ಶಹಾಬಾದ:ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನದ ಶಿಲ್ಪಿ ಎಂದು ಕರೆಯುತ್ತಾರೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಅವರು ಶುಕ್ರವಾರ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಆಯೋಜಿಸಲಾದ ಸಂವಿಧಾನ ಸಮರ್ಪಣೆ ದಿನದ ನಿಮಿತ್ತ ಆಯೋಜಿಸಲಾದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತದ ಸಂವಿಧಾನದ ಮೂಲ ತತ್ವ ವಿವಿಧತೆಯಲ್ಲಿ ಏಕತೆಯಾಗಿದೆ.ಸಂವಿಧಾನ ನಮ್ಮ ಧರ್ಮಗ್ರಂಥವಿದ್ಧಂತೆ.ನಮ್ಮ ಸಂವಿಧಾನದ ಆಶಯ ಆಶೋತ್ತರಗಳು ಜಗತ್ತಿನ ಹಲವು ಯಶಸ್ವಿ ಪ್ರಜಾಪ್ರಭುತ್ವ ದೇಶಗಳ ಸಂವಿಧಾನದಲ್ಲೂ ಅಳವಡಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಉತ್ತಮ ಸಂವಿಧಾನ ಎಂದು ಹೇಳಿದರು.
ಉಪನ್ಯಾಸಕ ಪೀರಪಾಶಾ ಮಾತನಾಡಿ, ಈ ಸಂವಿಧಾನ ರಚನೆಯ ಹಿಂದೆ ಅನೇಕ ಮಹಾನ್ ವ್ಯಕ್ತಿಗಳ ಶ್ರಮವಿದೆ. ಆ ಮಹಾನ್ ಪುರುಷರು ಸಂಕಷ್ಟಗಳನ್ನು ಎದುರಿಸಿ ನಮಗೆ ಬದುಕು ಹಕ್ಕನ್ನು ಕಲ್ಪಿಸಿದ್ದಾರೆ.ಅದರಲ್ಲೂ ಡಾ.ಅಂಬೇಡ್ಕರ್ ಸಾಕಷ್ಟು ಅಪಮಾನಕ್ಕೆ ಗುರಿಯಾಗಿದ್ದರೂ ದೇಶಕ್ಕೆ ಒಂದು ಉತ್ತಮ ಕೊಡುಗೆ ನೀಡಿದ್ದಾರೆ. ಆ ಸಂವಿಧಾನ ನಮಗೆ ದಾರಿದೀಪವಾಗಿದೆ.ನಾವು ಕೂಡ ಸಂವಿಧಾನದ ಹಾದಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.
ಪಿಐ ಸಂತೋಷ ಹಳ್ಳೂರ್ ಮಾತನಾಡಿ, ಸಂವಿಧಾನ ನಮಗೆ ಸಮಾನತೆಯ ಹಕ್ಕು, ಸ್ವಾತ್ರ್ಯದ ಹಕ್ಕು, ಶೈಕ್ಷಣಿಕ ಹಕ್ಕುಗಳನ್ನು ನೀಡಿದೆ.ಇಂದು ದೇಶದಲ್ಲಿ ಎಲ್ಲಾ ಜನಾಂಗದವರು ಶಾಂತುಯುತ ಬದುಕು ನಡೆಸುತ್ತಿರುಉದಕ್ಕೆ ಸಂವಿಧಾನವೇ ಕಾರಣ.ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದರು.
ಗ್ರೇಡ-೨ ತಹಸೀಲ್ದಾರ ಗುರುರಾಜ ಸಂಗಾವಿ ಮಾತನಾಡಿದರು.
ಕ.ರಾ.ಪ್ರಾ.ಶಾ.ಶಿ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್, ಉಪನ್ಯಾಸಕ ಪ್ರವೀಣ ರಾಜನ್, ಹೊನಗುಂಟಾ ಸರಕಾರಿ ಶಾಲೆಯ ಮುಖ್ಯಗುರು ದತ್ತಾತ್ರೇಯ ಕುಲಕರ್ಣಿ, ದಸಂಸ ಸಂಘಟನಾ ಸಂಚಾಲಕ ಮಲ್ಲಣ್ಣ ಮಸ್ಕಿ, ಮರೆಪ್ಪ ಮೇತ್ರೆ, ಇದೇ ಸಂದರ್ಭದಲ್ಲಿ ಚಂದ್ರಕಲಾ ಗುರುನಾಥ, ಮರೆಮ್ಮ ಚಂದ್ರಾಮ, ಭೂಮಿಕಾ ಜಯಪ್ರಕಾಶ, ಸಮ್ರಿನ್ ಸೈದ್ ಶೌಖತಪಾಶಾ, ಮುತ್ತಮ್ಮ ಶರಣಪ್ಪ ಸಂವಿಧಾನದ ಪೀಠಿಕೆ, ಹಕ್ಕುಗಳು, ಕರ್ತವ್ಯಗಳು ಹಾಗೂ ತತ್ವಗಳನ್ನು ಓದಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಚಾಲಕ ಪೂಜಪ್ಪ ಮೇತ್ರೆ ನಿರೂಪಿಸಿದರು, ಜಗದೇವಪ್ಪ ಹೊಸಮನಿ ಸ್ವಾಗತಿಸಿದರು,ಮಹಾದೇವ ಪಾಟೀಲ ವಂದಿಸಿದರು.