ಲೆಟ್ಸ್ ಟೇಕ್ ಚಾರ್ಜ್ ಅಭಿಯಾನ

0
36

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಸಂಸದರಾದ ಕಾರ್ತಿ ಚಿದಂಬರಂ ಮತ್ತು ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನದ ಸ್ಪರ್ಧಾವಿಜೇತರಿಗೆ ಬುಧವಾರದಂದು ಬಹುಮಾನ ವಿತರಣೆ ಮಾಡಿದರು. ಕರ್ನಾಟಕದಲ್ಲಿ ತಲೆದೋರುವ ಪ್ರವಾಹ ಪರಿಸ್ಥಿತಿಗೆ ಪರಿಹಾರೋಪಾಯವನ್ನು ನೀಡುವಂತೆ ಕರೆ ನೀಡಿ ನವೆಂಬರ್ 1ರಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಲೆಟ್ಸ್ ಟೇಕ್ ಚಾರ್ಜ್ ಅಭಿಯಾನವನ್ನು ಆರಂಭಿಸಿದ್ದರು.

18ರಿಂದ 35 ವರ್ಷದೊಳಗಿನ ಯುವಸಮೂಹಕ್ಕಾಗಿ ನಡೆಸಲಾದ ಅಭಿಯಾನಕ್ಕೆ, ಕೇವಲ 9 ದಿನಗಳಲ್ಲಿ ಕರ್ನಾಟಕದಾದ್ಯಂತದಿಂದ 30 ಸಾವಿರಕ್ಕೂ ಹೆಚ್ಚು ಪರಿಹಾರೋಪಾಯಗಳು ಬಂದಿದ್ದವು. ಯುವಜನರು ತಮ್ಮ ಪರಿಹಾರೋಪಾಯಗಳನ್ನು ಗೂಗಲ್ ಫಾರ್ಮ್, ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ಗಳ‌ ಮೂಲಕ ಹಂಚಿಕೊಂಡಿದ್ದರು.

Contact Your\'s Advertisement; 9902492681

ಬೆಂಗಳೂರು ಜಿಲ್ಲೆಯ ಚಂಬೇನಹಳ್ಳಿ ಗ್ರಾಮದ 23 ವರ್ಷದ ಸಂಧ್ಯಾ ಅವರು ಪ್ರಥಮ‌ ಸ್ಥಾನ ಪಡೆಯುವ ಮೂಲಕ ಐಫೋನ್ 12 ತಮ್ಮದಾಗಿಸಿಕೊಂಡರೆ, ಉತ್ತರ ಕನ್ನಡ ಜಿಲ್ಲೆಯ 24 ವರ್ಷದ ಕಾರ್ತಿಕ್ ಆರ್ ನಾಯ್ಕ್ ಅವರು ರನ್ನರ್ ಅಪ್ ಆಗಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ 51 ಪಡೆದಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನ 22 ವರ್ಷದ ದುರ್ಗಾರಾಮ್ ಹಾಗೂ ಹಾವೇರಿಯ 19 ವರ್ಷದ ದಾನೇಶ್ವರಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ21 ಮತ್ತು ಸ್ಯಾಮ್‌ಸಂಗ್ ಟ್ಯಾಬ್ ಎ ತಮ್ಮದಾಗಿಸಿಕೊಂಡಿದ್ದಾರೆ.

“ಕರ್ನಾಟಕ ಎದುರಿಸುತ್ತಿರುವ ಸಮಸ್ಯೆಗಳಿಗೆ ಯುವಜನತೆಯಿಂದ ಪರಿಹಾರೋಪಾಯಗಳನ್ನು ಪಡೆಯುವ ಮೂಲಕ ಯುವಕರಿಗೆ ಉತ್ತೇಜನ ನೀಡುವ ಪ್ರಾಥಮಿಕ‌ ಉದ್ದೇಶವನ್ನು ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನ ಯಶಸ್ವಿಯಾಗಿ ಪೂರೈಸಿದೆ. ಸ್ಪರ್ಧೆಗೆ ಯಾವುದೇ ನೋಂದಣಿ‌ ಶುಲ್ಕ ಇಲ್ಲದಿರುವುದು ಹಾಗೂ ಅತ್ಯಂತ ಸರಳವಾದ ನೋಂದಣಿ ವಿಧಾನಗಳು ಯುವಜನತೆಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಹಾಯಕವಾಯಿತು” ಎಂದು ನಲಪಾಡ್ ಅವರು ತಿಳಿಸಿದರು.

ರಾಜ್ಯದೆಲ್ಲೆಡೆಯಿಂದ ಯುವಕರು ಭಾಗವಹಿಸಿದ್ದು ಈ ಅಭಿಯಾನದ ಹೆಗ್ಗಳಿಕೆ. ನಗರ ಪ್ರದೇಶವಷ್ಟೇ ಅಲ್ಲದೆ ಗ್ರಾಮೀಣ ಭಾಗದಿಂದಲೂ ಯುವಜನರು ಅತ್ಯಂತ ಉತ್ಸಾಹದಿಂದ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ಲೆಟ್ಸ್ ಟೇಕ್ ಚಾರ್ಜ್ ಅಭಿಯಾನಕ್ಕೆ ಬೆಂಗಳೂರು ಜಿಲ್ಲೆಯಿಂದ 14000, ಮೈಸೂರಿನಿಂದ 2200, ಮಂಡ್ಯದಿಂದ 1098, ಹಾಸನದಿಂದ 1022, ಚಿಕ್ಕಮಗಳೂರಿನಿಂದ 1002, ತುಮಕೂರಿನಿಂದ 888, ದಕ್ಷಿಣ ಕನ್ನಡದಿಂದ 1400, ಉತ್ತರ ಕನ್ನಡದಿಂದ 1250 ಹಾಗೂ ಹಾವೇರಿಯಿಂದ 1222 ಪರಿಹಾರೋಪಾಯಗಳು ದಾಖಲಾಗಿವೆ. ಉತ್ತರ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್, ರಾಯಚೂರು, ಬಳ್ಳಾರಿಯಿಂದ ತಲಾ 1000ಕ್ಕೂ ಹೆಚ್ಚು ಸಲಹೆಗಳು ದಾಖಲಾಗಿವೆ. ಸ್ಪರ್ಧೆಯ ಇನ್ನೊಂದು ವಿಶೇಷತೆಯೆಂದರೆ ಭಾಗವಹಿಸಿದ ಸ್ಪರ್ಧಾಳುಗಳಲ್ಲಿ ಯುವತಿಯರ ಸಂಖ್ಯೆ ಹೆಚ್ಚಿದ್ದು 2:1 ಅನುಪಾತದಲ್ಲಿ ಯುವಕರನ್ನು ಹಿಂದಿಕ್ಕಿದ್ದಾರೆ.
‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನ ಸರಿಸುಮಾರು 30.1 ಲಕ್ಷ ಜನರನ್ನು ಸಾಮಾಜಿಕ‌ ಜಾಲತಾಣಗಳ ಮೂಲಕ ತಲುಪಿದೆ.

“ಕರ್ನಾಟಕವನ್ನು ಉತ್ತಮವಾಗಿಸಲು ತಮ್ಮ ಕ್ರಿಯಾಶೀಲ ಪರಿಹಾರೋಪಾಯಗಳನ್ನು ಹಂಚಿಕೊಳ್ಳುವ ಮೂಲಕ ಭಾಗವಹಿಸಿದ ಕರ್ನಾಟಕದ ಯುವಜನತೆಯ ಬಗ್ಗೆ ಹೆಮ್ಮೆಯೆನಿಸುತ್ತದೆ” ಎಂದು ನಲಪಾಡ್ ಹೇಳಿದರು. ರಾಜ್ಯದ ಭವಿಷ್ಯವನ್ನು ರೂಪಿಸಲು ಯುವಕರ ಪಾತ್ರ ಮಹತ್ವದ್ದು ಎಂದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿಯಾನಗಳನ್ನು ನಡೆಸುವ ಮೂಲಕ ರಾಜ್ಯದ ಸಮಸ್ಯೆಗಳ ಕುರಿತು ಗಮನ ಸೆಳೆದು, ಪರಿಹಾರಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here