ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಲಯದಲ್ಲಿ ೭೨ನೇ ಸಂವಿಧಾನ ಸಮರ್ಪಣಾ ದಿನಾಚಾರಣೆ ಆಚರಿಸಲಾಯಿತು. ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶರಣಪ್ಪ ಬಿ ಹೊನ್ನಗೆಜ್ಜೆ ಮಾತನಾಡಿ ಸಂವಿಧಾನ ಶಿಲ್ಪಿ, ಪಿತಾಮಹರಾದ ಡಾ. ಬಿ.ಆರ್. ಅಂಬೇಡ್ಕರ ಅವರನ್ನು ಸ್ಮರಿಸುತ್ತಾ ಇವರು ನಮಗೆಲ್ಲ ಸಂವಿಧಾನದ ಬಗ್ಗೆ ತಿಳಿಸಿಕೊಟ್ಟ ಮಹಾತ್ಮರು, ಹಾಗೇಯೇ ಸಂವಿಧಾನವನ್ನು ಪ್ರತಿಯೊಬ್ಬ ಪ್ರಜೆಯು ಓದಿದರೆ ಸಕಾರಾತ್ಮಕ ಕಾನೂನಿನ ಬಗ್ಗೆ ನಮಗೆಲ್ಲ ತಿಳಿಯುವುದು, ಇವರು ಸರ್ವಧರ್ಮ ಸಮಭಾವ ಎಂದು ತೋರಿಸಿಕೊಟ್ಟಂತಹ ಮಹಾವ್ಯಕ್ತಿ ಎಂದು ಹೇಳಿದರು.
ಹಾಗೆಯೇ ಇಂದು ಎಲ್ಲಾ ಕ್ಷೇತ್ರದಲ್ಲು ಹೆಣ್ಣುಮಕ್ಕಳಿಗೆ ಸ್ಥಾನ ಮಾನ ದೊರೆಯಲು ಇವರು ಮೂಲ ಕಾರಣೀಭೂತರು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯದಲ್ಲಿ ಎಲ್ಲ ಜಾತಿ ವರ್ಗದವರಿಗೆ ಸಮಾನ ನ್ಯಾಯ , ವಿಚಾರ ಅಭಿವ್ಯಕ್ತಿ, ವಿಶ್ವಾಸ ನಂಬಿಗೆ ಮತ್ತು ಉಪಾಸನೆಯಲ್ಲಿ ಸಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ದೊರೆಯುವಂತೆ ಮಾಡಿ, ಚಿಕ್ಕ ವಯಸ್ಸಿನಲ್ಲಿಯೇ ಹಿರಿಯರಿಗೆ ಗೌರವ, ಮಾರ್ಗದರ್ಶನ ಮಾಡಿದ ವ್ಯಕ್ತಿಯ ಬಗ್ಗೆ ಮಾತನಾಡಲು ಪದಗಳು , ಸಮಯ ಸಾಕಾಗುವುದಿಲ್ಲ ಎಂದರು.
ಇಷ್ಟೆಲ್ಲ ಗೊತ್ತಿದ್ದರು ಇಂದಿನ ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಜಾತಿ ಭೇದ ಎಂದು ಹೊಡೆದಾಡುವುದರಲ್ಲಿ ಮುಂದಾಗಿದ್ದಾರೆ, ಇವರು ಕೇವಲ ನಮ್ಮ ಜಾತಿ ಜನಾಂಗಕ್ಕೆ ಸೀಮಿತ ವ್ಯಕ್ತಿ ಎಂದು ಹೇಳುವಂಥ ವ್ಯಕ್ತಿಗಳನ್ನು ಏನೆನ್ನಬೇಕು? ಇವರು ಮೂರ್ಖರೆ ಸರಿ ಎಂದರು. ಯಾರು ನಿಜವಾದ ಸಂವಿಧಾನವನ್ನು ನಿಜವಾಗಿ ಓದಿ ಅರ್ಥೈಸಿಕೊಂಡಿರುತ್ತಾರೋ ಅವರು ಯಾವುದೇ ತರನಾದ ಮೂರ್ಖತನದ ಮಾತು ಆಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ಇಂಥ ದೇಣಿಗೆಯನ್ನು ಕೊಟ್ಟ ಮಹಾತ್ಮನ ಹೆಸರಿಗೆ ಜಾತಿ ಪಟ್ಟಿ ಕಟ್ಟಿ ಅಪಮಾನ ಮಾಡದೇ ಪ್ರತಿಯೊಬ್ಬರು ಸಂವಿಧಾನದಲ್ಲಿ ಏನಿದೆ ಎಂದು ಓದಿ ಅಖಂಡ ಭಾರತದಲ್ಲಿ ಒಗ್ಗಟ್ಟಿನಲ್ಲಿ ಬಾಳೋಣ ಎಂದು ಹೊನ್ನಗೆಜ್ಜೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾಲಯದ ಆಧ್ಯಕ್ಷರಾದ ಸುಷ್ಮಾವತಿ ಬಿ ಹೊನ್ನಗೆಜ್ಜೆ, ವೀರಯ್ಯ ಹಿರೇಮಠ, ರಾಜೇಶ್ವರಿ, ಅಶ್ವಿನಿ, ಆಶಾರಾಣಿ, ಅಭಿಲಾಶ್, ಪ್ರಭಾವತಿ, ಶರಣಬಸಪ್ಪ ಉಪಸ್ಥಿತರಿದ್ದರು.