ಪ್ರೊ. ನಂಜುಂಡಸ್ವಾಮಿ ಪರಿಚಯಕ್ಕೆ ಬಂದುದು ಹೀಗೆ….

0
24

ನನಗೆ ಬಸವಣ್ಣನವರ ವಿಚಾರಗಳ ನಂಟು ಇರುವುದರಿಂದಲೇ ಪ್ರೊ. ಎಂ.ಡಿ. ನಂಜುಂಡಸ್ವಮಿ ಅವರ ಪರಿಚಯ ಬಂದು ಅದು ಆತ್ಮೀಯ ಗೆಳೆತನಕ್ಕೆ ತಿರುಗಿದ್ದು ಕೂಡ ಇಂಥದೇ, ಆದರೆ ತುಸು ಭಿನ್ನ ಬಗೆಯ ಕಾರಣದಿಂದಾಗಿದು ಎಮರ್ಜೆನ್ಸಿ ಕಾಲವಿತ್ತು. ಆ ಎಮರರ್ಜೆನ್ಸಿ ಅನ್ನು ವಿನೋಬಾ ಭಾವೆ ಅವರು “ಅನುಶಾಸನ ಪರ್ವ ಎಂದು ಹೊಗಳಿದ್ದರು. ಅದು ನನಗೆ ತುಂಬಾ ವಿಪರೀತ ಎನಿಸಿತ್ತು. ಅಲ್ಲಿಯವರೆಗೆ ವಿನೋಬಾ ಭಾವೆ ಅವರ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದೆ.

ಏಕೆಂದರೆ ಆಗ ಅವರು ಗಾಂಧೀಜಿಯವರ ಸಮಕಾಲೀನರು ಮಾತ್ರವಲ್ಲ; ಅವರ ಪ್ರಾಮಾಣಿಕ ಅನುಯಾಯಿಗಳು ಎಂಬುದಾಗಿ ಕಾಣಬರುತ್ತಿದ್ದರು. ಅಂಥವರು ತುರ್ತು ಪರಿಸ್ಥಿತಿಯನ್ನು ಅನುಶಾಸನಪರ್ವ ಎಂದು ಬಣ್ಣಿಸುವುದೇ? ಅಸಹ್ಯವೆನಿಸಿತು. “ಇವರು ಮೊದಲಿನ ವಿನೋಬಾ ಅಲ್ಲ ಬಿಡಿ! ಇವರು ಯೋರೋ ಇನ್ನೊಬ್ಬರು!! ಎಂದೆನಿಸಿತು. ತಕ್ಷಣವೆ ಈ ವಿಚಾರಗಳನ್ನು ವಿಸ್ತರಿಸಿ ಪ್ರಜಾವಾಣಿ ದಿನಪತ್ರಿಕೆಗೆ ಕಳಿಸಿದೆ.

Contact Your\'s Advertisement; 9902492681

ಪ್ರಜಾವಾಣಿಯವರು ಅದನ್ನು ಅಚ್ಚು ಮಾಡಿದರು. ನಿಜವಾಗಿ ಆಗ ಎಲ್ಲರೂ ಆಶ್ಚರ್ಯಪಟ್ಟರು. ಏಕೆಂದರೆ ಭಾರತದ ಎಲ್ಲ ಪತ್ರಿಕೆಗಳ ಮೇಲೂ ಆಗ ದಿಗ್ಭಂಧನ ಹೇರಲಾಗಿತ್ತು. ಅಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬರೆಯುವುದಾಗಲಿ, ಮಾತನಾಡುವುದಾಗಲಿ ಅಪರಾಧವಾಗಿತ್ತು. ಪ್ರಜಾವಾಣಿಯಲ್ಲಿ ಅದು ಹೇಗೋ ಪ್ರಕಟಗೊಂಡ ನನ್ನ ಚಿಕ್ಕ ಲೇಖನವನ್ನು ನೋಡಿಯೇ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ನನಗೊಂದು ಕಾಗದ ಬರೆದು “ನಾನು ಇಂಥ ದಿನ ಗುಲ್ಬರ್ಗಕ್ಕೆ ಬರುತ್ತೇನೆ. ಗುಲ್ಬರ್ಗದ ಮೋಹನ್ ಲಾಡ್ಜ್‌ನಲ್ಲಿ ಇಂಥದ್ದೊಂದು ರೂಮನ್ನು ಗೊತ್ತುಮಡಿದ್ದೇನೆ. ತಾವು ಇಷ್ಟೊತ್ತಿಗೆ ಬಂದು ನನ್ನನ್ನು ಅಲ್ಲಿ ಕಾಣಬೇಕು. ತುಂಬಾ ಮಹತ್ವದ ಕೆಲಸವಿದೆ” ಎಂದು ತಿಳಿಸಿದ್ದರು.

ಅವರು ತಿಳಿಸಿದಂತೆ ನಾನು ಹೋಗಿ ಅವರನ್ನು ಕಂಡೆ, ಅನ್ನೊದಕ್ಕಿಂತ ಅವರೇ ನನ್ನನ್ನು ಹುಡುಕಿಕೊಂಡು ಬಂದು ನನ್ನನ್ನು ಕಂಡರು. ಅದನ್ನು ಇನ್ನೊಮ್ಮೆ ಯಾವೊತ್ತಾದರೂ ಬರೆಯುತ್ತೇನೆ. ಆವೋತ್ತು ಇಡೀ ರಾತ್ರಿ ನಾವಿಬ್ಬರೆ ಕುಳಿತು ಪರಸ್ಪರ ಎಷ್ಟೊಂದು ವಿಚಾರ ವಿನಿಮಯ ಮಾಡಿಕೊಂಡೆವೆಂದರೆ ಲೆಕ್ಕಕ್ಕಿಲ್ಲ. ಬಸವಾದಿ ಶರಣರ ವಿಚಾರಧಾರೆಯ ಬಗ್ಗೆ ಅವರಿಗೆ ಖಚಿತ ತಿಳಿವಳಿಕೆ ಮತ್ತು ಗೌರವಾದರಗಳಿದ್ದುದು ತಿಳಿದು ಬಂತು. ಕರ್ನಾಟಕ ಮತ್ತು ಭಾರತ ಮಾತ್ರವಲ್ಲ ಇಡೀ ಜಗತ್ತಿನಲ್ಲಿಯೇ ಅದೊಂದು ಅಚ್ಚುಕಟ್ಟಾದ ಅಪೂರ್ವ ಚಳವಳಿಯಾಗಿತ್ತು ಎಂಬ ಅಭಿಪ್ರಾಯವನ್ನು ಅವರು ನನ್ನ ಮುಂದೆ ಇಟ್ಟರು. ಅಂದು ಅವರು ಒಬ್ಬ ಅಪ್ಪಟ ಬಸವವಾದಿಯಾಗಿದ್ದುದು ಗೊತ್ತಾಗಿ ನನಗೆ ತುಂಬಾ ಖುಷಿಯಾಯಿತು.

ಹೀಗೆ “ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬಂತೆ ತಾನಾಗಿಯೇ ತೊಡರಿಕೊಂಡ ಪ್ರೊ. ನಂಜುಂಡಸ್ವಾಮಿಯವರ ಗೆಳೆತನ ನನ್ನನ್ನು ಮತ್ತಷ್ಟು ನೇರಗೊಳಿಸಿತು.ಧೀರಗೊಳಿಸಿತು. ನನ್ನನ್ನು ಸಂಪೂರ್ಣವಾಗಿ ರೈತ ಚಳವಳಿಯಲ್ಲಿ ತೊಡಗಿಸಿಕೊಂಡೆ. ಆಗ ನನಗೆ ಬಸವ ಚಳವಳಿ ಮತ್ತು ರೈತ ಚಳವಳಿ ಬೇರೆ ಅಲ್ಲ ಅನ್ನಿಸಲಿಲ್ಲ. ಹೀಗಗಿ ಒಂದೆಡೆ ಊರುರು ಹಾಗೂ ತಾಲ್ಲೂಕು ತಾಲ್ಲೂಕು ತಿರುಗಿ ರೈತರನ್ನು ಸಂಘಟಿಸಲು ಶುರು ಮಾಡಿದೆ. ಇನ್ನೊಂದೆಡೆ ಅಷ್ಟೇ ಬೀಸಾಗಿ ಹೈದರಾಬಾದ್ ಕರ್ನಾಟಕವನ್ನೆಲ್ಲ ಸುತ್ತಾಡಿ ಲಂಕೇಶ ಪತ್ರಿಕೆಗೆ ಬರೆಯುತ್ತಿದ್ದೆ. ನನ್ನ ಜೀವಿತದ ಅವಧಿಯಲ್ಲಿಯೇ ನನಗೆ ಮಹತ್ವದ ಮತ್ತೊಬ್ಬ ವ್ಯಕ್ತಿಯಾದ ಎನ್.ಡಿ. ಸುಂದರೇಶ ಅವರ ಗೆಳೆತನ ಬಂತು. ಅದರಿಂದ ಬಸವಣ್ಣ ನನ್ನೊಳUನಿನ್ನಷ್ಟು ಮತ್ತಷ್ಟು ಫಳ ಫಳ ಹೊಳೆಯತೊಡಗಿದರು. ಸುಂದರೇಶ ಬಗ್ಗೆ ಬರೆಯುತ್ತ ಹೋದರೆ ಅದು ಮತ್ತೊಂದು ಅಧ್ಯಾಯವಾಗಿ ರೈತ ಚಳವಳಿಯ ಒಡಲೇ ತೆರೆದುಕೊಳ್ಳುತ್ತದೆ. ಅದನ್ನು ಇನ್ನೊಮ್ಮೆ ಯಾವೊತ್ತಾದರೂ ಬರೆಯುತ್ತೇನೆ.

ಈ ನಡುವೆಯೇ ಮಗದೊಬ್ಬ ವಿಸ್ಮಯಿ ವ್ಯಕ್ತಿತ್ವದ ಪೂರ್ಣಚಂದ್ರ ತೇಜಸ್ವಿ ಪರಿಚಯಕ್ಕೆ ಬಂದರು. ಹತ್ತಿರ ಆದರು. ಅನೋನ್ಯವೆನಿಸಿದರು. ಎರಡು ಮೂರು ಸಲ ನಾನವರ ಮೂಡಗೆರೆಯ ಮನೆಗೆ ಹೋಗಿದ್ದುಂಟು. ಒಂದು ರಾತ್ರಿಯಂತೂ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರೊಂದಿಗೆ ಚರ್ಚೆ ನಡೆಸಿದ್ದಂತೆ ಇಡೀ ರಾತ್ರಿ ನಾವಿಬ್ಬರೇ ಕುಳಿತು ಮಾತಾಡಿದ್ದೇ ಮಾತಾಡಿದ್ದು. ನಿಜಕ್ಕೂ ಅವರೊಂದು ವಿಶ್ವಕೋಶ.

ಇಂಥದ್ದರ ಬಗ್ಗೆ ಅವರಿಗೆ ಬೆರಗಿಲ್ಲ ಎಂದು ಹೇಳುವಂತಿಲ್ಲ. ಆ ಮಾತುಗಳ ನಡುವೆ ಬಸವಣ್ಣ ಲೋಹಿಯಾ, ಜಯಪ್ರಕಾಶ ನಾರಾಯಣ, ಮಹಾತ್ಮಗಾಂಧಿ, ಅಂಬೇಡ್ಕರ್, ನಾರಾಐಣಗುರು, ಪಶುಪಕ್ಷಿ, ಪರ್ವತ, ಕಾಫಿತೋಟ, ಹರಿವನದಿ, ಅರಣ್ಯ, ಶಿವರಾಮ ಕಾರಂತ, ಮಾರ್ಕ್ಸ್, ಲೆನಿನ್, -ಮೀನು, ಮೊಸಳೆ ಒಂದೇ ಎರಡೇ? “ಬಸವಣ್ಣನವರನ್ನು ಲಿಂಗಯತರು ಹಾಳು ಮಾಡಿದಷ್ಟು ಬೇರಾರೂ ಮಾಡಿಲ್ಲ” ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. “ಇದೇನು ಮಾರಾಯ್ರೇ, ಈ ಲಿಂಗಯತರು ಬಸವಣ್ಣನವರನ್ನು ಇಷ್ಟೊಂದು ಗಟ್ಟಿಯಾಗಿ ಯಾಕೆ ಹಿಡಿದುಕೊಂಡಿದ್ದಾರೆ? ಹೊರಕ್ಕೆ ಬಿಡಬಾರದೇ?” ಎಂದು ನೋವಿನಿಂದ ಪದೇ ಪದೇ ನುಡಿಯುತ್ತಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here