ಮಕ್ಕಳು ಬರುವ ಮುಂಚೆ ಶಾಲೆಗಳ ಸಮಸ್ಯೆ ಬಗೆಹರಿಸಿ: ಬಿಇಒಗೆ ಎಐಡಿಎಸ್‌ಒ ಆಗ್ರಹ 

0
53

ವಾಡಿ: ಸಾಂಕ್ರಾಮಿಕ ರೋಗ ಮಹಾಮಾರಿ ಕೊರೊನಾ ಸಂಕಷ್ಟದಿಂದ ಪಾರಾದ ಬಳಿಕ ಶಾಲಾ ಕಾಲೇಜುಗಳ ಪುನರಾರಂಭಕ್ಕೆ ಸರಕಾರ ಸಿದ್ಧತೆ ನಡೆಸುತ್ತಿದ್ದು, ಮಕ್ಕಳು ಶಾಲೆಗೆ ಬರುವ ಮುಂಚೆ ಚಿತ್ತಾಪುರ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಆಗ್ರಹಿಸಿದೆ.

ಈ ಕುರಿತು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಅವರಿಗೆ ಮನವಿಪತ್ರ ಸಲ್ಲಿಸಿರುವ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ವಾಡಿ ನಗರ ಸಮಿತಿ ಮುಖಂಡರು, ಲಾಡ್ಲಾಪುರ ಸರಕಾರಿ ಪ್ರೌಢ ಶಾಲೆ ಸೇರಿದಂತೆ ಬಹುತೇಕ ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕಲಿಕೆಗೆ ವಿದ್ಯುತ್ ಸಂಪರ್ಕವಿಲ್ಲ. ವಿದ್ಯಾರ್ಥಿಗಳಿಗೆ ಸೂಕ್ತ ಶೌಚಾಲಯ ಸೌಲಭ್ಯಗಳಿಲ್ಲ. ತಕ್ಷಣಕ್ಕೆ ಕ್ರಮಕೈಗೊಂಡು ಬಾಲಕಿಯರ ಬಯಲು ಶೌಚಾಲಯ ಬಳಕೆಗೆ ಕಡಿವಾಣ ಹಾಕಬೇಕು. ಆಟದ ಮೈದಾನಗಳು ಶುಚಿಯಾಗಿಲ್ಲ. ಶಾಲೆಗೆ ಕಂಪೌಂಡ್ ಸೌಲಭ್ಯ ಇಲ್ಲದ ಕಾರಣ ಕೊರೊನಾ ಸಂಕಷ್ಟದಲ್ಲಿ ಶಾಲಾ ಅಂಗಳಗಳು ದನದ ದೊಡ್ಡಿಗಳಾಗಿ ಪರಿವರ್ತನೆಯಾಗಿವೆ.

Contact Your\'s Advertisement; 9902492681

ಸುಣ್ಣ-ಬಣ್ಣ ಕಾಣದೆ ತರಗತಿ ಕೋಣೆಗಳ ಗೋಡೆಗಳು ಪಾಳು ಕಟ್ಟಡಗಳಂತೆ ಕೊಳೆಯಾಗಿವೆ. ಶಾಲೆಗೆ ಹೋಗಲು ಸೂಕ್ತ ರಸ್ತೆ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಕಾಲುದಾರಿಗಳನ್ನು ಅನುಸರಿಸುವಂತಾಗಿದೆ ಎಂದು ದೂರಿರುವ ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ಶಾಲೆಗೆ ಒದಗಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸಮಸ್ಯೆಗಳನ್ನು ಮುಂದಿಟ್ಟು ಮಕ್ಕಳನ್ನು ಶಾಲೆಗೆ ಕರೆದರೆ ಮುಂದಿನ ದಿನಗಳಲ್ಲಿ ಎಐಡಿಎಸ್‌ಒ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ ಹಾಗೂ ಅರುಣಕುಮಾರ ಹಿರೇಬಾನರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here