ಸುರಪುರ:ತಾಲೂಕಿನ ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ತಹಸೀಲ್ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುವಂತೆ ತಿಳಿಸಲು ಹೋದ ಕಕ್ಕೇರಾ ಪುರಸಭೆ ಸದಸ್ಯ ಭೀಮನಗೌಡ ಹಳ್ಳಿಗೌಡ್ರು ಅವರ ಮೇಲೆಯೆ ಸುಳ್ಳು ದೂರು ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.ಒಬ್ಬ ಪುರಸಭೆ ಸದಸ್ಯನಾಗಿ ಆಸ್ಪತ್ರೆಯಲ್ಲಿನ ವೈದ್ಯರಿಗೆ ಏನು ಕೇಳುವಂತಿಲ್ಲವೆ,ಇದನ್ನು ಕೇಳಿದ ಪುರಸಭೆ ಸದಸ್ಯನ ಮೇಲೆಯೆ ಸುಳ್ಳು ದೂರು ನೀಡಿರುವುದು ಎಷ್ಟು ಸರಿ,ಅಲ್ಲದೆ ಅಲ್ಲಿಯ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ತನ್ನ ಪರವಾಗಿ ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದಾರೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೆ ಸುಳ್ಳು ದೂರು ನೀಡಿರುವುದನ್ನು ರದ್ದುಗೊಳಿಸಬೇಕು ಮತ್ತು ಕರ್ತವ್ಯ ಲೋಪ ಎಸಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ವೈದ್ಯೆಯನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ ಜಿಲ್ಲಾ ಗೌರವಾಧ್ಯಕ್ಷ ಸಿದ್ದನಗೌಡ ಪಾಟೀಲ್ ರಮೇಶ ದೊರೆ ಆಲ್ದಾಳ ಪರಮಣ್ಣ ವಡಕೇರಿ ಹಣಮಂತ್ರಾಯ ಸಗರ ಬುಚ್ಚಪ್ಪ ನಾಯಕ ವೆಂಕಟೇಶ ದೊರೆ ಶೇಖರ ಆರ್ ವಜ್ಜಲ್ ಸೇರಿದಂತೆ ಅನೇಕರಿದ್ದರು.