847 ಕೋಟಿ ರೂಪಾಯಿಗಳ ತೆರಿಗೆ ಹಣ ನಷ್ಟ: ತಕ್ಷಣ ಮುಖ್ಯಮಂತ್ರಿಗಳ ಮಧ್ಯ ಪ್ರವೇಶಕ್ಕೆ ಆಪ್‌ ಆಗ್ರಹ

0
15

ಬೆಂಗಳೂರು: ಪ್ರತಿವರ್ಷ ಕೊಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ಉಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ ಅಳವಡಿಕೆ ಕಾರ್ಯಕ್ಕೆ ನಗರದ ಸಚಿವರು ಹಾಗೂ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ.

ಇದರಿಂದ ಮೂರು ವರ್ಷಗಳಲ್ಲಿ ಸುಮಾರು 847 ಕೋಟಿ ರೂಪಾಯಿಗಳ ನಷ್ಟವಾಗಿದ್ದು, ಜನರ ತೆರಿಗೆ ಹಣ ಅನಗತ್ಯ ವ್ಯವಯವಾಗುವುದನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ನಗರದ ಪ್ರೆಸ್‌ಕ್ಲಬ್‌ ನಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‌ಇಡಿ ಬಲ್ಬ್‌ ಗಳ ಅಳವಡಿಕೆಗೆ ಷಹಾಪೋರ್ಜಿ ಪಲ್ಲೊಂಜಿ, ಎಸ್‌ಎಮ್‌ಎಸ್‌ ಇನ್ಪ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್ಸ್‌ – ಈ ಮೂರು ಕಂಪನಿಗಳ ಕನ್ಸೋರ್ಷಿಯಮ್‌ ಗೆ 2018 ರಲ್ಲಿ ಟೆಂಡರ್‌ ನೀಡಲಾಗಿತ್ತು. ನಗರದಲ್ಲಿ ಬೀದಿ ದೀಪಗಳ ವಿದ್ಯುತ್‌ ಬಳಕೆಯ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಪಿಡಬ್ಲೂಸಿ ಸಂಸ್ಥೆಯನ್ನೂ ನೇಮಿಸಲಾಗಿತ್ತು.

ಈ ಸಂಸ್ಥೆಯ ವತಿಯಿಂದ ನಡೆಸಲಾದ ಅಧ್ಯಯನದಲ್ಲಿ ಬಿಬಿಎಂಪಿ ಪ್ರತಿವರ್ಷ ತನ್ನ 4.85 ಲಕ್ಷ ಬೀದಿದೀಪಗಳ ನಿರ್ವಹಣೆಗೆ 240 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಅದರಲ್ಲಿ ಸುಮಾರು 200 ಕೋಟಿ ರೂಪಾಯಿಗಳನ್ನು ಬೆಸ್ಕಾಂಗೆ ನೀಡಲಾಗುತ್ತಿದೆ. ವರ್ಷಪೂರ್ತಿ ಬೀದಿದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಈ ವೆಚ್ಚ ಸುಮಾರು 330 ಕೋಟಿಗಳಿಗೆ ತಲುಪುತ್ತದೆ ಎನ್ನುವುದನ್ನ ಸ್ಥಳೀಯ ಆಡಳಿತ ಅಂದಾಜು ಕೂಡಾ ಮಾಡಿದೆ.

ಜಾಗತಿಕ ಟೆಂಡರ್‌ ಕರೆಯುವ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವೆಚ್ಚವನ್ನು 233 ಕೋಟಿ ರೂಪಾಯಿಗಳಿಗೆ ಇಳಿಸುವ ಅಂದಾಜು ಮಾಡಲಾಗಿತ್ತು. ಈ ಉಳಿತಾಯ ಎಲ್‌ಇಡಿ ವಿದ್ಯುತ್‌ ದೀಪಗಳ ಅಳವಡಿಕೆಯಿಂದಾಗುವ ವಿದ್ಯುತ್‌ ಬಳಕೆಯಲ್ಲಿನ ಇಳಿಕೆಯಿಂದ ಸಾಧ್ಯವಾಗುತ್ತಿತ್ತು.

ವಿದ್ಯುತ್‌ ಬಳಕೆಯ ಪ್ರಮಾಣ 290 ಕೋಟಿ ರೂಪಾಯಿಗಳಿಂದ 33 ಕೋಟಿ ರೂಪಾಯಿಗಳಿಗೆ ಇಳಿಕೆಯಾಗುತ್ತಿತ್ತು. 5 ಲಕ್ಷ ಎಲ್‌ಇಡಿ ವಿದ್ಯುತ್‌ ದೀಪಗಳನ್ನು ಅಳವಡಿಸಿ ಅವುಗಳ ಸಮರ್ಪಕ ನಿರ್ವಹಣೆಯಿಂದ ಶೇಕಡಾ 85.50% ರಷ್ಟು ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಈ ಕನ್ಸೋರ್ಷಿಯಮ್‌ ಸುಮಾರು 175 ಕೋಟಿ ರೂಪಾಯಿಗಳನ್ನು ಆದಾಯ ಪಡೆದುಕೊಳ್ಳುತ್ತಿತ್ತು.

ಆದರೆ, ಇಂತಹ ಉತ್ತಮ ಯೋಜನೆ ಕಾರ್ಯಗತಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯ ದುಷ್ಟ ಶಕ್ತಿಗಳ ಕಾರಣ. ಸೆಪ್ಟೆಂಬರ್‌ 9 ರಂದು ಯಶವಂತಪುರದಲ್ಲಿ ಎಲ್‌ ಇಡಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ನೌಕರರ ಮೇಲೆ ನಗರದ ಕೆಲ ಸಚಿವರು ಹಾಗೂ ಮಾಜಿ ಕಾರ್ಪೋರೇಟರ್‌ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪ್ರತಿನಿತ್ಯ ಅವರ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ವವಿಖ್ಯಾತ ಬೆಂಗಳೂರು ನಗರದಲ್ಲೇ ಇಂತಹ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾಧನೀಯ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆ ಕಾರ್ಯಗತವಾಗಿದ್ದರೆ ಸುಮಾರು 847 ಕೋಟಿ ರೂಪಾಯಿಗಳ ಉಳಿತಾಯ ಆಗುತ್ತಿತ್ತು. ಆದರೆ ರಾಜಕೀಯ ಪ್ರತಿನಿಧಿಗಳ ದುಷ್ಟ ಮನಸ್ಥಿತಿಯಿಂದ ಇದು ಸಾಧ್ಯವಾಗಿಲ್ಲ. ಈ ನಷ್ಟವನ್ನು *ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಆಡಳಿತ ನಡೆಸಿದ ಜೆಸಿಬಿ ಪಕ್ಷಗಳಿಂದ ವಸೂಲು ಮಾಡಿಕೊಳ್ಳಬೇಕು ಎಂದು ಮೋಹನ್‌ ದಾಸರಿ ಆಗ್ರಹಿಸಿದರು*.

ನಗರದ ಜನತೆಯ ಕೋಟ್ಯಾಂತರ ರೂಪಾಯಿ ಹಣವನ್ನು ಉಳಿಸುವಂತಹ ಯೋಜನೆಗೆ ಅಡ್ಡಗಾಲು ಹಾಕುವ ಮೂಲಕ ರಾಜಕಾರಣಿಗಳು ಅಭಿವೃದ್ದಿಯ ಪರವಲ್ಲ ಎನ್ನುವ ಧೋರಣೆಯನ್ನು ತೋರಿಸಿದ್ದಾರೆ.

ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿಬೇಕು ಹಾಗೂ ಬೀದಿ ದೀಪಗಳ ಎಲ್‌ಇಡಿ ಅಳವಡಿಕೆಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here