ಶಹಾಬಾದ : ಮಹಾತ್ಮ ಗಾಂಧೀಜಿ ಸತ್ಯ, ಶಾಂತಿ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪೂರೆ ಹೇಳಿದರು.
ಅವರು ಶನಿವಾರ ತಾಲೂಕಿನ ಭಂಕೂರ ಗ್ರಾಮದ ದೇವಿ ಕಲ್ಯಾಣ ಮಂಟಪದಲ್ಲಿ ಚಿತಾಪೂರ ಮಂಡಲದ ಭಾರತೀಯ ಜನತಾ ಪಕ್ಷದ ಭಂಕೂರ ಮಹಾಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಗಾಂಧೀ ಜಯಂತಿ ಹಾಗೂ ಲಾಲಾಬಹಾದ್ದೂರ್ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶವು ಈ ದಿನ ಇಬ್ಬರು ಮಹಾನ್ ವ್ಯಕ್ತಿಗಳಾದ ಮಹಾತ್ಮ ಗಾಂಧಿ ಹಾಗೂ ದಿವಂಗತ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸುತ್ತಿದೆ. ಮಹಾತ್ಮಗಾಂಧಿಯವರು ಸ್ವಾತಂತ್ರ್ಯದೊಂದಿಗೆ ಸ್ವಚ್ಛತಾ ಮಂತ್ರವನ್ನು ಸಹ ಉಚ್ಛರಿಸಿದರು. ಅಲ್ಲದೇ ತಾವೇ ಶೌಚಾಲಯವನ್ನು ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾದರು ಎಂದು ಹೇಳಿದರು.
ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಮಾತನಾಡಿ, ಗ್ರಾಮಸ್ವರಾಜ್ಯದ ಕನಸನ್ನು ಕಂಡ ಗಾಂಧೀಜಿಯವರು ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ.ಅಲ್ಲದೇ ಭಾರತದ ಪ್ರಧಾನ ಮಂತ್ರಿಗಳ ಪೈಕಿ ಲಾಲ್ ಬಹದ್ದೂರ್ ಶಾಸ್ತ್ರಿಗಳ ಹೆಸರು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಇವರ ಪ್ರಾಮಾಣಿಕ ವ್ಯಕ್ತಿತ್ವ, ಸರಳ ಜೀವನ, ಶುದ್ಧ ಆಡಳಿತದ ವೈಖರಿ ವಿಶ್ವಕ್ಕೆ ಮಾದರಿ ಎಂದು ಹೇಳಿದರು.
ಚಿತ್ತಾಪುರ ಬಿಜೆಪಿ ಮಂಡಲ ಅಧ್ಯಕ್ಷ ನೀಲಕಂಠರಾವ ಪಾಟೀಲ, ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆಗನೂರ, ಜಿಲ್ಲೆಯ ಉಪಾಧ್ಯಕ್ಷ ಬಸವರಾಜ ಬೆಣ್ಣೂರ್, ಚಿತ್ತಾಪುರ ಬಿಜೆಪಿ ಉಪಾಧ್ಯಕ್ಷ ಬಸವಂತರಾವ ಪಾಟೀಲ, ಚಿತ್ತಾಪುರ ತಾಪಂ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಮಾಸ್ಟರ್, ಚಿತ್ತಾಪುರ ಬಿಜೆಪಿ ಮಹಿಳಾ ಅಧ್ಯಕ್ಷೆ ನಗುಬಾಯಿ ಜಿತುರೆ, ಭಂಕೂರ ಗ್ರಾಪಂ ಅಧ್ಯಕ್ಷೆ ರಾಜಶ್ರೀ ಕಂಬಾನೂರ, ಭಂಕೂರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಯಲ್ಲಾಲಿಂಗ ನಾಗೂರ, ಮುಖಂಡರಾದ ವಿಠ್ಠಲನಾಯಕ, ಮಹೇಂದ್ರ ಕೋರಿ, ಗ್ರಾಪಂ ಸದಸ್ಯರಾದ ಲಕ್ಷ್ಮಿಕಾಂತ ಕಂದಗೂಳ,ಈರಣ್ಣ ಕಾರ್ಗಿಲ್, ಬಾಲಾಜಿ ಬುರಬುರೆ, ಈರಣ್ಣ ಯಾರಿ, ನಾಗರಾಜ ಹೂಗಾರ, ಸದಾಶಿವ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು.