ಧಾರವಾಡ: ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನೂತನವಾಗಿ ತೆರೆಯಲಾಗಿರುವ “ಸಾಮಾನ್ಯ ಸೇವಾ ಕೇಂದ್ರ”ವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ರೈತಾಪಿ ಜನರು ಪಹಣಿ ಪತ್ರ ಪಡೆಯುವುದಕ್ಕಾಗಿ ಹಾಗೂ ಬೆಳೆ ವಿಮೆ ಪಾವತಿಸುವುದಕ್ಕಾಗಿ ನಗರ ಪ್ರದೇಶಕ್ಕೆ ತೆರಳುವುದರಿಂದ ಸಮಯ ವ್ಯರ್ಥವಾಗುವುದರ ಜತೆಗೆ ಹೆಚ್ಚಿನ ಖರ್ಚು ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಳ್ಳಿಗಳಲ್ಲಿ ಇಂಥಹ ಸಾಮಾನ್ಯ ಸೇವಾ ಕೇಂದ್ರಗಳು ಕಾರ್ಯಾರಂಭ ಮಾಡುವುದರಿಂದ ಗ್ರಾಮೀಣರಿಗೆ ಆಗುತ್ತಿದ್ದ ಹೊರೆ ಕಡಿಮೆ ಆಗುತ್ತದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಅಮೃತ ದೇಸಾಯಿ, ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಬಸವರಾಜ ಜೀವಣ್ಣವರ, ಜಿಲ್ಲಾ ವ್ಯವಸ್ಥಾಪಕ ಪ್ರವೀಣ್ ನವಲಗುಂದ, ಸಿ.ಎಸ್.ಸಿ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಶೋಭಾ ಹಂಚಾಟೆ, ಉಪಾಧ್ಯಕ್ಷ ದಯಾನಂದ ತೋಟಗಿ, ವಾಸುದೇವ ಸುರಕೋಡ, ವಿಜಯ ರಜಪೂತ್ ಸೇರಿದಂತೆ ಇತರರು ಇದ್ದರು.