಡ ಕೆಲ ಜನ ಇದನ್ನು ಟೀಕಿಸಿದರು. ಅವರ ಟೀಕೆಗಳಿಂದ ಶರಣ ಸಂಘಟನೆ ಇನ್ನಷ್ಟು ಬಿಗಿಗೊಂಡಿತು. ತಮ್ಮ ಸಂಘಟನೆ ಬಗ್ಗೆ ಟೀಕೆ ವ್ಯಕ್ತವಾದಾಗ,

ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ,
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ತಲೆದಂಡ! ತಲೆದಂಡ!
ಕೂಡಲಸಂಗಮದೇವ
ಭಕ್ತರಲ್ಲಿ ಕುಲವನರಸಿದಡೆ,
ನಿಮ್ಮ ರಾಣಿವಾಸದಾಣೆ”

Contact Your\'s Advertisement; 9902492681

ಎಂದು ಬಸವಣ್ಣನವರೆ ಮುಂದೆ ಬಂದು ತಮ್ಮ ಸಂಘಟನೆಯ ಬಗ್ಗೆ ಸಮರ್ಥನೆ ನೀಡುತ್ತಾರೆ. “ಆವ ಕುಲವಾದಡೇನು? ಶಿವಲಿಂಗವಿದ್ದವನೇ ಕುಲಜನು, ಕುಲವನರಸುವರೆ ಶರಣರಲ್ಲಿ ಜಾತಿ ಸಂಕರವಾದ ಬಳಿಕ” ಎಂದು ಪ್ರತ್ಯುತ್ತರ ನೀಡಿದರು. ಹೀಗೆ ತನ್ನ ಅನುಯಾಯಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿರುವುದರಿಂದ ಬಸವಣ್ಣನವರ ಮೇಲೆ ಶರಣರಿಗೆ ವಿಶೇಷ ಗೌರವ ಮೂಡಿತು. ಎಲ್ಲ ಜಾತಿ, ಜನಾಂಗದವರನ್ನು ಒಂದೇ ತೆಕ್ಕೆಯಲ್ಲಿ ತೆಗೆದುಕೊಳ್ಳುವ ಬಸವಣ್ಣನವರ ಕ್ರಮದಿಂದ ಕೆಲವರು ಸಿಟ್ಟಾದರು. ಇದನ್ನು ಕಂಡ ಬಸವಣ್ಣನವರು “ಆರು ಮುನಿದು ನಮ್ಮನೇನ ಮಾಡುವರು…. ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯಲ್ಲಿಕ್ಕಬೇಡ ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ? ನಮಗೆ ನಮ್ಮ ಕೂಡಲಸಂಗಮನುಳ್ಳನ್ನಕ್ಕ” ಎಂದು ಸಿಡಿಮಿಡಿಗೊಂಡರು.

ನಮ್ಮ ಪ್ರಭುದೇವರ ಮುಖ್ಯವಾದ ಏಳುನೂರೆಪ್ಪತ್ತು
ಅಮರಗಣಂಗಳು
ಅಸಂಖ್ಯಾತ ಪುರಾತನರು, ಪ್ರಮಥಗಣಂಗಳು
ಕೇಳಿ ಹೇಳಿ ಕೊಂಡಾಡಿದ ಕಾರಣ
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಸರ್ವಸುಖವ ಸೊರೆಗೊಂಡು ಸ್ವಯಂಲಿಂಗವಾದರು.

ಚೆನ್ನಬಸವಣ್ಣನವರ ಈ ವಚನವು ಶರಣ ಸಂಘಟನೆಯಲ್ಲಿ ಯಾರ‍್ಯಾರಿದ್ದರು? ಅದರ ಕಾರ್ಯ ಚಟುವಟಿಕೆಗಳೇನು? ಸಂಘಟನೆಯ ಲಕ್ಷಣ, ಸ್ವರೂಪಗಳೇನು? ಎಂಬುದನ್ನು ತಿಳಿಸಿಕೊಡುತ್ತದೆ. ಅಸಂಖ್ಯಾತ ಪುರಾತನರು, ಪ್ರಮಥಗಣಂಗಳು, ಅಮರಗಣಂಗಳು ಈ ಮೂರು ಗುಂಪುಗಳು ಒಂದೆಡೆ ಕುಳಿತು ಚರ್ಚೆ ಮಾಡಿ ಮನಸಾಪೂರ್ವಕವಾಗಿ ಒಪ್ಪಿ ತತ್ವ ಪ್ರಚಾರ ಮತ್ತು ಪ್ರಸಾರ ಮಾಡಿದವರು. ಎಲ್ಲರ ಜೊತೆ ಚರ್ಚೆ ಮಾಡಿದ ಬಳಿಕವೇ ಅಂತಿಮ ನಿರ್ಧಾರ ರ್ಕಯೊಳ್ಳುತ್ತಿದ್ದ ಬಸವಣ್ಣನವರು ಆ ಸಂಘಟನೆಯ ನಾಯಕರೆನಿಸಿಕೊಂಡರು.

“ನಿಮ್ಮ ಸುಖ ದುಃಖದ ಪ್ರಮಥರು, ಸಹಿತವಾಗಿ ಏಳನೂರೆಪ್ಪತ್ತು, ಅಮರಗಣಂಗಳು ಮತ್ತೆ ಅವಧಿಗೊಳಗಲ್ಲದ ಸಕಲ ಪ್ರಮಥರು ಬಂದರಲ್ಲ” ಎನ್ನುವ ಮೋಳಿಗೆ ಮಾರಯ್ಯನವರ ವಚನವು ಭಕ್ತ, ಪ್ರಮಥ, ಅಮರಗಣಂಗಳ ಕಾರ್ಯವಿಧಾನವನ್ನು ವಿವರಿಸುವಂತಿದೆ.

೧. ಭಕ್ತಗಣ/ಶರಣಗಣ/ಮಹಾಗಣ/ಗಣತಿಂಥಣಿ ಎಂದು ಕರೆಯಲ್ಪಡುವ ಭಕ್ತರು, ಸಮಾಜ, ಲಿಂಗತತ್ವ ಹಿಡಿದು, ದಾಸೋಹ ತತ್ವ ಪಾಲಿಸುವುದಾಗಿತ್ತು. ಇವರಿಗೆ ಯಾವುದೇ ಜವಾಬ್ದಾರಿ ಇರುವುದಿಲ್ಲ. ಇಂಥವರು ಆಗ ಅಸಂಖ್ಯಾತರಾಗಿದ್ದರು. ಅಗಣಿತರಾಗಿದ್ದರು.

೨. ಪ್ರಮಥಗಣ= ರುದ್ರಗಣ: ಜನರ ಸುಖ, ದುಃಖಗಳಿಗೆ ಸ್ಪಂದಿಸುವ ಮತ್ತು ಅದರಲ್ಲಿ ಭಾಗಿಯಾಗುವರಾಗಿರುತ್ತಾರೆ. ಸಂಘಟನೆಯ ಹಾಗೂ ಹೋಗುಗಳಲ್ಲಿ ಇವರದು ಪ್ರಮುಖ ಪಾತ್ರವಿರುತ್ತದೆ. ಅಹಮಿಕೆ ಕಳೆದುಕೊಂಡವರು, ಜನಸಾಮಾನ್ಯರು ಇವರನ್ನು ಒಪ್ಪಿದವರು, ಭಕ್ತಗಣಗಳ ಮನೆಯಲ್ಲಿ ಊಟ ಮಾಡಬೇಕು. ಆಗ ಇಂತಹ ೧,೯೬,೦೦೦ ಚರ ಜಂಗಮರಿದ್ದರು.

೩. ಅಮರಗಣ= ಶರಣರೆ ಹೇಳುವಂತೆ ಆಗ ೭೭೦ ಅಮರಗಣಂಗಳಿದ್ದರು. ಪ್ರಮಥರ ಸಹಿತವಾಗಿ ಅಮರಗಣಂಗಳ ಮೇಲೂ ಸಂಘಟನೆಯ ಭಾರ, ಜವಾಬ್ದಾರಿ ಇತ್ತು. ತತ್ವಗಳನ್ನು ವ್ರತದಂತೆ ಆಚರಿಸಬೇಕು. ಜೀವ ಕಳೆದುಕೊಳ್ಳುವ ತಪ್ಪು ಮಾಡಬಾರದು. ಗುರು ಲಿಂಗವ ತೋರಿದವರು, ಮನದ ವ್ಯಾಕುಲತೆ ನಿಲಿಸುವವರು. ಅಂತರಂಗ-ಬಹಿರಂಗ ತಾನಾಗಿರುವವರು. ತಾತ್ವಿಕ ನಿರ್ಣಯ ಕೈಗೊಳ್ಳುವವರಾಗಿದ್ದರು ಇವರು.

ಹೀಗೆ ಮೂರು ಹಂತದಲ್ಲಿ ಸಂಘಟನೆಯ ಜವಾಬ್ದಾರಿ ಹೊತ್ತ ಶರಣರು, ಕಾಯಕ-ದಾಸೋಹ ಮಾಡುತ್ತ ಸಮ ಸಮಾಜ ಮತ್ತು ಸುಖಿ ಸಮಾಜದ ನಿರ್ಮಾಣಕ್ಕೆ ಕಾರಣರಾದರು. ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು…. ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಿ ತೊಳಗಿ ಬೆಳಗುತ್ತಿದ್ದರು ಎಂಬ ಅಲ್ಲಮನ ವಚನವು ಬಸವ ಚಳವಳಿಯ ಪರಿಣಾಮವನ್ನು ವಿವರಿಸುವಂತಿದೆ.

ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here