ಉನ್ನತಿ ಯೋಜನೆಯಡಿ 22 ನವೋದ್ಯಮಿಗಳಿಗೆ, 4.7 ಕೋಟಿ ರೂ. ಪ್ರೋತ್ಸಾಹಧನ ವಿತರಣೆ.

0
36

ಬೆಂಗಳೂರು: ಕಲಬುರಗಿ ಸಮಾಜದ ದುರ್ಬಲ ವರ್ಗಗಳ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ  ಸಮಾಜ  ಕಲ್ಯಾಣ ಇಲಾಖೆ ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ರೂಪಿಸಿರುವ ‘ಉನ್ನತಿ’ ಯೋಜನೆಯಡಿ ಆಯ್ಕೆಯಾಗಿರುವ ಉದ್ಯಮಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ  ಪ್ರಿಯಾಂಕ್ ಖರ್ಗೆ ಅವರು 22 ನವೋದ್ಯಮಿಗಳಿಗೆ ರೂ 4.7 ಕೋಟಿ ಮೌಲ್ಯದ ಪ್ರೋತ್ಸಾಹಧನದ ಚೆಕ್ಕುಗಳನ್ನು ವಿತರಿಸಿದರು.

‘ಉನ್ನತಿ’ ಯೋಜನೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ಆರಂಭಿಕ ಅಗತ್ಯತೆಗಳನ್ನು ಪೂರೈಸುವ ಪರಿಕಲ್ಪನೆಯನ್ನು ಹೊಂದಿದ್ದು, ಆಯ್ಕೆಗೊಳ್ಳುವ ಉದ್ಯಮಿಗೆ ಗರಿಷ್ಠ 50 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.  ತಂತ್ರಜ್ಞಾನ ಕ್ಷೇತ್ರದಲ್ಲಿನ ನವೋದ್ಯಮಗಳನ್ನು ಆರಂಭಿಸಲು ಬಯಸುವವರಿಗೆ ಉದ್ಯಮಗಳ ಬಗ್ಗೆ ಮಾಹಿತಿ, ಉತ್ಪನ್ನಗಳ ಪ್ರಾಯೋಗಿಕ ಪರಿಶೀಲನೆ, ವಿಚಾರ ದೃಢೀಕರಣ, ಮೂಲ ಬಂಡವಾಳ ನೀಡಿಕೆ ಹಾಗೂ ಅಂತಿಮವಾಗಿ ಮಾರುಕಟ್ಟೆ ಪ್ರವೇಶವನ್ನು ಒದಗಿಸುವ ಮಹತ್ತರ ಆಶಯವನ್ನು ‘ಉನ್ನತಿ’ ಹೊಂದಿದೆ.

Contact Your\'s Advertisement; 9902492681

‘ಉನ್ನತಿ’ ಎರಡು ವಿಭಾಗಗಳನ್ನು ಹೊಂದಿದ್ದು, ತಂತ್ರಜ್ಞಾನ ಆವಿಷ್ಕಾರ ಒಂದು ವಿಭಾಗವಾದರೆ, ಗ್ರಾಮೀಣ ಮತ್ತು ಸಾಮಾಜಿಕ ಪ್ರಭಾವವನ್ನು ಹೊಂದಿದ ಆವಿಷ್ಕಾರಗಳಲ್ಲಿ ನವೋದ್ಯಮಿಗಳಿಗೆ ನೆರವಾಗಲಿರುವುದು ಮತ್ತೊಂದು ವಿಭಾಗವಾಗಿರುತ್ತದೆ.  ಈ ವಿನೂತನ ಯೋಜನೆಗಾಗಿ ಸಮಾಜ ಕಲ್ಯಾಣ ಇಲಾಖೆ 20 ಕೋಟಿ  ರೂ ಅನುದಾನ ಒದಗಿಸಿದೆ. ತಂತ್ರಜ್ಞಾನ ಆವಿಷ್ಕಾರ ವಿಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯದವರು ಯಾವುದೇ ತಂತ್ರಜ್ಞಾನ ಆಧಾರಿತ ನವೋದ್ಯಮಗಳನ್ನು ಆರಂಭಿಸಬಹುದಾಗಿದೆ.

ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ಪ್ರಭಾವವನ್ನು ಬೀರುವ ಉತ್ಪನ್ನಗಳಿಗೆ ಆಸರೆಯಾಗಲಿರುವ ಯಾವುದೇ ವ್ಯಕ್ತಿ ಆರಂಭಿಸುವ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳಿಗೆ ಎರಡನೆಯ ವಿಭಾಗದಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಗ್ರಾಮೀಣ ಉನ್ನತಿ ಮತ್ತು  ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಮೂಲಕ ಸರ್ಕಾರ ಹಾಗೂ ಸಮಾಜಕ್ಕೆ ಪೂರಕವಾಗುವಂತಹ ತಂತ್ರಜ್ಞಾನ ಘಟಕಗಳು ಈ ಯೋಜನೆಯಡಿ ಹಣಕಾಸು ನೆರವಿಗೆ ಅರ್ಹವಾಗುತ್ತವೆ. ಸಾಮರ್ಥ್ಯ, ಕಾರ್ಯಸಾಧ್ಯತೆ, ಯೋಜನೆಯ ಬಗ್ಗೆ ಪರಿಕಲ್ಪನೆ, ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿನ ಆಸಕ್ತಿ ಮುಂತಾದ ವಿಷಯಗಳು ಆಯ್ಕೆಯ ಮಾನದಂಡಗಳಾಗಿರುತ್ತವೆ. ಇಂತಹ ನವೋದ್ಯಮಗಳನ್ನು ಆರಂಭಿಸುವ ಘಟಕವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಪ್ರಧಾನ ಹೂಡಿಕೆದಾರರ ಭಾಗಿತ್ವವನ್ನು ಹೊಂದಿರಬೇಕು. ಇಂತಹ ಘಟಕಗಳಿಗೆ ಮೂಲ ಬಂಡವಾಳ ನಿಗಧಿಯಾಗಿ ಗರಿಷ್ಠ 50 ಲಕ್ಷ ರೂ.ವರೆಗೂ ನೆರವು ನೀಡಲಾಗುವುದು.

ಉನ್ನತಿ ಯೋಜನೆಯಡಿ ಧನಸಹಾಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಿದಾಗ 300 ಅರ್ಜಿಗಳು ಸ್ವೀಕೃತಗೊಂಡವು. ಅಗ್ರಿಟೆಕ್, ಡಾಟಾ ಅನಾಲಿಟೆಕ್ಸ್ ಡಿಸೈನ್, ಆರೋಗ್ಯಕ್ಕೆ ಸಂಬಂಧಿಸಿದ ತಾಂತ್ರಿಕತೆ, ವೈದ್ಯಕೀಯ ಉಪಕರಣಗಳು, ರೊಬೋಟಿಕ್ಸ್ ಮುಂತಾದ ಕ್ಷೇತ್ರಗಳಿಂದ ಅರ್ಜಿಗಳು ಬಂದಿದ್ದವು. ತಜ್ಞರ ಆಯ್ಕೆ ಸಮಿತಿಗಳ ಮೂಲಕ ಎರಡು ಹಂತಗಳಲ್ಲಿ ದೊಮ್ಮಲೂರಿನಲ್ಲಿರುವ ಕೆ-ಟೆಕ್ ಇನೊವೇಷನ್ ಹಬ್  ಕೇಂದ್ರದಲ್ಲಿ 70 ಮಾನವ ದಿನಗಳಷ್ಟು ಕಾಲ ಜನವರಿ 8, 17 ಹಾಗೂ 19ರಂದು ಆರಂಭಿಕ ಮೌಲ್ಯಮಾಪನ ನಡೆಯಿತು. ತಂತ್ರಜ್ಞಾನ, ಅನ್ವೇಷಣೆ, ವ್ಯಾಪಾರ, ಸಾಮಾಜಿಕ ಪರಿಣಾಮ, ಬಂಡವಾಳ, ಪರಿಣಿತ ತಂಡಗಳ ಸಾಮರ್ಥ್ಯವನ್ನು ಆಧರಿಸಿ ಮೌಲ್ಯಮಾಪನ ಮಾಡಲಾಯಿತು.

“ಉನ್ನತಿ ಯೋಜನೆಯ ಎರಡನೆ ವಿಭಾಗವು ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರ ರೂಪಿಸುವಂತಹ ಹಾಗೂ ಸಾಮಾಜಿಕ ಅಸಮತೋಲನ ತೊಡೆದು ಹಾಕುವಂತಹ ಯೋಜನೆಯಾಗಿದೆ. ಸರ್ಕಾರ ಹಾಗೂ ಸಮಾಜದ ನೆರವಿಗೆ ಬರಬಲ್ಲ ಈ ಕಾರ್ಯಕ್ರಮವೂ ವಿನೂತನವಾದುದಾಗಿದೆ” ಎಂದು ಸಚಿವರು ಹೇಳಿದರು.

ಬಾಹ್ಯ ಮೌಲ್ಯಮಾಪನ ಪ್ರಕ್ರಿಯೆ ನಂತರ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿನ ಉನ್ನತ ಅಧಿಕಾರಿಗಳ ತಾಂತ್ರಿಕ ಸಮಿತಿಯು 22 ಉದ್ಯಮಗಳನ್ನು ಪ್ರೋತ್ಸಾಹಧನಕ್ಕಾಗಿ ಅಂತಿಮಗೊಳಿಸಿದ್ದು, 4.7 ಕೋಟಿ ರೂ. ಚೆಕ್ಕುಗಳನ್ನು ಇಂದು ಹಸ್ತಾಂತರ ಮಾಡಲಾಯಿತು. ಉದ್ಯಮಿಗಳಲ್ಲಿ ಮಹಿಳೆಯರು ಕೂಡಾ ಆಯ್ಕೆಯಾಗಿದ್ದು‌ ಎಲ್ಲರೂ ಯಶಸ್ವಿಯಾಗಲಿದ್ದಾರೆ ಎಂದು‌ ಸಚಿವರು ನುಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here