ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಶೀಘ್ರ ಬಗೆಹರಿಸಿ; ಕ್ಯಾಂಪಸ್ ಫ್ರಂಟ್

0
11

ಕೊಪ್ಪಳ: ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸದೇ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ಹಾಗೂ ಅತಿಥಿ ಉಪನ್ಯಾಸಕರು ಜಂಟಿ ಪತ್ರಿಕಾಗೋಷ್ಠಿ ನಡೆಯಿತು.

ರಾಜ್ಯದಲ್ಲಿ ಸುಮಾರು 14,447 ಅತಿಥಿ ಶಿಕ್ಷಕರಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಅರೆಕಾಲಿಕವಾಗಿ ಅಲ್ಪವೇತನ ಪಡೆದುಕೊಂಡು ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಉಪನ್ಯಾಸ ನೀಡುವ ಶಿಕ್ಷಕರು ಮಾಸಿಕವಾಗಿ ಹನ್ನೊಂದು ಸಾವಿರದಿಂದ ಹದಿಮೂರು ಸಾವಿರದಷ್ಟು ವೇತನವನ್ನು ಪಡೆಯುತ್ತಿದ್ದಾರೆ. ವರ್ಷದಲ್ಲಿ ಎಂಟು ತಿಂಗಳು ಮಾತ್ರ ವೇತನ ಸಿಗುವುದಾದರೂ, ಅದು ಕೈ ಸೇರಲು ಮೂರು ತಿಂಗಳು ಕಾಯಬೇಕಿದೆ.

Contact Your\'s Advertisement; 9902492681

ಉದ್ಯೋಗದಲ್ಲಿ ಯಾವುದೇ ಭಧ್ರತೆಯಾಗಲಿ, ಪಿಎಫ್ ,ಇಎಸ್ಐ ಸಹಿತ ಯಾವುದೇ ಸೌಲಭ್ಯಗಳಿಲ್ಲದೆ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಬೀದಿಗೆ ಬರುವಂತಾಗಿದೆ. ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ 163 ಅತಿಥಿ ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆಂದು ವರದಿಯಾಗಿದೆ. ಅದರಲ್ಲಿ ಕೆಲವರು ಮನೆಯ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಸರಿಯಾದ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ.

ಅವರಿಗೆ ಯಾವುದೇ ಪರಿಹಾರ ಧನವಾಗಲಿ ಕನಿಷ್ಟ ಪಕ್ಷ ಸಾಂತ್ವನವಾಗಲಿ ದೊರಕಲಿಲ್ಲ! ಸಮಾಜವನ್ನು ಶೈಕ್ಷಣಿಕವಾಗಿ ಕಟ್ಟಿಬೆಳೆಸುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ತಕ್ಷಣ ಖಾಯಂಗೊಳಿಸಬೇಕು. ಉದ್ಯೋಗ ಭಧ್ರತೆಯೊಂದಿಗೆ ಪಿಎಫ್, ಇಎಸ್ಐ ನೀಡಬೇಕು. ಗೌರವಧನ ಹೆಚ್ಚಿಸಬೇಕು. ಬಾಕಿ ಇರುವ ಗೌರವಧನವನ್ನು ತಕ್ಷಣ ಮಂಜೂರುಗೊಳಿಸಬೇಕು. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕೆಂಬ ನ್ಯಾಯಬದ್ಧ ಬೇಡಿಕೆಗಳನ್ನು ಆಲಿಸದೆ ಸರಕಾರದ ಮೀನಾ ಮೇಷ ಎಣಿಸುತ್ತಿರುವುದು ಆಕ್ಷೇಪಾರ್ಹ.

ಇಷ್ಟೆಲ್ಲಾ ಜ್ವಲಂತ ಸಮಸ್ಯೆಗಳಿಂದ ತೀವ್ರ ಸಂಕಷ್ಟದಲ್ಲಿರುವ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗದೆ, ಇನ್ನೂ ಸಮಸ್ಯೆಗಳ ವರದಿ ಮಾಡಲು ಸಮಿತಿ ರಚನೆ ಮಾಡಿದೆ. ಉಪನ್ಯಾಸಕರ ಬೇಡಿಕೆಗಳನ್ನು ಅರಿಯದ ಸರಕಾರ ವರದಿ ಸಮಿತಿ ಎಂಬ ತೋರಿಕೆಯಲ್ಲಿ ಕಾಲ ಕಳೆಯುವತ್ತಿರುವುದು ವಿಪರ್ಯಾಸವೇ ಸರಿ. ಸಮಿತಿಯ ವರದಿಗೆ ಕಾಯದೆ ತಕ್ಷಣ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಮುಂದಾಗಬೇಕು.

ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವುದರೊಂದಿಗೆ ಅವರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರವು ಈಡೇರಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಸಮಿತಿಯು ಹಾಗೂ ಅತಿಥಿ ಉಪನ್ಯಾಸಕರು ಜಂಟಿ ಪತ್ರಿಕಾಗೋಷ್ಠಿಯ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಚಾಂದ್ ಸಲ್ಮಾನ್, ಅತಿಥಿ ಶಿಕ್ಷಕರ ಸಂಘ ಕೊಪ್ಪಳ ಅಧ್ಯಕ್ಷರಾದ ಡಾ|ವೀರಣ್ಣ ಎಸ್ ಸಜ್ಜನರ್, ಅತಿಥಿ ಉಪನ್ಯಾಸಕಿ ಜಿ.ಗೀತಾ ಬನ್ನಿಕೊಪ್ಪ, ಮತ್ತು ಯಂಕಮ್ಮ ಹಾಗೂ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಹಮೀದ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here