ಮತ್ತೆ  ಭೀಮಾ ತೀರವೆಂದರೆ….

0
193

ಇನ್ನೇನಿಲ್ಲ… ಭೀಮಾತೀರದ  ಹಂತಕರೆಂಬ ” ಪದ ” ಮತ್ತೆ  ಮತ್ತೆ  ನನ್ನ ಚಿತ್ತಭಿತ್ತಿಯ  ಮೇಲೆ ಘೋರ ದಾಳಿ  ಮಾಡಿದಂತೆ  ನೆನಪಿನ ” ಕ್ರೂರಪದ “ವಾಗಿ  ನನ್ನೆದೆಯಲ್ಲಿ  ಸಾವಿರ ಡೊಳ್ಳು  ಬಡಿದಂತಾಗುತ್ತದೆ. ಅದ್ಯಾವುದೋ  ತರಕಲಾಂಡಿ ಖೂನಿಕೋರರಿಂದಾಗಿ  ಇಡೀ  ಭೀಮೆಯ ಸೀಮೆಯನ್ನು ಹೀಗೆ ಗುರುತಿಸುವುದೇ…!?  ಎಂಬ ಸಹಜ ಸಿಟ್ಟು, ಸಂಕಟ, ಬೇಸರ ನನಗಿದೆ.

Contact Your\'s Advertisement; 9902492681

ನೆನಪಿರಲಿ… ಭೀಮೆಯೆಂಬುದು  ಅನುಭಾವ  ಲೋಕದ  ಆಡುಂಬೊಲ. ಜಾನಪದರ ಕಣಜ ಭೂಮಿ. ಸಾಹಿತಿ – ಸಂಶೋಧಕರ ಮಹಾಮನೆ. ರಂಗ ಸಂಸ್ಕೃತಿಯ ನೆಲೆವೀಡು. ತತ್ವ ಜ್ಞಾನ ಪದಗಳ ಹರಿಕಾರ ಕಡಕೋಳ ಮಡಿವಾಳಪ್ಪ,  ವಚನಕಾರರ ಮೊದಲ  ಸಾಲಿನ ಮೊದಲಿಗರಲ್ಲಿನ ಷಣ್ಮುಖ ಶಿವಯೋಗಿ,  ದಾಸೋಹ ಯೋಗಿ  ಮತ್ತು  ಕೃಷಿ ಕಾಯಕಜೀವಿ ಅಳಗುಂಡಗಿ ಶರಣಬಸಪ್ಪ  ಈ ನೆಲದ ಮಹಾ ಮಹಿಮರು.  ಹಾಗೆಯೇ  ಪಿ. ಧೂಲಾಸಾಹೇಬರೆಂಬ  ಜಿಜ್ಞಾಸು, ಅನುಭಾವಿ ಮಧುರ ಚೆನ್ನರು, ಮತ್ತವರ  ಸ್ನೇಹಶೀಲ  ತಿತೀಕ್ಷೆಯ  ಹಲಸಂಗಿ  ಗೆಳೆಯರ ಬಳಗ  ಓಡಾಡಿದ ಪ್ರಾತಃಸ್ಮರಣೀಯ ಪುಣ್ಯಭೂಮಿ ಈ ನೆಲ.  ವರನಟ ಡಾ. ರಾಜಕುಮಾರರಷ್ಟು ಪ್ರತಿಭಾಶಾಲಿ – ಅಭಿನಯ ಚತುರ ಕಲಾವಿದ  ಹಂದಿಗನೂರ ಸಿದ್ರಾಮಪ್ಪ ಇದೇ  ಪರಿಸರದವರು.

ಮರೆಯುವ  ಮೊದಲು…ಖ್ಯಾತ  ಸಂಶೋಧಕ, ಸಾಹಿತಿ ಡಾ. ಎಂ.ಎಂ.ಕಲಬುರ್ಗಿ,   ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (ಕೊಪ್ಪಳ ) ರಾಗಿದ್ದ  ಜವಾರಿ ಸಾಹಿತಿ  ಸಿಂಪಿ ಲಿಂಗಣ್ಣ ಅವರು ಇದೇ ನೆಲದವರು. ನಮ್ಮ  ಕಾಲದ ಸಂಸ್ಕೃತಿ ಚಿಂತಕಿ,  ನಮ್ಮ ನಡುವಿನ ಬಾಳಿ ಮೀನಾಕ್ಷಿ , ನಾಟಕಕಾರರಾದ  ಎಲ್.ಬಿ.ಕೆ. ಆಲ್ದಾಳ ಮತ್ತು  ಜೇವರಗಿ ರಾಜಣ್ಣನವರೆಗೂ ಪಟ್ಟಿ ಮಾಡುತ್ತಾ ನಡೆದರೆ… ನಮಗೆ ಪವಾಡ ಸದೃಶ  ದೊಡ್ಡ ಪಟ್ಟಿಯೇ  ದೊರಕುತ್ತದೆ. ಜೀವಧರ್ಮ ಬಾಳಿ, ಬದುಕಿದ ನಿತ್ಯ ಜೀವನದ ಲೆಕ್ಕವಿಡದ (ಆದರೆ ಲೆಕ್ಕಕ್ಕೆ ಬಾರದವರೆಂದು ಭಾವಿಸಬಾರದು) ಅಸಂಖ್ಯಾತರು  ಇವತ್ತಿಗೂ  ನೆಲಧರ್ಮ ಸಂಸ್ಕೃತಿ ಬದುಕುತ್ತಿರುವುದನ್ನು  ನೆನಪಿಡಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here