ಕಲಬುರಗಿ: ಸೋಲಾಪೂರ-ಯಶ್ವಂತಪೂರ ರೈಲಿಗೆ ಗೌತಮ್ ಬುದ್ಧ ಎಕ್ಸ್ಪ್ರೇಸ್ ಎಂದು ನಾಮಕರಣ ಮಾಡಬೇಕು ಮತ್ತು ಕಲಬುರಗಿ ಬೀದರ ರೈಲಿಗೆ ಡಾ. ಬಾಬು ಜಗಜೀವನರಾಮ ಎಂದು ಹೆಸರು ನಾಮಕರಣ ಮಾಡಬೇಕು ಹಾಗೂ ರೇಲ್ವೆ ವಿಭಾಗೀಯ ಕಛೇರಿಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕೆಂದು ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್.ಫರತಾಬಾದ ತಿಳಿಸಿದರು.
ಮಾಜಿ ರೈಲ್ವೆ ಕೇಂದ್ರ ಸಚಿವರಾದ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಇದ್ದಾಗ ಹಾಗೂ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿ ಸ್ಪಂಧಿಸಿ ಬೇಡಿಕೆಯನ್ನು ಈಡೇರಿಸುವುದಾಗಿ ಆಶ್ವಾಸನೆಯನ್ನು ಕೊಟ್ಟಿರುತ್ತಾರೆ. ಆದರೆ ಬೇಡಿಕೆ ಮಾತ್ರ ಈಡೇರಿಸಿರುವುದಿಲ್ಲ. ಅದೇ ರೀತಿಯಾಗಿ ಆಗಿನ ರೈಲ್ವೆ ಮಂತ್ರಿಗಳಾಗಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಇದ್ದ ಸಂದರ್ಭದಲ್ಲಿ ಕಲಬುಗಿಯ ರೈಲ್ವೆ ವಿಭಾಗೀಯ ಕಛೇರಿ ಕಾಮಗಾರಿಗಾಗಿ ಭೂಮಿ ಖರೀದಿ ಮಾಡಿ, ಕಾಮಗಾಗಿಯನ್ನು ಪ್ರಾರಂಭ ಮಾಡಿದ್ದರು. ಈಗಿನ ಕೇಂದ್ರ ಸರಕಾರ ಅಧಿಕಾರದ ಅವಧಿಯಲ್ಲಿ ಕಾಮಗಾರಿಯಾಗದೆ ಸುಮಾರು ೭ ವರ್ಷಗಳಿಂದ ಕಲಬುಗಿ ರೈಲ್ವೆ ವಿಭಾಗಿಯ ಕಛೇರಿ ಕಾಮಗಾರಿಯು ನೆನೆಗುದ್ದಿಗೆ ಬಿದಿದೆ ಎಂದರು.
ಕಲಬುಗಿ ರೈಲ್ವೆ ವಿಭಾಗಿಯ ಕಾಮಗಾರಿಯು ಸಂಪೂರ್ಣವಾದರೆ, ಇಲ್ಲಿನ ಜನರಿಗೆ ಉದ್ಯೋಗ ದೊರಕಿದಂತಾಗುತ್ತದೆ, ಸ್ವಲ್ಪದರ ಮಟ್ಟಿಗೆ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಿದಂತಾಗುತ್ತದೆ ಎಂಬುವುದು ನಮ್ಮ ಸಂಘಟನೆಯ ಆಶಾಭಾವನೆಯಾಗಿದೆ. ಪ್ರಯುಕ್ತ ಈ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ವೇದಿಕೆಯು ಮನವಿ ಮಾಡುತ್ತದೆ ಎಂದು ಫರತಾಬಾದ ಹೇಳಿದರು.
ಈ ಸಂದರ್ಭದಲ್ಲಿ ಸುರೇಶ ಹಸಗುಡಿ, ಅಂಬು ಮಸ್ಕಿ, ಸತೀಶ ಪರತಾಬಾದ, ಅಕ್ಷಯ, ರವಿ ವಳಕೇರಿ, ರಾಹುಲ್ ಫರತಾಬಾದ, ಸುನೀಲ ಚವ್ಹಾಣ ಸೇರಿದಂತೆ ಇನ್ನಿತರರು ಇದ್ದರು.