ಕಲಬುರಗಿ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಶುರುವಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಹಾಗೂ ಸೂಕ್ತ ಕ್ರಮಕೈಗೊಳ್ಳಲು ಚಿತ್ತಾಪುರ, ಶಹಾಬಾದ್ ಹಾಗೂ ಕಾಳಗಿ ತಾಲೂಕು ತಹಶಿಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯಾಧಿಕಾರಿಗಳೊಂದಿಗೆ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದರು.
ಕಳೆದ ಬಾರಿ ಉಂಟಾದ ನೆರೆಯಿಂದಾಗಿ ಹಲವು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದರೆ, ಅನೇಕ ಜನರು ನಿರ್ವಸಿತರಾಗಿದ್ದರು. ಅಪಾರ ಪ್ರಮಾಣದ ಆಸ್ತಿ – ಪಾಸ್ತಿಯೂ ನಷ್ಟವಾಗಿತ್ತು. ಈ ಬಾರಿಯೂ ಪ್ರವಾಹದ ಎಚ್ಚರಿಕೆ ಘಂಟೆ ಬಾರಿಸುತ್ತಿದ್ದು, ಒಂದು ವೇಳೆ ಪ್ರವಾಹ ಉಂಟಾದರೆ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ರೈತರ ಬೆಳೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಗತ್ಯ ಸಲಹೆ ಸೂಚನೆ ನೀಡಲಾಯಿತು ಎಂದು ಅವರು ಹೇಳಿದರು.
” ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಸಂಭವಿಸಬಹುದಾದ ನೆರೆಯನ್ನು ಎದುರಿಸಲು ಇಡೀ ಚಿತ್ತಾಪುರ ಆಡಳಿತ ಸಜ್ಜಾಗಿ ನಿಂತಿದೆ. ನಾನೇ ಖುದ್ದಾಗಿ ಈ ಕುರಿತು ಗಮನ ಹರಿಸುತ್ತಿದ್ದು, ನೆರೆಯಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆಂದು ನನ್ನ ಜನರಿಗೆ ನಾನು ಭರವಸೆ ನೀಡುತ್ತಿದ್ದೇನೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಕೆಳಗಿನ ಸಹಾಯವಾಣಿಗೆ ವಾಟ್ಸಾಪ್ ಮಾಡುವ ಮೂಲಕ ಚಿತ್ತಾಪುರ ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ವಾಟ್ಸಾಪ್ ಸಹಾಯವಾಣಿ ಸಂಖ್ಯೆ : 9900913913 ಶಾಸಕರೊಂದಿಗೆ ಹಂಚಿಕೊಳ್ಳಬಹುದು.