ರಾಜ್ಯದ 224 ಎಂ.ಎಲ್‌.ಎಗಳು ಅಂಬೇಡ್ಕರ್ ಪುಸ್ತಕದ ಇಪ್ಪತ್ತು ಪುಟ ಓದಿದರೆ ಆಧುನಿಕ ಭಾರತ‌ ನಿರ್ಮಾಣ: ಪ್ರಿಯಾಂಕ್ ಖರ್ಗೆ

0
85

ಕಲಬುರಗಿ: ಆಧುನಿಕ‌ ಭಾರತದ ನಿರ್ಮಾತೃ ಡಾ. ಬಾಬಾಸಾಹೇಬ್ ಅಂಬೇಡ್ಕರ್. ಅವರ ದೂರದೃಷ್ಟಿಯಿಂದ ರಚಿಸಲ್ಪಟ್ಟ ಸಂವಿಧಾನದ ಅಡಿಯಲ್ಲಿ ಕೇವಲ ದಲಿತರು ಮಾತ್ರವಲ್ಲದೇ ಎಲ್ಲ ಜನಾಂಗದ ಜನರು ಸ್ವಾಭಿಮಾನ ದಿಂದ ಬದುಕು ಕಲ್ಪಿಸಿಕೊಟ್ಟ ಮಹಾನ್ ನಾಯಕ ಎಂದು ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಬಣ್ಣಿಸಿದರು.

ಅಫಝಲ್ಪುರ ತಾಲೂಕಿನ ಭೈರಾಮಡಗಿ ಗ್ರಾನದಲ್ಲಿ ಪಂಚಲೋಹದಲ್ಲಿ ಸ್ಥಾಪಿಸಲಾದ ಡಾ ಬಾಬಾ ಸಾಹೇಬ ಅಂಬೇಡ್ಕರ ಅವರ ಪುತ್ಥಳಿಯನ್ನು‌ ಅನಾವರಣಗೊಳಿಸಿ‌ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಇತಿಹಾಸಕಾರ ರಾಮಚಂದ್ರ ಗುಹ ಅವರ ಲೇಖನಿಯೊಂದನ್ನು ಉಲ್ಲೇಖಿಸಿ ಮಾತನಾಡಿದ ಶಾಸಕರು, ದೇಶದ ಇತಿಹಾಸದಲ್ಲಿ ಯಾರಾದರೂ ಅನ್ಯಾಯಕ್ಕೊಳಗಾದವರು ಇದ್ದರೇ ಅವರು ಅಂಬೇಡ್ಕರ್. ಕಾರಣ ಅವರನ್ನು ಕೇವಲ ದಲಿತರ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ.‌ ನಂತರ ಜವಾಹರ್ ಲಾಲ್ ನೆಹರು, ವಲಭಭಾಯಿ ಪಟೇಲ್ ಹಾಗೂ ರವೀಂದ್ರ ನಾಥ್ ಟ್ಯಾಗೋರ್ ಅವರನ್ನೂ ಕೂಡಾ ಕೇವಲ ಒಂದು ರಾಜ್ಯ ಹಾಗೂ ಪಕ್ಷಕ್ಕೆ ಸೀಮಿತಗೊಳಿಸಲಾಗಿದೆ‌ ಎಂದು‌ ವಿಷಾದಿಸಿದರು.

ಪ್ರಬುದ್ಧ ಭಾರತದ ಕನಸು ಕಂಡಿದ್ದ ಡಾ ಬಾಬಾಸಾಹೇಬರನ್ನು ಜನಸಾಮಾನ್ಯರಲ್ಲದೇ ಆಡಳಿತ ನಡೆಸುವವರು ಕೂಡಾ ಓದಿಕೊಂಡಿಲ್ಲ. 224 ಎಂ.ಎಲ್‌.ಎಗಳು ಅಂಬೇಡ್ಕರ್ ಅವರ ಕುರಿತಾದ ಪುಸ್ತಕಗಳ ಇಪ್ಪತ್ತು ಪುಟ ಓದಿದರೆ ಸಾಕು.ಆದರೆ, ಅಷ್ಟೊಂದು ಓದುವ ಇಚ್ಛೆ ಯಾವ ಶಾಸಕರಿಗಿದೆ? ಎಂದು ಹೇಳಿದರು.

ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳ ಸಂವಿಧಾನವನ್ನು ಅಭ್ಯಸಿಸಿದ ಡಾ ಅಂಬೇಡ್ಕರ್ ಅವರು ಪ್ರಜಾತಂತ್ರದ ತಳಹದಿಯ ಮೇಲೆ ಪರಿಕಲ್ಪನೆಗೊಂಡ ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಬಹಳ ಕಠಿಣ ಹಾದಿಯನ್ನು ಸವೆಸಬೇಕಾಗಿ‌ ಬಂದಿತ್ತು.

” ನಮ್ಮ‌ದೇಶ ಸ್ವಾತಂತ್ರ್ತ ಪಡೆದ‌ ಸಂದರ್ಭದಲ್ಲಿ‌ಸ್ವಾತಂತ್ರ್ಯ ಪಡೆದ 35 ರಾಷ್ಟ್ರ ಗಳು ಇಂದು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಉಳಿಯದೇ ಏಕ‌ ವ್ಯಕ್ತಿ ಆಡಳಿತದ ಸರ್ವಾಧಿಕಾರಿ ರಾಷ್ಟ್ರಗಳಾಗಿ ಉಳಿದಿವೆ. ನಮ್ಮ ರಾಷ್ಟ್ರ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿದೆ ಎನ್ನುವುದಕ್ಕೆ ಕಾರಣ ಡಾ ಬಾಬಾಸಾಹೇಬರ ಸಂವಿಧಾನ ಕಾರಣ ” ಎಂದರು.

ಸಮಾನತೆ ಎನ್ನುವುದು‌ ಕೆಲ ಸಂಘಟನೆಗಳಿಗೆ ಅಪಥ್ಯವಾಗಿದೆ. ನಾವಿಂದು‌ ಸಂವಿಧಾನವನ್ನು ಉಳಿಸಲು ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕರು, ಕೆಲ‌ ಸಂಘಟನೆಗಳು ಹೇಗೆ ಹುಟ್ಟಿಕೊಂಡಿವೆ ಅವುಗಳ ಹಿನ್ನೆಲೆ ಹೇಗಿದೆ ಎನ್ನುವುದೇ ಸ್ವತಃ ಅವರಿಗೆ ತಿಳಿದಿಲ್ಲ. ನಾನು ಅವರ ಹಿನ್ನೆಲೆಯ ಬಗ್ಗೆ ಮಾತನಾಡಿದ್ದೇನೆ. ಸಂವಿಧಾನ ಬೇಡ ಮನಸ್ಮೃತಿ ಬೇಕು ಎನ್ನುವ ಹಿನ್ನೆಲೆಯವರ ಕುರಿತು ನಾನು ಮಾತನಾಡಿದ್ದೇನೆ ಎಂದು ನೆನೆಪಿಸಿಕೊಂಡರು.

ಶಾಸಕರಾದ ಎಂ ವೈ ಪಾಟೀಲ್ ಮಾತನಾಡಿ ಕೇವಲ ಡಾ ಬಾಬಾಸಾಹೇಬರ ಪುತ್ಥಳಿ ಅನಾವರಣ ಮಾಡಿದರೆ ಅಷ್ಟೆ ಸಾಲದು, ಅವರ ಮಾರ್ಗದರ್ಶನ ಹಾಗೂ ಆಶಯದಂತೆ ಎಲ್ಲರೂ ಶಿಕ್ಷಿತರಾಗಿ ಸಂಘಟಿತರಾಗಿ ನ್ಯಾಯಪರವಾಗಿ ಹೋರಾಟ ಮಾಡಬೇಕು ಎಂದರು.

ಸಂವಿಧಾನದಂತ ಶ್ರೇಷ್ಠ ಗ್ರಂಥ ಮತ್ತೊಂದಿಲ್ಲ ಎಂದ ಶಾಸಕರು, ಸಂವಿಧಾನದಕ್ಕೆ ಗಂಡಾಂತರ ತರುವಂತ ಶಕ್ತಿಗಳು ತಲೆ ಎತ್ತಿವೆ. ಅಂತಹ ದಮನಕಾರಿ ಶಕ್ತಿಗಳ ವಿರುದ್ದ ಸಂಘಟಿತರಾಗಿ ಸಂವಿಧಾನವನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಕರೆ ನೀಡಿದರು.

ಪ್ರಿಯಾಂಕ್ ಖರ್ಗೆ ಅವರನ್ನು ಅಪರೂಪದ ಯುವನಾಯಕ ಎಂದು ಬಣ್ಣಿಸಿದ ಪಾಟೀಲ್ ಅವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನ ಕೊರತೆ ಇಂದು ಕಂಡುಬರುತ್ತಿದೆ.‌ ಸಂಸತ್ತಿನಲ್ಲಿ‌ ಅವರು ಇಲ್ಲದಿರುವುದು ದೇಶಕ್ಕೆ ಹಾಗೂ ರಾಜ್ಯಕ್ಕೆ‌ ಹಾನಿಯಾಗಿದೆ. ಹಾಗಾಗಿ, ಮತದಾರರು ಮತ್ತೊಮ್ಮೆ ಅಂತಹ ತಪ್ಪನ್ನು ಮಾಡಬಾರದು ಎಂದು ಮನವಿ ಮಾಡಿದರು.

ದೇಶವನ್ನು ಧರ್ಮದ ಬದಲಾಗಿ ಸಂವಿಧಾನ ಆಳಬೇಕು ಎಂದು ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ ಡಾ ಜ್ಞಾನಪ್ರಕಾಶ ಸ್ವಾಮೀಜಿ, ಆಗ್ರಹಿಸಿದರು.

ಧರ್ಮದ ಹೆಸರಿನಲ್ಲಿ ಏನೇನೂ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಬುದ್ದನ ಶಾಂತಿ, ಬಸವಣ್ಣನವರ ಕ್ರಾಂತಿ ಹಾಗೂ ಅಂಬೇಡ್ಕರರ ಜ್ಞಾನ ಅಳವಡಿಸಿಕೊಂಡಿರುವ ಸಂವಿಧಾನದಂತ ಶ್ರೇಷ್ಠಗ್ರಂಥ ದೇಶದಲ್ಲಿ ಮತ್ತೊಂದಿಲ್ಲ. ಹಾಗಾಗಿ, ಆಳುವವರು ಧರ್ಮವನ್ನು ಅನುಸರಿಸುವುದು ಬಿಡಬೇಕು ಸಂವಿಧಾನವನ್ನು ಅನುಸರಿಸಬೇಕು ಎಂದು ಹೇಳಿದರು.

ತಮ್ಮ ತೀಕ್ಷ್ಣವಾದ ಮಾತುಗಳಿಗೆ ಬಸವಣ್ಣ, ಅಲ್ಲಮಪ್ರಭು ಹಾಗೂ ಅಂಬಿಗರ ಚೌಡಯ್ಯ ನವರ ವಚನಗಳ ಲೇಪನ ನೀಡಿ ಮಾತಮಾಡಿದ ಸ್ವಾಮೀಜಿ, ಮತದಾರರು ತುಂಬಾ ಜಾಗರೂಕರಾಗಿ ಮತ ನೀಡಿ ಕೆಲಸ ಮಾಡುವವರನ್ನು ಆಯ್ಕೆ ಮಾಡಿ‌‌ ಕಳಿಸಿದಾಗ ಮಾತ್ರ ಡಾ. ಬಾಬಾಸಾಹೇಬರು ರಚಿಸಿರುವ ಸಂವಿಧಾನದ ಆಶಯ ಈಡೇರಲಿದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ರೂ‌ 471 ಲಕ್ಷ ವೆಚ್ಚದಲ್ಲಿ ಅಫಝಲ್ಪುರ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಮೆಟ್ರಿಕ್‌ನಂತರದ ಬಾಲಕಿಯರ ವಸತಿ‌ನಿಲಯ ಉದ್ಘಾಟಿಸಿ,‌ ಭೈರಾಮಡಗಿ ಗ್ರಾಮದಲ್ಲಿ ರೂ 20 ,ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ ಸಿಸಿ ರಸ್ತೆ ನಿರ್ಮಾಣಕ್ಕೆ‌ ಶಿಲನ್ಯಾಸ ನೆರವೇರಿಸಲಾಯಿತು.

ವೇದಿಕೆಯ ಮೇಲೆ ಮಾಜಿ ಎಂ ಎಲ್ ಸಿಗಳಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಸಮಾಜ ಸೇವಕ ಜೆ‌ಎಂ‌ ಕೊರಬು, ಜಿಪಂ‌ಉಪಾಧ್ಯಕ್ಷರಾದ ಶೋಭಾ ಸಿದ್ದು ಸಿರಸಗಿ, ಜಿಪಂ ಸದಸ್ಯರಾದ, ಶಿವಾನಂದ್ ಪಾಟೀಲ್, ಶಿವರುದ್ರ‌ ಭೀಣಿ, ಶಿವಕುಮಾರ‌ ನಾಟೀಕಾರ್ ಸೇರಿದಂತೆ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here