ಸುರಪುರ: ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಿ ದೌರ್ಜನ್ಯ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ದೌರ್ಜನ್ಯಕ್ಕೊಳಗಾದವರಿಗೆ ಕೂಡಲೇ ಪರಿಹಾರ ನೀಡಲು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕೋವಿಡ್ ಕಾಲದಲ್ಲೂ ರಾಜ್ಯದಲ್ಲಿ ಜಾತಿ ತಾರತಮ್ಯ ಹೆಚ್ಚುತ್ತಿದೆ.ತಾಲೂಕಿನ ಶಖಾಪುರ ಗ್ರಾಮದಲ್ಲಿ ದಲಿತ ಹೋರಾಟಗಾರರ ಮೇಲೆ ಹಲ್ಲೆ ನಡೆಸಲಾಗಿದೆ,ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗ್ರಾಮದವೊಂದರಲ್ಲಿ ದಲಿತ ಸಮುದಾಯದ ಯುವಕ ಅನ್ಯ ಜಾತಿಯ ಯುವತಿ ಪ್ರೀತಿಸಿದ ಎಂದು ಕೊಲೆ ಮಾಡಲಾಗಿದೆ.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕುದರಿ ಸಾಲೊಡಗಿಯಲ್ಲಿ ಹೆತ್ತವರ ಎದುರಲ್ಲೆ ಹಳ್ಳಕ್ಕೆ ಹಾಕಿ ಅಮಾನುಷವಾಗಿ ಕೊಲೆ ಮಾಡಲಾಗಿದೆ.ಇನ್ನೂ ಅನೇಕ ಕಡೆಗಳಲ್ಲಿ ಕ್ಷೌರ ಮಾಡುವುದಿಲ್ಲವೆಂದು ನಿರಾಕರಿಸಿ ದೌರ್ಜನ್ಯ ನಡೆಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಗ್ರಾಮದಲ್ಲಿನ ಯುವಕನಿಗೆ ಮೂತ್ರ ಕುಡಿಸಿ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ.ಬೆಂಗಳೂರಿನಲ್ಲಿ ಕೊರೊನಾ ಲಸಿಕೆ ಹಾಕುತ್ತಿದ್ದ ಸ್ಥಳಕ್ಕೆ ಹೋದ ಕಾರಣಕ್ಕೆ ದೌರ್ಜನ್ಯ ನಡೆಸಲಾಗಿದೆ.ಇನ್ನು ಅನೇಕ ಗ್ರಾಮಗಳಲ್ಲಿನ ದಲಿತ ಕುಟುಂಬಗಳಿಗೆ ವಾಸಿಸಲು ಮನೆಗಳಿಲ್ಲ,ಶವ ಸಂಸ್ಕಾರಕ್ಕೆ ಸ್ಮಶಾನಗಳಿಲ್ಲ ಇಂತಹ ಅನೇಕ ಸಮಸ್ಯೆಗಳು ಕಾಡುತ್ತಿವೆ.ಇವೆಲ್ಲವುಗಳನ್ನು ಸರಕಾರ ಪರಿಹರಿಸಬೇಕು ಮತ್ತು ದೌರ್ಜನ್ಯಕ್ಕೊಳಗಾದವರಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಹೋರಾಟಗಾರರಾದ ನಾಗಣ್ಣ ಕಲ್ಲದೇವನಹಳ್ಳಿ ಪ್ರಕಾಶ ಆಲ್ಹಾಳ ಮಾಳಪ್ಪ ಕಿರದಹಳ್ಳಿ ವೀರಭದ್ರಪ್ಪ ದೊಡ್ಮನಿ ಯಲ್ಲಪ್ಪ ಚಿನ್ನಾಕಾರ ಶಿವಶಂಕರ ಹೊಸ್ಮನಿ ತಿಪ್ಪಣ್ಣ ಶೆಳ್ಳಗಿ ಮಾನಪ್ಪ ಶೆಳ್ಳಗಿ ಮಲ್ಲಪ್ಪ ದೊಡ್ಮನಿ ವಿಶ್ವನಾಥ ಝಂಡದಕೇರಾ ಸೇರಿದಂತೆ ಅನೇಕರಿದ್ದರು.