ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಫೋನ್-ಇನ್ ಕಾರ್ಯಕ್ರಮ ವಿನೂತನ ತಂತ್ರ: ಅಮರನಾಥ ಪಾಟೀಲ

0
9

ಕಲಬುರಗಿ: ಕರೋನಾದ ಸಂದಿಗ್ಧ ಪರಿಸ್ಥಿತಿ ಮತ್ತು ಹೊಸ ಮಾದರಿಯಲ್ಲಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಬೇಕಾಗಿರುವುದರಿಂದ ಅವರಿಗೆ ಸೂಕ್ತ ಮಾರ್ಗದರ್ಶನ, ಮಾನಸಿಕ ಸ್ಥೈರ್ಯ ಅತ್ಯವಶ್ಯಕ. ವಿದ್ಯಾರ್ಥಿಗಳು ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಸಂಶಯಗಳಿಗೆ ಪರಿಹಾರ ಹಾಗೂ ಸಲಹೆಗಳನ್ನು ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಪಡೆಯುವ ಫೋನ್-ಇನ್ ಕಾರ್ಯಕ್ರಮ ಅದ್ಭುತ, ವಿನೂತನ ಹಾಗೂ ಪರಿಣಾಮಕಾರಿಯಾಗಿದ್ದು, ಇದಕ್ಕೆ ಸಹಕರಿಸಿದ ಶಿಕ್ಷಣ ಇಲಾಖೆ, ಸಂಪನ್ಮೂಲ ವ್ಯಕ್ತಿಗಳ ತಂಡ ಅಭಿನಂದನಾರ್ಹರೆಂದು ಮಾಜಿ ಎಮ್ಮೆಲ್ಸಿ ಅಮರನಾಥ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕ, ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರ, ಮಿಲೇನಿಯಂ ಕನ್ನಡ ಮತ್ತು ಆಂಗ್ಲ್ ಮಾಧ್ಯಮ ಶಾಲೆ, ವಿಜ್ಞಾನ ಪದವಿ ಪೂರ್ವ ಕಾಲೇಜು ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ಜು.೧ರಿಂದ ೧೪ ದಿವಸಗಳ ಕಾಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಜರುಗಿದ ಫೋನ್-ಇನ್ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಸಂಜೆ ಜರುಗಿದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಎಸ್ಸೆಸ್ಸೆಲ್ಸಿ ಪರೀಕ್ಷೆ ಏರ್ಪಡಿಸುವುದಕ್ಕೆ ಸರ್ಕಾರವು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿಲ್ಲ. ಬದಲಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏರ್ಪಡಿಸಿದೆಯೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕ-ಪೋಷಕ ವರ್ಗದವರು ಸಹಕಾರ ನೀಡಿ ಪರೀಕ್ಷೆ ಯಶಸ್ವಿಗೊಳಿಸಬೇಕು. ನಮ್ಮ ಭಾಗದಲ್ಲಿ ಫಲಿತಾಂಶ ವೃದ್ಧಿಗೆ ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮದ ಹಮ್ಮಿಕೊಳ್ಳುತ್ತಿದ್ದು ಶ್ಲಾಘನೀಯವಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನಕೂಲವಾಗುತ್ತಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕೆಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಡಯಟ್ ಕಮಲಾಪುರನ ಅಭಿವೃದ್ಧಿ ಉಪನಿರ್ದೇಶಕ ಮಜರ್ ಹುಸೇನ್ ಮಾತನಾಡಿ, ಪ್ರಸ್ತುತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದು ಸವಾಲಾಗಿ ಸ್ವೀಕರಿಸಿ, ಅದಕ್ಕೆ ತಕ್ಕಂತೆ ಅಗತ್ಯ ಸಿದ್ಧತೆಯನ್ನು ನಮ್ಮ ಇಲಾಖೆ ಈಗಾಗಲೇ ಮಾಡಿಕೊಂಡಿದೆ. ಶಿಕ್ಷಕರು ಫೋನ್-ಇನ್ ಕಾರ್ಯಕ್ರಮ ಸೇರಿದಂತೆ ಆನಲೈನ್ ಮೂಲಕ ವಿದ್ಯಾಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕ-ಪೋಷಕರು ಯಾವುದೇ ರೀತಿಯ ಗಾಬರಿ ಪಡುವುದು ಅವಶ್ಯಕತೆಯಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮತ್ತು ಆರೋಗ್ಯ ಎರಡನ್ನು ದೃಷ್ಟಿಯಲ್ಲಿರಿಸಿಕೊಂಡು ಸರ್ಕಾರ ಪರೀಕ್ಷೆ ಏರ್ಪಡಿಸಿದೆ. ಕರೋನಾ ನಿಯಮಗಳನ್ನು ಪಾಲಿಸಲಾಗುವುದು. ಸರ್ಕಾರಿ ಶಾಲೆಗಳ ಶಿಕ್ಷಕರ ಬಗ್ಗೆ ಸಮಾಜದ ಅಪವಾದ ಬೇಡ. ಇದೇ ಶಿಕ್ಷಕರು ಕರೋನಾದ ಕಷ್ಟದ ಕಾಲದಲ್ಲಿಯೂ ಇಂತಹ ಕಾರ್ಯಗಳನ್ನು ಮಾಡುತ್ತಿರುವುದು ಗಮನಿಸಬೇಕೆಂದು ಮಾರ್ಮಿಕವಾಗಿ ನುಡಿದರು.

ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ ಜಿಲ್ಲೆಯ ವಿವಿಧ ಪ್ರೌಢಶಾಲಾ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಸತ್ಕರಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಸಾ.ಶಿ.ಇ ಅಪರ ಆಯುಕ್ತ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಶಿವರಾಚಪ್ಪ ವಾಲಿ, ಗುವಿವಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಮಾಲಿ ಪಾಟೀಲ, ವಿಜ್ಞಾನ ವಿಷಯ ಪರಿವೀಕ್ಷಕ ಹೃಷಿಕೇಶ ದಂತಕಾಳೆ, ಕ.ರಾ.ಮಾ.ಶಾ.ಶಿ.ಸಂಘದ ವಿಭಾಗ ಪ್ರಮುಖ ಮಹೇಶ ಬಸರಕೋಡ, ಕ.ರಾ.ಪ್ರೌ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ, ಅಣ್ಣಾರಾವ ಗಣಮುಖಿ ಪಿಯು ಕಾಲೇಜಿನ ಪ್ರಾಚಾರ್ಯ ಶಿವರಾಜ ಎಂ.ನಂದಗಾಂವ, ಉಪನ್ಯಾಸಕ ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ತಾಂತ್ರಿಕ ಸಹಾಯಕ ಚಂದ್ರಶೇಖರ ಪಾಟೀಲ, ಸಂಪನ್ಮೂಲ ವ್ಯಕ್ತಿ ಕರಬಸಯ್ಯ ಮಠ ವೇದಿಕೆ ಮೇಲಿದ್ದರು.

ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ, ಪ್ರಮುಖರಾದ ಶಿವಲಿಂಗಪ್ಪ ಕೋಡ್ಲಿ, ಶಿವಲಿಂಗಪ್ಪ ಮೂಲಗೆ, ಸಿದ್ದರಾಮ ಬೇತಾಳೆ, ವಿಲಾಸರಾವ ಸಿನ್ನೂರಕರ್, ಸಂಜೀವಕುಮಾರ ಪಾಟೀಲ, ಚಂದ್ರಶೇಖರ ಗೋಶಾಳ್, ಅಣ್ಣಾರಾವ ಬಿರಾದಾರ, ರವಿಕುಮಾರ ಹೂಗಾರ, ಪ್ರಭುಲಿಂಗ ಮೂಲಗೆ, ಭೀಮರಾವ ಮೂಲಗೆ, ಸಂತೋಷಕುಮಾರ ಕೋಟನೂರ, ನಾಗೇಂದ್ರಪ್ಪ ಕಲಶೆಟ್ಟಿ, ರೇಣುಕಾಚಾರ್ಯ ಸ್ಥಾವರಮಠ, ನೀಲಕುಮಾರ ಧೋತ್ರೆ, ಹಣಮಂತರಾಯ ದಿಂಡೂರೆ ಸೇರಿದಂತೆ ಮತ್ತಿತರರಿದ್ದರು.

ಶಿಕ್ಷಕರುಗಳಾದ ಶೀತಲ್ ಜಾಧವ ಪ್ರಾರ್ಥಿಸಿದರು. ಶಿವಶರಣ ಉದನೂರ ಸ್ವಾಗತಿಸಿದರು. ಚಂದ್ರಕಾಂತ ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಪಾಲ ಭೋಗಾರ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here