ಕಲಬುರಗಿ : ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಲಬುರಗಿ ರಂಗಾಯಣವು ಸಾಮಾಜಿಕ ಅರಿವು ಮೂಡಿಸಲು ಬೀದಿ ನಾಟಕಗಳನ್ನು ಆಯೋಜಿಸಿರುವುದು ಉತ್ತಮ ನಡೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಎಚ್. ಟಿ.ಪೋತೆ ಹೇಳಿದರು.
ದೇಶದಲ್ಲಿ ಜಾತಿ ಪದ್ಧತಿ ನಾಶವಾಗುವ ಬದಲಿಗೆ ಹೆಚ್ಚಳವಾಗುತ್ತಿರುವುದು ಕಳವಳಕಾರಕ ಸಂಗತಿ. ಕಲಾವಿದರಿಗೆ ಯಾವುದೇ ಜಾತಿ ಇಲ್ಲವೆಂದೇ ಎಲ್ಲರೂ ಮನುಷ್ಯತ್ವ ಹೆಚ್ಚು ಮಾಡುವ ಕಾರ್ಯದಲ್ಲಿ ತೊಡಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕ ಪ್ರದರ್ಶನ ಮಾಡುವಾಗ ಯಾವುದೇ ಸಮುದಾಯಗಳಿಗೆ ನೋವಾಗದಂತೆ ಜಾಗೃತಿ ಉಂಟು ಮಾಡಬೇಕು ಎಂದು ಕಿವಿಮಾತು ಹೇಳಿದರು.
ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಕರ್ನಾಟಕ ಸರ್ಕಾರದ ವಿಶೇಷ ಘಟಕ ಯೋಜನೆಯಡಿ ಬರುವ ಎಲ್ಲ ಕಾರ್ಯಕ್ರಮಗಳನ್ನು ಮೊದಲ ಆದ್ಯತೆ ಯಾಗಿ ಕಲಬುರಗಿ ರಂಗಾಯಣ ಆಯೋಜಿಸುತ್ತಿದೆ. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಅಧಿನಿಯಮದ ಕುರಿತು ಅರಿವು ಮೂಡಿಸುವ ಉದ್ದೇಶದ ಈ ಯೋಜನೆಯ ಎಲ್ಲ ಕಲಾವಿದರು ಪರಿಶಿಷ್ಟರೇ ಆಗಿರುವುದರಿಂದ ಅತ್ಯಂತ ಜವಾಬ್ದಾರಿಯುತವಾಗಿ ಸಾಮಾಜಿಕ ಜಾಗೃತಿಯಲ್ಲಿ ತೊಡಗಬೇಕು. ಅದಕ್ಕೂ ಮುನ್ನ ಕಲಾವಿದರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಹೇಳಿದರು.
ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಮಾತನಾಡಿ, ಬೀದಿ ನಾಟಕ ಆರಂಭಕ್ಕೂ ಮುನ್ನ ಕೊರೋನ ಜಾಗೃತಿ ಉಂಟು ಮಾಡಬೇಕು. ಸರ್ಕಾರ ಸೂಚಿಸಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.
ವಿಶೇಷ ಘಟಕ ಯೋಜನೆಯ ಸಂಚಾಲಕ ಸಂದೀಪ ಬಿ. ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮಿ ಸ್ವಾಗತಿಸಿದರು.
ಐದು ದಿನಗಳ ಬೀದಿ ನಾಟಕ ತರಬೇತಿ ಶಿಬಿರ ಏರ್ಪಡಿಸಿ, ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬೀದಿ ನಾಟಕಗಳನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರದರ್ಶನ ಮಾಡಲು ಸೂಚಿಸಲಾಯಿತು.