ಶರಣರ ಬದುಕು ಮತ್ತು ವಚನಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ: ವಿಶ್ವಾರಾಧ್ಯ ಸತ್ಯಂಪೇಟೆ

0
251

ಜೇವರ್ಗಿ: ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ನಮ್ಮ ಬದುಕನ್ನು ಕಟ್ಟಿಕೊಡುತ್ತವೆ, ವ್ಯಕ್ತಿತ್ವವನ್ನು ರೂಪಿಸುತ್ತವೆ. ಸಚ್ಚಾರಿತ್ರ್ಯವಂತರಾಗಿ ಬಾಳಿ ಬದುಕಲು ವಚನಗಳು ಉತ್ತೇಜನ ನೀಡುತ್ತವೆ ಎಂದು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರಾದ ವಿಶ್ವಾರಾಧ್ಯ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಸ್ಥಳೀಯ ಬಸವ ಕೇಂದ್ರ ತಿಂಗಳ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಶರಣರ ವಚನಗಳಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಹೇಗೆ ?’ ಎಂಬ ವಿಷಯ ಕುರಿತು ಮಾತನಾಡಿದರು. ಶರಣರ ಬದುಕು ಹಾಗೂ ಬೋಧೆಗಳಿಂದ ಪ್ರತಿಯೊಬ್ಬ ಮನುಷ್ಯನೊಳಗಿರುವ ಅಂತಃಕರಣ ಜಾಗೃತಿಗೊಳ್ಳುತ್ತದೆ. ಪರಸ್ಪರ ಪ್ರೀತಿ ವಿಶ್ವಾಗಳು ಒಡಮೂಡಿ ಇವನಾರವ ಇವನಾರವ ಎಂದು ದೂರಿಕರೀಸದೆ ಸಕಲ ಜೀವಾತ್ಮರಿಗೂ ಲೇಸ ಬಯಸುವ ಮನಸ್ಸು ರೂಪುಗೊಳ್ಳುತ್ತದೆ. ಇಷ್ಟಲಿಂಗ ಎಂಬ ಅರಿವಿನ ಪೂಜೆಯ ಮೂಲಕ ನಮ್ಮೊಳಗಿನ ಅಜ್ಞಾನದ ಕತ್ತಲು ಹರಿದು ಬೆಳಕಿನ ಸೂರ್ಯ ಹುಟ್ಟುತ್ತಾನೆ. ಆಗ ದೇವರು ಧರ್ಮದ ಹೆಸರಿನ ಮೇಲೆ ನಡೆಸುವ ಶೋಷಣೆ ತಪ್ಪುತ್ತದೆ ಎಂದವರು ಸಭೆಗೆ ವಿವರಿಸಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ವಿಶ್ವ ಸಚರಾಚರ ಸೃಷ್ಠಿಗೂ ದೇವರೆ ಕಾರಣ ಎಂದಾದ ಮೇಲೆ ಆ ದೇವರು ನಮ್ಮಿಂದ ಏನಾದರೂ ಬಯಸಲು ಸಾಧ್ಯವೆ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಇಳೆ ಮಳೆ ಬೆಳೆ ಎಲ್ಲವೂ ದೇವರ ಕೊಡುಗೆಯಾದ ಮೇಲೆ ಆತನಿಗೆ ಅರ್ಪಿಸಬೇಕಾದುದು ನಮ್ಮ ತನುವನ್ನು ಮಾತ್ರ. ಆದ್ದರಿಂದಲೆ ಶರಣರು ಸಜ್ಜನಳಾಗಿ ಮಜ್ಜನಕ್ಕೆರೆವೆ ಶಾಂತಳಾಗಿ ಪೂಜೆಯ ಮಾಡುವೆ ಸಮರತಿಯಿಂದ ನಿಮ್ಮಯ ಹಾಡುವೆ ಎಂದು ಮೈದುಂಬಿ ಹೇಳಿದ್ದಾರೆ.

ಸತ್ಯ ಶುದ್ಧ ಕಾಯಕ ನಿತ್ಯ ಲಿಂಗಾರ್ಚನೆ ಮಾಡುವವರಿಗೆ ಯಾವದೆ ಬಾಧೆಗಳು ಕಾಡಲಾರವು. ಕಷ್ಟಗಳು ಬರಲಾರವು. ಬಂದರೂ ಅವನ್ನು ಎದುರಿಸುವ ಎದೆಗಾರಿಕೆ ವಚನ ಸಾಹಿತ್ಯ ನಮಗೆಲ್ಲ ಕಲಿಸಿಕೊಡುತ್ತದೆ. ಪುರೋಹಿತರ ಕಪಿಮುಷ್ಠಿಯಲ್ಲಿ ಸಿಕ್ಕು ಹಾಕಿಕೊಂಡಿರುವ ಜನತೆ ಜ್ಞಾನದ ಮೇರುಗಿರಿಯನ್ನು ಏರಬೇಕಾದರೆ ವಚನ ಸಾಹಿತ್ಯ ನಮ್ಮನ್ನು ಕಡೆಗೀಲಾಗಿ ಕಾಪಾಡುತ್ತವೆ. ಉಣಲು ಉಡಲು ಮಾತಾಡಲು ಬದುಕಲು ಕಲಿಸಿದ ಸಾಹಿತ್ಯ ಕನ್ನಡ ಭಾಷೆಯಲ್ಲಿ ಇದೆ ಎಂಬುದೆ ನಮ್ಮ ಹೆಮ್ಮೆ. ಶರಣರಂತೆ ಸದುವಿನಯ ಸಂಪನ್ನರಾಗಿ ನಡೆದರೆ ನಮ್ಮ ಬಾಳು ಬಂಗಾರವಾಗುವುದಲ್ಲಿ ಯಾವುದೆ ಅನುಮಾನವಿಲ್ಲ. ಶರಣರ ಸಂಗ ಹಾಗೂ ವಚನಗಳು ನಮಗೆಲ್ಲ ಗಟ್ಟಿಯಾದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ ಎಂದು ಸಭೆಗೆ ತಿಳಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಕಲಬುರ್ಗಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ರಾಜಶೇಖರ ಯಂಕಂಚಿ ಮಾತನಾಡಿ : ಶರಣರ ಜೀವನ ಮೌಲ್ಯಗಳು ನಮ್ಮೆಲ್ಲರ ಊರುಗೋಲಾದರೆ ಸಮಾಜದ ತುಂಬ ಪ್ರೀತಿ ವಿಶ್ವಾಸಗಳು ಹರಿದಾಡುತ್ತವೆ. ವೈಚಾರಿಕ ಹಾಗೂ ವೈಜ್ಞಾನಿಕವಾಗಿರುವ ಶರಣರ ವಚನಗಳು ಸಾರ್ವಕಾಲಿಕ ಸತ್ಯಗಳು. ಸತ್ಯದ ಕೂರಲಗನು ಹಿಡಿದು ಶರಣರು ತಮ್ಮ ಬದುಕನ್ನು ಜೀವಂತಿಕೆಯಿಂದ ಜೀವಿಸಿದರು. ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮದ ತತ್ವಗಳನ್ನು ಜನ ಮಾನಸಕ್ಕೆ ಮುಟ್ಟಿಸುವ ಹೊಣೆ ನಮ್ಮೆಲ್ಲರದಾಗಿದೆ. ಆದರೆ ಪಟ್ಟಭದ್ರಶಕ್ತಿಗಳು ಹಾಗೂ ಸನಾತನಿಗಳು ಲಿಂಗಾಯತ ಧರ್ಮಕ್ಕೆ ಅಡ್ಡಿಯನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ಜೇವರ್ಗಿ ಬಸವ ಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ , ನಿರಂತರವಾದ ವಚಗಳ ಓದಿನಿಂದ ನಮ್ಮ ಬದುಕು ಬದಲಾಗುತ್ತದೆ. ವಚನಗಳಲ್ಲಿ ಅರಿವಿನ ಕಣಜವಿದೆ. ವಿಜ್ಞಾನ ವೈಚಾರಿಕತೆ, ಆತ್ಮ ವಿಮರ್ಶೆಗಳ ಮೂಲಕ ಮನುಷ್ಯ ದೇವನಾಗಬಹುದು ಎಂಬುದನ್ನು ಶರಣರು ಹೇಳಿಕೊಟ್ಟಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಮಹಾನಂದ ಹುಗ್ಗಿ ವಚನ ಪ್ರಾರ್ಥನೆ ಮಾಡಿದರು. ಶ್ರೀಮಂತ ಹೊನ್ನಳ್ಳಿ ನಿರೂಪಿಸಿದರು. ಶಿವನಗೌಡ ಪಾಟೀಲ ಕಲ್ಲಹಂಗರಗಿ ಸ್ವಾಗತಿಸಿದರು. ಶಿವಕುಮಾರಕಲ್ಲಾ ವಂದಿಸಿದರು.

ಸಭೆಯಲ್ಲಿ ಅವ್ವನಗೌಡ ಪಾಟೀಲ, ಶಿವಶರಣ ದೇಗಾಂವ, ಈರಣ್ಣ ಭೂತನೂರ, ಮಲ್ಲಣ್ಣಗೌಡ ಯತ್ನಾಳ, ಬಂಡೆಪ್ಪ ಹಾಗರಗಿ, ಕವಿತಾ ಮಕ್ಕಳ ಕೇಂದ್ರ, ತ್ರಿವೇಣಿ ಕುಳಗೇರಿ, ಪಂಪಣ್ಣಗೌಡ ಮಳಗ, ಷಣ್ಮುಖ ಜೈನ ಹಾಗೂ ನೀಲಾಂಬಿಕೆ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here