ವಾಡಿ: ಕಳೆದ ಎರಡು ತಿಂಗಳಿಂದ ಕೋವಿಡ್ ಸೊಂಕಿತರ ಸೇವೆಯಲ್ಲಿ ತೊಡಗಿರುವ ಪಟ್ಟಣದ ಭಾಯ್ ಭಾಯ್ ಗ್ರೂಪ್ ಹಾಗೂ ಟೀಂ ಪ್ರಿಯಾಂಕ್ ಖರ್ಗೆ ಸಂಘದ ಪದಾಧಿಕಾರಿ ಯುವಕರು, ಈಗ ತಮ್ಮ ಕಾರುಗಳನ್ನೇ ಅಂಬೂಲೆನ್ಸ್ಗಳನ್ನಾಗಿ ಪರಿವರ್ತಿಸುವ ಮೂಲಕ ರೋಗಿಗಳಿಗೆ ಉಚಿತ ಸೇವೆ ಒದಗಿಸಲು ಮುಂದಾಗಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಉಚಿತ ಅಂಬೂಲೆನ್ಸ್ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಸ್ಐ ವಿಜಯಕುಮಾರ ಭಾವಗಿ, ಕೊರೊನಾ ಎಂಬ ಕ್ರೂರಿ ಸೊಂಕು ದೃಢಪಟ್ಟು ಸಕಾಲಕ್ಕೆ ವಾಹನ ವ್ಯವಸ್ಥೆ, ಚಿಕಿತ್ಸೆ, ಆಕ್ಸಿಜನ್ ಸಿಗದೆ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪರಸ್ಥಿತಿಯಲ್ಲಿ ದಿನದ 24 ತಾಸು ರೋಗಿಗಳ ಸೇವೆ ಮಾಡಲು ಪಣ ತೊಟ್ಟಿರುವ ಯುವಕರು, ತಮ್ಮ ಕಾರುಗಳನ್ನೇ ಅಂಬೂಲೆನ್ಸ್ಗಳಾಗಿ ಬದಲಾಯಿಸಿರುವುದು ಅವರ ಜೀಪರ ಕಾಳಜಿ ಎತ್ತಿ ತೋರಿಸುತ್ತದೆ. ಸಂಕಷ್ಟದಲ್ಲಿರುವ ಬಡ ರೋಗಿಗಳು ಈ ಸಹಾಯವನ್ನು ಪಡೆದುಕೊಂಡು ಜೀವ ರಕ್ಷಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಟೀಂ ಪ್ರಿಯಾಂಕ್ ಖರ್ಗೆ ಮತ್ತು ಭಾಯ್ ಭಾಯ್ ಗ್ರೂಪ್ ಅಧ್ಯಕ್ಷ ಶಮಶೀರ್ ಅಹ್ಮದ್ ಮಾತನಾಡಿ, ಕೊರೊನಾ ಸೊಂಕಿಗೆ ಹೆದರಿದರೆ ನಮ್ಮ ಕಣ್ಣೆದುರೇ ನಮ್ಮವರನ್ನು ಕಳೆದುಕೊಳ್ಳಬೇಕಾಗುತ್ತದೆ. ಮಾನವೀಯತೆ ದೃಷ್ಠಿಯಿಂದ ಜೀವದ ಹಂಗು ತೊರೆದು ರೋಗಿಗಳ ಸೇವೆಗೆ ನಿಂತಿದ್ದೇವೆ.
ಈಗಾಗಲೇ ಹೋರಾಟದ ಮೂಲಕವೇ ಅನೇಕ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ವೆಂಟಿಲೇಟರ್ ಸೌಲಭ್ಯ ಸಿಗುವಂತೆ ಕ್ರಮಕೈಗೊಂಡಿದ್ದೇವೆ. ಹಲವರಿಗೆ 108 ಸುರಕ್ಷಾ ಕವಚದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ್ದೇವೆ. ರೋಗಿಯನ್ನು ಸಂಬಂದಿಕರೇ ನೋಡಿಕೊಳ್ಳದ ಸಂದರ್ಭದಲ್ಲಿ ನಮ್ಮ ಸಂಘದ ಹುಡುಗರು ಪಿಪಿಇ ಕಿಟ್ ಧರಿಸಿಕೊಂಡು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಿದ್ದೇವೆ.
ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಖಾಸಗಿ ಅಂಬೂಲೆನ್ಸ್ ಮಾಲೀಕರು ಬಡ ರೋಗಿಗಳಿಂದ ಹಣ ಸುಲಿಗೆಗೆ ನಿಂತಿರುವುದನ್ನು ಅರಿತು ಉಚಿತ ಅಂಬೂಲೆನ್ಸ್ ಸೇವೆಗೆ ಮುಂದಾಗಿದ್ದೇವೆ. ಪ್ರಚಾರದ ದೇಷ್ಠಿಯಿಂದ ನಾವು ಇದನ್ನು ಮಾಡುತ್ತಿಲ್ಲ. ನಮ್ಮ ಕರ್ತವ್ಯ ಎಂದು ಭಾವಿಸಿ ಅಳಿಲು ಸೇವೆ ಒದಗಿಸುತ್ತಿದ್ದೇವೆ.
ದಿನದ 24 ತಾಸು ನಾವು ಸೇವೆಗೆ ಹಾಜರಿರುತ್ತೇವೆ. ಕೋವಿಡ್ ಸೇರಿದಂತೆ ಇತರ ಯಾವೂದೇ ರೋಗದ ರೋಗಿಗಳಿಗೆ ನಾವು ಸ್ಪಂದಿಸುತ್ತೇವೆ. ಉಚಿತ ಅಂಬೂಲೆನ್ಸ್ ಸೇವೆಗಾಗಿ ಮೋ.9742533763, 7022623883 ಸಂಖ್ಯೆಗೆ ಕರೆ ಮಾಡಬಹುದು ಎಂದು ವಿವರಿಸಿದರು. ಮಹ್ಮದ್ ಇರ್ಫಾನ್, ಝಹೂರ್ ಖಾನ್, ಬಾಬಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.