ಅಪ್ರತಿಮ ‘ರೈತಕವಿ’ ಚಂಸು ಪಾಟೀಲ..!

0
31

ನಾನಾಗ ಅಗ್ನಿ ಶ್ರೀಧರರವರ ‘ಅಗ್ನಿ’ ವಾರಪತ್ರಿಕೆಯ ಅಖಂಡ ಧಾರವಾಡ ಜಿಲ್ಲೆಯ ‘ವರದಿಗಾರ’ನಾಗಿ ಕೆಲಸ ಮಾಡುತ್ತಿದ್ದೆ. ಆಗ ಪತ್ರಕರ್ತ, ಸಾಹಿತಿ ಮೋಹನ ನಾಗಮ್ಮನವರ ಮೂಲಕ ಪರಿಚಯವಾದವನು ಚಂಸು ಪಾಟೀಲನು. ಅಂದರೆ ಸುಮಾರು ‌೧೦-೧೫ ವರ್ಷಗಳ ಹಿಂದೆಯೇ ನನ್ನ ಮತ್ತು ಚಂಸು ಪಾಟೀಲನ ಪರಿಚಯವಾಗಿತ್ತು. ಆ ಪರಿಚಯ ಅತೀವ ಸ್ನೇಹ ರೂಪಕ್ಕೆ ತಿರುಗಿತು. ಅಂದಿನಿಂದಲೂ ಚಂಸು ಪಾಟೀಲನು ಚಿರಪರಿಚಿತದನಾದನು…

ಅಷ್ಟೇಯಲ್ಲದೇ ನಾನು ಮತ್ತು‌ ಗೆಳೆಯರಾದ ಕವಿ, ನ್ಯಾಯವಾದಿ ವಿಜಯಕಾಂತ ಪಾಟೀಲ, ಕವಿ ಪತ್ರಕರ್ತ ಚಂಸು ಪಾಟೀಲ ಮತ್ತು ಉಳಿದ ಗೆಳೆಯರು‌ ಸೇರುತ್ತಿದ್ದೆವು.

Contact Your\'s Advertisement; 9902492681

ನಾನು‌ ‘ಅಗ್ನಿ’ಗೆ ಬರೆಯುವಾಗ ಆಗೆಲ್ಲಾ ಆವಾಗಿವಾಗೊಮ್ಮೆ ಪತ್ರಕರ್ತ, ಸಾಹಿತಿ, ಹೋರಾಟಗಾರ ಮೋಹನ ನಾಗಮ್ಮನವರ ಜೊತೆಗೆ ಧಾರವಾಡದ ‌’ಸೆಂಟ್ರಲ್‌ ಪಾರ್ಕ್‌’ನಲ್ಲಿ ಒಂದು ‘ಬೈಟೆಕ್’ ಕೂಡುತ್ತಿದ್ದೇವು. ನಾನು, ಕವಿ ವಿಜಯಕಾಂತ ಪಾಟೀಲ, ಪತ್ರಕರ್ತ ಚಂದ್ರು ತುರವಿಹಾಳ, ಕವಿ ರೈತ ಚಂಸು ಪಾಟೀಲ, ಮತ್ತು ಇನ್ನುಳಿದ ಇತರೇ ಸ್ನೇಹಿತರು ಸೇರುತ್ತಿದ್ದೇವು. ಆವಾಗ ಏನೇನೋ‌ ಮಾತುಕತೆಯಾಗುತ್ತಿತ್ತು. ಕೆಲ‌ ಕಾಲ ಚಂದ್ರು‌ ತುರವಿಹಾಳನ ರೋಮಿನಲ್ಲಿ ನಮ್ಮ ‘ವಾಸ್ತವ’ಕ್ಕೆ ಅನುಕೂಲ ಮಾಡಲು ಹೇಳುತ್ತಿದ್ದರು ಮೋಹನ ನಾಗಮ್ಮನವರ.

ಚಂದ್ರು ತುರವಿಹಾಳನ ರೋಮಿನ ನಂತರ ಹುಬ್ಬಳ್ಳಿಯಲ್ಲಿ ರೂಮು ಮಾಡಿದ್ದ ಚಂಸು ಪಾಟೀಲನ ರೂಮೇ ನನಗಂತೂ ಆಧಾರವಾಯಿತು. ಆಗ ಚಂಸು ‌ಪಾಟೀಲ ‘ಸಂಯುಕ್ತ ಕರ್ನಾಟಕ’ದಲ್ಲಿ ಉಪಸಂಪಾದಕನಾಗಿ ಹುಬ್ಬಳ್ಳಿ ಆವೃತ್ತಿಗೆ ‘ಸಾಪ್ತಾಹಿಕ ಪುರವಣಿಗೆ’ಗೆ‌ ಕೆಲಸ ಮಾಡುತ್ತಿದ್ದ. ಆಗೆಲ್ಲಾ ಚಂಸು ಪಾಟೀಲ ರೂಮು ನಮಗೆ ಗತಿಯಾಗಿತ್ತು.

ಆವಾಗಿವಾಗೊಮ್ಮೆ ‘ಒಂದು’ ಬೈಟಕ್’ ಕೂಡುತ್ತಿದ್ದೆವು.’ಬೈಟಕ್’ ಕೂತಾಗ ಚಂಸು ‌ಪಾಟೀಲ ತಾನು ಬರೆದ ಕವನಗಳನ್ನು ಓದುತ್ತಿದ್ದ. ಇದರೊಂದಿಗೆ ನಮ್ಮ ‌ಮಾತುಕತೆ ಜೋರಾಗಿಯೇ ನಡೆಯುತ್ತಿತ್ತು. ಆಗ ಚಂಸು ಪಾಟೀಲ ಹೇಳುತಿದ್ದ ಆತನಿಗೆ ಆ ‘ಸಂಯುಕ್ತ ಕರ್ನಾಟಕ’ದ ‘ಸಾಪ್ತಾಹಿಕ ಸೌರಭ’ದ ಕೆಲಸದಲ್ಲಿ‌ ಆಸಕ್ತಿ ಇಲ್ಲವೆಂದು. ಬದಲಾಗಿ ‌ತಾನು ರೈತನಾಗಬೇಕೆಂದು ಹಂಬಲಿಸುತ್ತಿದ್ದ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ‘ಕುನಬೇವ’ನವನಾದ ಚಂಸು ಪಾಟೀಲಗೆ ಊರಲ್ಲಿ ಒಂದಿಷ್ಟು ಭೂಮಿ ‌ಅಂದರೆ ‘ಹೊಲ’ವಿತ್ತು. ಆ ಹೊಲದಲ್ಲಿ ಕೆಲಸ ‌ಮಾಡಬೇಕು. ತಾನು ರೈತನಾಗಬೇಕೆಂದು. ಹಾಗೆಯೇ ಕೆಲ ವರ್ಷ ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಮಾಡಿದ ಚಂಸು ಪಾಟೀಲ ಅದರ ನಂತರದಲ್ಲಿ ಕೊನೆಗೂ ‘ಸಂಯುಕ್ತ ಕರ್ನಾಟ’ಕದ ‘ಸಾಪ್ತಾಹಿಕ’ ಕೆಲಸ ಬಿಟ್ಟು ರೈತನಾಗಲು ಮರಳಿ ತನ್ನೂರಾದ ಕುನಬೇವಗೆ ಮರಳಿದ. ರೈತನಾದ.

ರೈತನಾಗಿಯೂ ಆ ಕೆಲಸ-ಕಾರ್ಯದ ಜೊತೆಗೆಯೇ ತನ್ನಲ್ಲಿಯ ‘ಕವಿ’ಯತ್ವವನ್ನೂ‌ ಜೀವಂತವಾಗಿಟ್ಟುಕೊಂಡು‌ ಕಾವ್ಯ ರಚನೆಯನ್ನೂ ಮುಂದುವರೆಸಿಕೊಂಡ. ಹೀಗೆಯೇ ಹಲವಾರು ಕವನ ‌ಸಂಕಲನವನ್ನೂ ಹೊರ ತರತೊಡಗಿದ. ‘ಕವಿರೈತ’ನಾದ…

ಹೀಗೆಯೇ ಬದುಕಲು ಹತ್ತಿದ. ಈತನ ‘ಕೃಷಿ’ ನೈಸರ್ಗಿಕವಾದುದ್ದಾಯಿತು. ಸುಭಾಷ್ ಪಾಳೆಕಾರರ ಕೃಷಿ ಪ್ರಯೋಗವನ್ನೂ ಮಾಡಹತ್ತಿದ್ದ. ಹೀಗೆಯೇ ಸಾಗಿತು ಚಂಸು ಪಾಟೀಲನ ‘ಕವಿರೈತ’ ಕ್ರಿಯೆ…

ಅಂದ ಹಾಗೆ ಒಂದಿಷ್ಟು ಕಾಲ ಪಿ.ಲಂಕೇಶ್ ರ ‘ಲಂಕೇಶ್ ಪತ್ರಿಕೆ’ಯ ಮುಖ್ಯ ವರದಿಗಾರರಾಗಿದ್ದ ಟಿ.ಕೆ.ತ್ಯಾಗರಾಜರು ಪಿ.ಲಂಕೇಶ್ ತೀರಿದ ನಂತರ ತಮ್ಮದೇ ಆದ ಒಂದು ಪತ್ರಿಕೆ ಮಾಡಿದ್ದರಲ್ಲ, ಆ ಟಿ.ಕೆ.ತಾಗರಾಜರ ಪತ್ರಿಕೆಗೆ ಬರೆಯಲು ಬೆಂಗಳೂರಿಗೇ ಹೋದ. ಒಂದಿಷ್ಟು ದಿನ ಟಿ.ಕೆ.ತ್ಯಾಗರಾಜರ ಪತ್ರಿಕೆಗೆ ಬರೆದ. ಅಲ್ಲಿಂದ ಮತ್ತೇ ‌ಮರಳಿ ಕೂನಬೇವಗೇ ಬಂದ. ಹಾಗೆ ಬಂದವನೇ ಮತ್ತೆ ಅದೇ ‘ಕವಿರೈತಾಪಿ’ಯಾದ…
ಆ ಕತೆ ಹೀಗಿದೆ ನೋಡಿ…

ಸದ್ಯಕ್ಕೆ ಕವಿತೆ‌ ಕಟ್ಟುವ ಹೊಸ ತಲೆಮಾರಿನ ಕವಿಗಳ ಅನುಭವ ಲೋಕ ಬಹುಪಾಲು ಕೃಷಿಯೇತರ ನೌಕರಿಯದು. ಅಂತೆಯೇ ನಗರ ಜೀವನದಿಂದ ಹುಟ್ಟಿದ್ದು. ನಗರ ಬದುಕಿನಲ್ಲಿ ಕೃಷಿಯನ್ನೂ, ಗ್ರಾಮ ಜಗತ್ತನ್ನು‌ ನೆನಪಿಸಿಕೊಂಡು ಕಾವ್ಯ ಕಟ್ಟುತ್ತಿದ್ದಾನೆ ಚಂಸು ಪಾಟೀಲ.

ಆದರೆ ಹೊಸ ತಲೆಮಾರಿನಲ್ಲಿ ಕೃಷಿ ಮಾಡುತ್ತಲೇ, ಕಾವ್ಯ ಕೃಷಿಯನ್ನೂ ಎಡಬಿಡದೆ‌ ಮಾಡುವ ಕವಿಗಳ ಸಂಖ್ಯೆ ಈಗ ವಿರಳವಾದರೂ ಚಂಸು ಪಾಟೀಲ ಅದನ್ನು ‘ತಪಸ್ಸು’ನ್ನಾಗಿ ಮಾಡಿಕೊಂಡ. ಅಂತಹ ವಿರಳ ಕವಿಗಳಲ್ಲಿ ಎದ್ದು ಕಾಣುವ ಹೆಸರು ಚಂಸು ಪಾಟೀಲನದ್ದು. ಚಂಸು ಪಾಟೀಲ ಕೆಲಕಾಲ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಹಳ್ಳಿಗೆ ಮರಳಿದ.‌ ಈಗ ಪಕ್ಕಾ ಹಳ್ಳಿಗನಾಗಿ ನಯನಾಜೂಕಿನ ತೋರಿಕೆಯವನಾಗದೇ ಕೃಷಿಯಲ್ಲದೆ, ಹೊರಗಿನ ಸಂಪನ್ಮೂಲಗಳಿಲ್ಲದೆ ಕೃಷಿಯನ್ನೇ ನಂಬಿ ಬೇಸಾಯಗಾರನಾಗಿದ್ದಾನೆ ಚಂಸು ‌ಪಾಟೀಲ.

ಚಂಸು ಪಾಟೀಲನ ಕವಿತೆ ನೇರವಾಗಿ ಅವನ ಕೃಷಿ ಮತ್ತು ಗ್ರಾಮ ಜಗತ್ತಿನ ಅನುಭವ ಲೋಕದಿಂದ ಜೀವತಳೆದದ್ದಾಗಿದೆ. ಅದು ರಮ್ಯವಾದದ್ದಲ್ಲ ಬದಲಾಗಿ ಕಟುಸತ್ಯಗಳನ್ನು, ಕಹಿ ವಾಸ್ತವಗಳನ್ನು ಕಡು ದುಃಖದಲ್ಲಿ ಮಂಡಿಸುವಂತದ್ದು. ಗ್ರಾಮ ಮತ್ತು‌ ಕೃಷಿಯನ್ನು ನಗರದಲ್ಲಿದ್ದು ನೆನಪಿಸಿಕೊಂಡು ಬರೆದವರಲ್ಲಿ ರಮ್ಯತೆ ಇದ್ದರೆ, ಸ್ವತಃ ಕೃಷಿಯಲೋಕದಲ್ಲಿ ದಿನಕಳೆಯುವ ಚಂಸು ಪಾಟೀಲನಗೆ ಅದು ಕಹಿ ಅನುಭವವಾಗಿ ಕಾಣುವುದು ವಿಶೇಷವಾಗಿದೆ…

ರೈತಾಪಿಗಳ ಒಡಲೊಳಗಿನ ಸಿಟ್ಟು ಕೂಡ ಚಂಸು ಪಾಟೀಲನ ಕವಿತೆಯೊಳಗಡಗಿದೆ. ಹಾಗಂತಲೇ ರೈತಾಪಿ ಕಾವ್ಯವೆಂದು ರಿಯಾಯಿತಿ ಕೊಡುವ ಅಗತ್ಯವಿಲ್ಲ, ಬದಲಾಗಿ ಚಂಸು ಪಾಟೀಲನು ಈ ಅನುಭವಗಳನ್ನು ತೀವ್ರವಾಗಿ ಕಾಡುವ ಕವಿತೆಗಳನ್ನಾಗಿಸಿದ್ದಾನೆ.

ಚಂಸು ಪಾಟೀಲನ ಕಾವ್ಯವನ್ನು ಹೊರಜಗತ್ತಿಗೆ ಹಂಚಿಕೊಳ್ಳಲು ನೆರವಾದದ್ದು ಫೇಸ್ ಬುಕ್‌ ಸರಿಯಾದ ಸಾಧನವಾಗಿದೆ. ಚಂಸು ಪಾಟೀಲನ ಎಪ್ ಬಿ ಗೋಡೆಯನ್ನು ನೋಡುತ್ತಾ ಹೋದರೆ ನಿರಂತರವಾಗಿ ಕವಿತೆ ಕಟ್ಟಿರುವುದು ಕಾಣುತ್ತದೆ. ಇಲ್ಲಿ ಅವಸರಕ್ಕೆ ಎಣೆಯುವ ಎಪ್ ಬಿ ಕಾವ್ಯದ ಆರೋಪದಿಂದ ಚಂಸು ಪಾಟೀಲ ಮುಕ್ತನಾಗಿದ್ದಾನೆ. ಅಂತೆಯೇ ಎಫ್ ಬಿಯ ತುಂಡು ತುಂಡು ಕವಿತೆಗಳಿಗೆ ಬದಲಾಗಿ ದೀರ್ಘ ಪದ್ಯಗಳನ್ನೆ ಹೆಚ್ಚು ಬರೆದಿದ್ದಾನೆ ಚಂಸು ‌ಪಾಟೀಲ.

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಧುನಿಕ ಪ್ರಚಾರದ ಅಬ್ಬರಕ್ಕೆ ಬೀಳದೆ, ಸಾಹಿತ್ಯಲೋಕದ ಕೊಡುಕೊಳ್ಳುವಿಕೆಯ ಲೆಕ್ಕಾಚಾರವಿಲ್ಲದೇ ತನ್ನ ಪಾಡಿಗೆ ತಾನು ಹಳ್ಳಿಯೊಂದರಲ್ಲಿದ್ದು ತಾನು ಪಟ್ಟ ಪಾಡನ್ನೆ ಹಾಡು, ಕವನವಾಗಿಸುವ ಈ ಕವಿ ಹೊಸ ತಲೆಮಾರಿನಲ್ಲಿ ನಿಸ್ಸಂಶಯವಾಗಿ ವಿಶಿಷ್ಟವಾಗಿ ಕಾಣುತ್ತಾರನೆ ಚಂಸು ಪಾಟೀಲ. ಚಂದ್ರಶೇಖರ.ಸು.ಪಾಟೀಲ ಕಾವ್ಯನಾಮವಾಗಿ ‘ಚಂಸು’ ಎಂದಾಗಿದೆ.

ರಾಣೇಬೆನ್ನೂರು ತಾಲೂಕು ಹಾವೇರಿ ಜಿಲ್ಲೆಯ ಕೂನಬೇವು ಎಂಬ ಗ್ರಾಮ ಚಂಸು ಪಾಟೀಲನ‌ ಸದ್ಯದ ನೆಲೆಯಾಗಿದೆ.ಜೂನ್ 21, 1974 ರಲ್ಲಿ‌ ಹುಟ್ಟಿದ ಚಂಸು ಪಾಟೀಲ, ಕಿಟೆಲ್ ಕಾಲೇಜ್ ಧಾರವಾಡದಲ್ಲಿ 1995 ಬಿ.ಎ.ಪದವಿಯನ್ನು ಪಡೆದ.

ಬೆಂಗಳೂರಿನ ಟಿ.ಕೆ.ತ್ಯಾಗರಾಜರ ‘ನೋಟ’ ಎಂಬ ವಾರ ಪತ್ರಿಕೆಯಲ್ಲಿ 2000 ದಲ್ಲಿ ಕೆಲ ಕಾಲ ಬರೆಯುತ್ತಿದ್ದ ಚಂಸು ಪಾಟೀಲ. ಅದಕ್ಕೂ ಮೊದಲು ‘ಸಂಯುಕ್ತ ಕರ್ನಾಟಕ’ದ ಪತ್ರಕರ್ತನಾಗಿದ್ದ ಚಂಸು ಪಾಟೀಲ. ಕ್ರಾಂತಿ, ಸಂಯುಕ್ತ ಕರ್ನಾಟಕ, ದೈನಿಕ ಹುಬ್ಬಳ್ಳಿ- ದಾವಣಗೆರೆಗಳಲ್ಲಿ ಉಪಸಂಪಾದಕನಾಗಿ ಕೆಲಸ ನಿರ್ವಹಿಸಿದ. ಈ ಪತ್ರಕರ್ತ ವೃತ್ತಿಗೆ ವಿದಾಯ ಹೇಳಿ ಈಗ್ಗೆ 2006ರಿಂದ ಪೂರ್ಣಪ್ರಮಾಣದ ಕೃಷಿಕರನಾಗಿ ತನ್ನ ಮೂಲ ‘ಗುಣ’ ಕವನ ಕಟ್ಟುವದರ ಜೊತೆಗೆ ಚಂಸು ಪಾಟೀಲ ರೈತಾಪಿ ಜೀವನಕ್ಕೆ ಒಗ್ಗಿಹೋಗಿದ್ದಾನೆ.

ಈತನಕ ‘ಗೆಳೆಯನಿಗೆ’ 1995ರಲ್ಲಿ ಬಿ.ಎ. ಅಂತಿಮ ವರ್ಷದಲ್ಲಿದ್ದಾಗ ‘ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’. 2004ರಲ್ಲಿ ‘ಅದಕ್ಕೆ ಇರಬೇಕು’, 2009ರಲ್ಲಿ ಮೂರು ಕವನ ಸಂಕಲನಗಳು ಹೊರ ತಂದನು…

ಹೀಗೆಯೇ ಸಾಗಿದೆ ಚಂಸು ಪಾಟೀಲನ ‘ಕವಿರೈತ’ತ್ವ.ಹೀಗೆಯೇ ಮುಂದುವರೆಯಲಿ ಚಂಸು ಪಾಟೀಲನ ‘ಕವಿರೈತ’ತ್ವ..!

‌‌‌ ‌# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here