ಕೋವಿಡ್‌ ಸಂಕಷ್ಟದಲ್ಲಿ ಸರಕಾರಿ ನೌಕರರ ಕಾರ್ಯಕ್ಷಮತೆಯಿಂದ ಸಾರ್ವಜನಿಕರ ಭಾವನೆ ಉತ್ತಮಗೊಂಡಿದೆ: ಸಚಿವ ಜಗದೀಶ್‌ ಶೆಟ್ಟರ್‌

0
15

ಬೆಂಗಳೂರು: ಕೋವಿಡ್‌ ಸಂಕಷ್ಟ ಕಾಲದಲ್ಲಿ ರಾಜ್ಯ ಸರಕಾರಿ ನೌಕರರು ಅತ್ಯುತ್ತಮ ಕಾರ್ಯಕ್ಷಮತೆಯನ್ನು ತೋರಿಸಿದ್ದಾರೆ. ಇದು ರಾಜ್ಯದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಹತೋಟಿಯಲ್ಲಿಡಲು ಹಾಗೂ ಸಾರ್ವಜನಿಕರ ಜೀವನ ಸರಿಯಾಗಿ ನಡೆಯಲು ಅನುಕೂಲ ಮಾಡಿಕೊಟ್ಟಿದೆ. ಈ ಸಂಧರ್ಭದಲ್ಲಿ ಅಧಿಕಾರಿಗಳು ತೋರಿದ ಕಾರ್ಯಕ್ಷಮತೆ ಸಾರ್ವಜನಿಕರಲ್ಲಿ ಅವರ ಮೇಲಿದ್ದ ವ್ಯತಿರಿಕ್ತ ಭಾವನೆ ಸಕಾರಾತ್ಮಕವಾಗಿ ಬದಲಾಗುವಂತೆ ಮಾಡಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟರು.

ಬೆಂಗಳೂರು ನಗರದ ಖಾಸಗಿ ಹೋಟೇಲ್‌ ನಲ್ಲಿ ಎಫ್‌ಐಸಿಸಿಐ ಆಯೋಜಿಸಿದ್ದ ಕೋವಿಡ್‌ ಸಂಕಷ್ಟ ಕಾಲದಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟ ಸರಕಾರಿ ಅಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕೋವಿಡ್‌ ಸಾಂಕ್ರಾಮಿಕ ರೋಗ ಬರುವುದಕ್ಕಿಂತಲೂ ಮುನ್ನ ಸಾರ್ವಜನಿಕರು ಸರಕಾರಿ ವ್ಯವಸ್ಥೆ, ಸರಕಾರಿ ಅಧಿಕಾರಿಗಳು ಹಾಗೂ ಸರಕಾರಿ ಆಸ್ಪತ್ರೆಗಳ ಬಗ್ಗೆ ವ್ಯತಿರಿಕ್ತವಾದ ಭಾವನೆಗಳು ಹೊಂದಿದ್ದನ್ನು ನಾವು ಕಾಣುತ್ತಿದ್ದೆವು. ಆದರೆ, ಕೋವಿಡ್‌ ಸಾಂಕ್ರಾಮಿಕ ರೋಗದ ಪರಿಣಾಮದ ಲಾಕ್‌ ಡೌನ್‌ ನಲ್ಲಿ ಸರಕಾರಿ ವ್ಯವಸ್ಥೆ ಬಹಳಷ್ಟು ಕಾರ್ಯಕ್ಷಮತೆಯಿಂದ ಹಗಲಿರುಳು ಕಾರ್ಯನಿರ್ವಹಿಸಿತು. ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ನೀಡುವಲ್ಲಿ, ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ, ಕೈಗಾರಿಕೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಾಗೂ ಜನರಿಗೆ ಬೇಕಾದ ಅನುಮತಿಗಳನ್ನು ಒದಗಿಸುವಲ್ಲಿ ಸರಕಾರಿ ಅಧಿಕಾರಿಗಳು ಹಗಲಿರುಳು ಕಾರ್ಯನಿರ್ವಹಿಸಿದರು. ಇದು ಜನರಲ್ಲಿ ಸರಕಾರಿ ವ್ಯವಸ್ಥೆ ಮೇಲಿದ್ದ ವ್ಯತಿರಿಕ್ತ ಭಾವನೆಯನ್ನು ಹೋಗಲಾಡಿಸಿದ್ದು, ಜನರು ಸರಕಾರಿ ವ್ಯವಸ್ಥೆಯ ಹಾಗೂ ಸರಕಾರಿ ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ಸಕಾರಾತ್ಮಕ ಭಾವನೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು.

ಕೋವಿಡ್‌ ಲಾಕ್‌ಡೌನ್‌ ನಂತರ ಕೈಗಾರಿಕೆಗಳನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ. ಇದಕ್ಕೆ ನಮ್ಮ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳ ಪರಿಶ್ರಮ ಕಾರಣ. ಯಾವುದೇ ಸಂಕಷ್ಟದ ಸಮಯದಲ್ಲೂ ಯಾವುದೇ ಬೇಸರವಿಲ್ಲದೆ ಹಗಲಿರುಳು ಅಗತ್ಯ ಅನುಮತಿಗಳನ್ನು ನೀಡುವುದು. ಬೇರೆ ಬೇರೆ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸುವುದು ಹೀಗೆ ಹಲವಾರು ತೆರೆಮರೆಯ ಕಸರತ್ತುಗಳನ್ನು ಮಾಡಿ ಕೈಗಾರಿಕೆಗಳು ಸಮಪರ್ಕವಾಗಿ ಮುನ್ನಡೆಯುವಂತೆ ಮಾಡುವಲ್ಲಿ ಅವರ ಪಾತ್ರ ಹಿರಿದಾಗಿದೆ. ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಅಂತರಿಕ್ಷ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಮಹೇಶ್ವರ್‌ ರಾವ್‌, ಕೈಗಾರಿಕಾಭಿವೃದ್ದಿ ಇಲಾಖೆ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣಾ ಸೇರಿದಂತೆ ಹಲವು ಅಧಿಕಾರಿಗಳ ಪಾತ್ರ ಬಹಳಷ್ಟಿದೆ. ಇವರನ್ನು ಸನ್ಮಾನಿಸಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಅಂತರಿಕ್ಷ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಮಹೇಶ್ವರ್‌ ರಾವ್‌, ಕೈಗಾರಿಕಾಭಿವೃದ್ದಿ ಇಲಾಖೆ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣಾ ಅವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಎಫ್‌ಐಸಿಸಿಐ ನ ಅಧ್ಯಕ್ಷರಾದ ಉಲ್ಲಾಸ್‌ ಕಾಮತ್‌, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ್‌, ಇನ್‌ವೆಸ್ಟ್‌ ಕರ್ನಾಟಕ ಫೋರಂನ ಸಿಓಓ ಬಿ.ಕೆ ಶಿವಕುಮಾರ್‌ ಸೇರಿದಂತೆ ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here