ಕಲಬುರಗಿಯಲ್ಲಿ ಸೋಮವಾರದಿಂದ ‘ವಚನ ಆಷಾಢ’ ಪ್ರವಚನ

0
507

ಕಲಬುರಗಿ: ಇಲ್ಲಿನ ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸೋಮವಾರದಿಂದ ಪ್ರತಿ ದಿನ ಸಂಜೆ 6 ಗಂಟೆಗೆ ವಚನ ಆಷಾಢ ಪ್ರವಚನ ಕಾರ್ಯಕ್ರಮ ನೆರವೇರಲಿದೆ ಎಂದು ಡಾ. ವಿಲಾಸವತಿ ಖೂಬಾತಾಯಿ ಹೇಳಿದರು.

ಕಳೆದ ವರ್ಷ ಬೀದರ್ ಬಸವ ಗಿರಿಯ ಅಕ್ಕ ಅನ್ನಪೂರ್ಣತಾಯಿ ಅವರಿಂದ ತಿಂಗಳಪರ್ಯಂತ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ಜುಲೈ 1 ರಿಂದ 24 ರವರೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಈ ಮುಂಚೆ ವಚನ ಶ್ರಾವಣ ಎಂದು ಶ್ರಾವಣ ಮಾಸದಲ್ಲಿ ಪ್ರವಚನ ಆಯೋಜಿಸಲಾಗುತ್ತಿತ್ತು. ಆದರೆ ಎರಡು ವರ್ಷಗಳಿಂದ ವಚನ ಆಷಾಢ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು “ಇ-ಮೀಡಿಯಾ ಲೈನ್”ನೊಂದಿಗೆ ಮಾತನಾಡುತ್ತ ತಿಳಿಸಿದರು.

Contact Your\'s Advertisement; 9902492681

ಶ್ರಾವಣ ಮಾಸ ಅಂದರೆ ಒಳ್ಳೆಯ ದಿನಗಳು. ಆಷಾಢ ಮಾಸ ಅಂದರೆ ಕೆಟ್ಟ ದಿನಗಳು ಎಂಬ ಮನೋಭಾವನೆಯನ್ನು ಹೋಗಲಾಡಿಸಿ ಬಸವಾದಿ ಶರಣರ ಅಧ್ಯಾತ್ಮಿಕ ಮಹೋನ್ನತಿ ಬಿತ್ತರಿಸುವುದಕ್ಕಾಗಿ ಕಳೆದ ವರ್ಷದಿಂದ ವಚನ ಶ್ರಾವಣ ಇದ್ದುದನ್ನು ವಚನ ಆಷಾಡ ಎಂದು ಹೆಸರಿಟ್ಟು ಪ್ರವಚನ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕೆ ಅಲ್ಲಿನ ಸಾರ್ವಜನಿಕರ ಸಹಭಾಗಿತ್ವ ಮೆಚ್ಚುವಂಥದ್ದು.

  -ಅರವಿಂದ ಜತ್ತಿ, ಅಧ್ಯಕ್ಷರು, ಕೇಂದ್ರ ಬಸವ ಸಮಿತಿ

ಜುಲೈ 1 ರಂದು ಸಂಜೆ 6 ಗಂಟೆಗೆ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶ್ರಾಂತ ನ್ಯಾಯಮೂರ್ತಿ ಚೆನ್ನಮಲ್ಲಪ್ಪ ಬೆನಕನಳ್ಳಿ ರಟಕಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹುನ್ನೂರ-ಮಧುರಖಂಡಿ ಬಸವಜ್ಞಾನ ಗುರುಕುಲದ ಡಾ. ಈಶ್ವರ ಮಂಟೂರ ಅವರು “ಶರಣರ ಜೀವನ ದರ್ಶನ ಕುರಿತು ಆದ್ಯಾತ್ಮಿಕ ಪ್ರವಚನ ನಡೆಸಿಕೊಡಲಿದ್ದಾರೆ ಎಂದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಸಹಾಯಕ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೀಲಕಂಠರಾವ ಮಾಲಿಪಾಟೀಲ ಹಾಗರಾಗಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಕೃಷಿ ಅಧಿಕಾರಿ ಗೂಳಪ್ಪ ಯೋಗಪ್ಪನವರ್, ನಂದಿ ಬಸವೇಶ್ವರ ಟ್ರಸ್ಟ್ ನ ಗೌರವಾಧ್ಯಕ್ಷ ಶಾಂತಪ್ಪ ಭೋಗಶೆ, ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಾಂತಪ್ಪ ಏರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಶಂಕ್ರಯ್ಯ ಆರ್. ಗುರುಮಠ ವಚನ ಸಂಗೀತ ನೀಡಲಿದ್ದು, ಸಿದ್ಧೇಶಕುಮಾರ ಲಿಂಗನಬಂಡಿ ತಬಲಾ ಸಾಥ್ ನೀಡಲಿದ್ದಾರೆ. 24 ದಿನಗಳ ಕಾಲ ನಡೆಯಲಿರುವ ಈ ಪ್ರವಚನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಅವರು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here