ಕಲಬುರಗಿ: ನಗರದ ಸಂತ್ರಾಸವಾಡಿಯಲ್ಲಿರುವ ಹಿದಾಯತ್ ಸೆಂಟರ್ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಲಬುರಗಿ, ಹಿದಾಯತ್ ಚಾರಿಟಬಲ್ & ಎಜುಕೇಷನಲ್ ಟ್ರಸ್ಟ್, ಕಲಬುರಗಿ ಹಾಗೂ ಜಿಲ್ಲಾ ಆಸ್ಪತ್ರೆ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ರವರ ಜನ್ಮ ತಿಂಗಳಾದ ಚಾಂದ್ರಮಾನ ಕ್ಯಾಲೆಂಡರ್ ನ ಮೂರನೆಯ ತಿಂಗಳು ರಬೀಉಲ್ ಅವ್ವಲ್ ಆಗಮಿಸಿದ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕವು ಅಕ್ಟೋಬರ್ ೧೭ ರಿಂದ ೨೬ ರವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರವಾದಿ ಮುಹಮ್ಮದ್ (ಸ.ಅ) ಅತ್ಯುತ್ತಮ ಮಾದರಿ ಎಂಬ ಹತ್ತು ದಿನಗಳ ಅಭಿಯಾನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷರಾದ ಸೈಯದ್ ತನ್ವೀರ್ ಹಾಷ್ಮಿ ಅವರು ಮಾತನಾಡಿ ಪ್ರವಾದಿ ಮುಹಮ್ಮದ್ (ಸ.ಅ) ರವರ ಸಂದೇಶಗಳಾದ ನೈತಿಕ ಮೌಲ್ಯಗಳ ಪ್ರಸಾರ, ಸೌಹಾರ್ದತೆಯ ಸಂದೇಶ ಹಾಗೂ ಪರಸ್ಪರರನ್ನು ಅರಿಯುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಪುರುಷರು ಹಾಗೂ ಮಹಿಳೆಯರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಜುಲ್ಫಿಕಾರ್ ಅಲಿ, ಮುಹಮ್ಮದ್ ಮಝರುದ್ದೀನ್, ಮೆಡಿಕಲ್ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಅಶ್ವಿನ್, ತಾಂತ್ರಿಕ ಮೇಲ್ವಿಚಾರಕ ಶಬ್ಬೀರ್ ಅಹ್ಮದ್ ಹಾಗೂ ಇತರ ಹೊಣೆಗಾರರು ಉಪಸ್ಥಿತರಿದ್ದರು.