ಹುಬ್ಬಳ್ಳಿ-ಧಾರವಾಡ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ
ಧಾರವಾಡದಲ್ಲಿ 15 ಸಾವಿರ ಹೆಣಗಳ ವಿಧಿ, ವಿಧಾನ ಮಾಡಿದ್ದ ಮುಸ್ತಾಕ್ ಭಾಯ್ ಇನ್ನಿಲ್ಲ
ಧಾರವಾಡ: ಅವರೊಬ್ಬ ಸರಳ ವ್ಯಕ್ತಿ. ಎಲ್ಲರನ್ನೂ ನಗು ನಗುತ್ತಲೇ ಮಾತನಾಡಿಸಿ ಅವರ ಮನ ಗೆದ್ದ ವ್ಯಕ್ತಿ. ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಕೊಡುಗೆಯಾಗಿ ನೀಡಿದ್ದ ಅಂಬ್ಯುಲೆನ್ಸ್ ಮೂಲಕ ಕಳೆದ 21 ವರ್ಷಗಳಲ್ಲಿ ಸುಮಾರು 15 ಸಾವಿರ ಹೆಣಗಳನ್ನು ಸಾಗಿಸಿ ಅವುಗಳ ಅಂತಿಮ ವಿಧಿ, ವಿಧಾನ ಮಾಡಿದ್ದ ಪುಣ್ಯಾತ್ಮ. ಆ ವ್ಯಕ್ತಿ ಇದೀಗ ವಿಧಿ, ವಶರಾಗಿದ್ದು, ಧಾರವಾಡ ಜನತೆಗೆ ತುಂಬಲಾರದ ನಷ್ಟವಾಗಿದೆ.
ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಮುಸ್ತಾಕ್ ಅಹ್ಮದ್ ಖಾತ್ರಿಗೆ ‘ಮರಳಿ ಮಣ್ಣಿಗೆ’ ಎಂಬ ಅಂಬ್ಯುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಿತ್ತು. ಕಳೆದ 21 ವರ್ಷಗಳಿಂದ ಈ ಅಂಬ್ಯುಲೆನ್ಸ್ ಚಲಾಯಿಸುವ ಕೆಲಸ ಮಾಡಿದ ಮುಸ್ತಾಕ್ ಲಿಂಗಾಯತ, ಬ್ರಾಹ್ಮಣ ಸಮಾಜ ಸೇರಿದಂತೆ ಎಲ್ಲ ಧರ್ಮದವರ ಶವ ಸಂಸ್ಕಾರ ಮಾಡಿದ್ದಾರೆ. ಮುಸ್ತಾಕ್ ಅನ್ಯ ಧರ್ಮದವರಾಗಿದ್ದರೂ ಎಲ್ಲ ಧರ್ಮದ ಶವ, ಸಂಸ್ಕಾರ, ವಿಧಿ, ವಿಧಾನದ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಿದವರಾಗಿದ್ದರು.
ಕೊರೊನಾ ಎರಡನೇ ಅಲೆ ಬಂದಾಗಿನಿಂದ ಪ್ರತಿದಿನ 4-5 ಜನರ ಶವ ಸಂಸ್ಕಾರವನ್ನು ಮುಸ್ತಾಕ ಮಾಡಿದ್ದರಂತೆ. ಶವ ಸಂಸ್ಕಾರ ಮಾಡಿ ಬಂದ ನಂತರ ಕಡ್ಡಾಯವಾಗಿ ಸ್ನಾನ ಮಾಡಿ, ವಾಹನವನ್ನೂ ಕ್ಲೀನ್ ಆಗಿ ತೊಳೆಯುತ್ತಿದ್ದರಂತೆ. 54 ವರ್ಷದ ಮುಸ್ತಾಕ್, ಕೋವಿಡ್ ಸಂದರ್ಭದಲ್ಲಿ, ಕಳೆದ 45 ದಿನಗಳಲ್ಲಿ 15 ಕ್ಕೂ ಹೆಚ್ಚು ಜನರಿಗೆ ಮುಕ್ತಿ ಯಾತ್ರೆ ಕರುಣಿಸಿದ್ದಾರೆ.
ಧರ್ಮದ ದೆಸೆಯಿಂದ ಸಂಪ್ರದಾಯ ನಿಷ್ಠ ಮುಸಲ್ಮಾನ್ ಈತ. ನಡವಳಿಕೆಯಲ್ಲಿ ನಾವು ಗೌರವಿಸಬೇಕಾದ ಮನುಷ್ಯತ್ವ. ಓದಿದ್ದು ಕಡಿಮೆ. ಸಣ್ಣ ಕುಟುಂಬ. ಬಾಡಿಗೆ ಮನೆ. ಬಡತನದಲ್ಲೇ ಉಪಜೀವನ. ಹಿತ ಮತ್ತು ಮಿತ ಭಾಷಿ. ಸದಾ ಮೌನಿ. ಕೇಳಿದ್ದಕ್ಕಷ್ಟೇ ಸಮರ್ಪಕ ಸರಳ ಉತ್ತರ. ತನ್ನವರನ್ನು ಕಳೆದುಕೊಂಡ ಕುಟುಂಬದವರ ದುಃಖದಲ್ಲೂ ಯಥಾಸ್ಥಿತಿ, ತಥಾಶಕ್ತಿಯಾಗಿ ಮುಸ್ತಾಕ್ ಭಾಗಿಯಾಗುತ್ತಿದ್ದರು..!