ಶೋಷಿತರ ಸ್ವಾಭಿಮಾನದ ಸಂಕೇತ ಭೀಮಾ ಕೋರೆಗಾಂವ್ ಯುದ್ಧವು

0
9
  • # ಕೆ.ಶಿವು.ಲಕ್ಕಣ್ಣವರ

ಸ್ವಾತಂತ್ರ ಪೂರ್ವದ ಭಾರತದ ರಾಜ ಮಹಾರಾಜರು ಮತ್ತು ಆಂಗ್ಲರ ಆಡಳಿತದಲ್ಲಿ ಶೋಷಿತರನ್ನು ಸದಾ ದುಡಿಯುವ ಎತ್ತುಗಳಂತೆ ಸ್ಯೆನ್ಯದಲ್ಲಿ, ರಾಜ್ಯ ಮತ್ತು ರಾಜರ ಸೇವೆ ಮಾಡಲು ಬಳಸಿಕೊಳ್ಳುತ್ತಿದ್ದರು. ಶೋಷಿತರು ಒಂದು ರೀತಿ ಗುಲಾಮರಂತೆ ಜೀವನ ಮಾಡಬೇಕಿತ್ತು.

ಆದರೆ ಶೋಷಿತರು ಮಾತ್ರ ಅರ್ಪಣಾ ಮನೋಭಾವದಿಂದ ರಾಜ್ಯಸೇವೆ ಮಾಡುತ್ತಿದ್ದರು. ಹೀಗೆ ರಾಜರು ಪರಮಸುಖ ಅನುಭವಿಸುತ್ತಿದ್ದದು ಸುಳ್ಳಲ್ಲ, ಇಂತಹ ಭಾರತದಲ್ಲಿ ”ಸ್ವಾಭಿಮಾನ ಸ್ವಾವಲಂಬನೆ ಇವೆರಡೂ ಇಲ್ಲದ ಮಾನವ ಜೀವಂತ ಶವದಂತೆ” ಎಂದು ದಲಿತರಲ್ಲಿ ಸ್ವಾಭಿಮಾನದ ಕಿಡಿಯನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಿತ್ತಿದ್ದಾರೆ. ”ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂಬ ಅವರ ನಾಣ್ಣುಡಿಯಂತೆ 1818ರ ಜನವರಿ 1 ರಂದು ಮಹಾರಾಷ್ಟ್ರದ ಮಹರರು ಭೀಮಾಕೋರೆಗಾಂವ್ ಯುದ್ಧವನ್ನು ಜಯಿಸಿದ ಇತಿಹಾಸವನ್ನು ಅವರು ಮೊತ್ತ ಮೊದಲು ತೆರೆದಿಟ್ಟಿದ್ದಾರೆ.

Contact Your\'s Advertisement; 9902492681

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸ್ಯೆನ್ಯದಲ್ಲಿ, ಮರಾಠ ಶಿವಾಜಿಯ ಸ್ಯೆನ್ಯದಲ್ಲಿದ್ದ ಮಹರರು ಶೌರ್ಯ ಸಾಹಸಗಳಿಗೆ ಹೆಸರಾದವರು. ಡಾ ಬಿ.ಆರ್. ಅಂಬೇಡ್ಕರ್ ತಂದೆ ರಾಮ್‌ಜಿ ಸಕ್ಪಾಲ್ ಸೇರಿದಂತೆ ಮಹಾರಾಷ್ಟ್ರದ ಮಹರರು ಬ್ರಿಟಿಷರ ಕಂಪೆನಿ ಸ್ಯೆನ್ಯದಲ್ಲಿದ್ದರು. ಮಹರರ ನೆರವಿನಿಂದ ಶಾಹು ಮಹಾರಾಜರು ತಾರಾಬಾಯಿ ವಿರುದ್ಧ ಯುದ್ಧ ಗೆದ್ದು ತಮ್ಮ ರಾಜ್ಯವನ್ನು ಮರಳಿ ಪಡೆದಿದ್ದರು.

ಧೀರ ಮಹರನಾದ ತುಕನಾಕ ಪೇಶ್ವೆಗಳ ಸ್ಯೆನ್ಯದಲ್ಲಿ ಮಹಾ ಪರಾಕ್ರಮಿಯಾಗಿದ್ದನು. 1736ರಲ್ಲಿ ನಡೆದ ಜಂಜೀರಾ ಕದನವನ್ನು ಕೆಲವೇ ಮಹರ್ ಸ್ಯೆನಿಕರು ಜಯಿಸಿದ್ದರು. 1779ರಲ್ಲಿ ಮಹರರು, ಮುಸ್ಲಿಮರು ಮತ್ತು ಮರಾಠರು ಸೇರಿ ವಾಡಗಾನ್ ಎಂಬಲ್ಲಿ ಯುದ್ಧ ಗೆದ್ದಿದ್ದ ಸಾಹಸಗಳ ಕಥೆಯನ್ನು ಭಾರತದ ಶ್ರೇಣೀಕೃತ ಇತಿಹಾಸ ಮುಚ್ಚಿಹಾಕಿತ್ತು.

ಪೋರ್ಚಗೀಸರು ಮತ್ತು ಪೇಶ್ವೆಗಳ ನಡುವೆ ಮಾಂಡವಿ ಎಂಬಲ್ಲಿ ಯುದ್ಧ ನಡೆದಾಗ ಮಹರ್‌ರಿಂದ ಪೇಶ್ವೆಗಳು ಯುದ್ಧ ಗೆದಿದ್ದರು. 1895ರಲ್ಲಿ ಶಿದನಾಕ ಎಂಬ ಮಹರ್ ವೀರ ಪೇಶ್ವೆಗಳ ಪರವಾಗಿ ಯುದ್ಧ ಮಾಡಿ ಖರ್ಡೆ ಎಂಬಲ್ಲಿ ನಿಜಾಮರನ್ನು ಸೋಲಿಸಿದ್ದನು. ಹೀಗಾಗಿ ಮಹರ್ ಯೋಧರ ಶೌರ್ಯ, ಪರಾಕ್ರಮ ಮತ್ತು ಚತುರತೆಗಳಿಂದ ಪೇಶ್ವೆಗಳು, ಮರಾಠರು ಹಾಗೂ ಆಂಗ್ಲರು ಯುದ್ಧಗಳನ್ನು ಗೆದ್ದು ಬೀಗುತ್ತಿದ್ದರು.. ಹೀಗೆ ಇವರೆಲ್ಲ ತಮ್ಮ ಆಡಳಿತದಲ್ಲಿ ಸುಗಮ ವ್ಯವಸ್ಥೆ ರೂಢಿಸಿಕೊಂಡಿದ್ದರು.

ಆದರೆ ಮಹರ್‌ರನ್ನು ಮಾತ್ರ ಯುದ್ಧ ಭೂಮಿಯಲ್ಲಿ ಸ್ಯೆನಿಕರಂತೆ ಕಾಣುತ್ತಿದ್ದ ಪೇಶ್ವೆಗಳು ಮತ್ತು ಇತರ ರಾಜರು, ಮಹರರು ವಾಸಿಸುವ ಕೇರಿಯನ್ನು ಊರಿಂದ ಹೊರಗಿಟ್ಟು ಅಸ್ಪಶ್ಯತೆ ಆಚರಿಸುತ್ತಿದ್ದರು. ಹೀಗೆ ಜಾತಿ ಮತ್ತು ಅಸ್ಪಶ್ಯತೆಯಿಂದ ನೊಂದು ಬೆಂದು ಬಳಲಿ ಬೆಂಡಾಗಿ ಹೋಗಿದ್ದ ಮಹರರು ಸ್ವಾಭಿಮಾನ ಶೂನ್ಯರಾಗಿ ಇತಿಹಾಸದಲ್ಲಿ ಮುಚ್ಚಿಹೋಗಿದ್ದರು.

ಮೇ 13, 1817ರಲ್ಲಿ ಪೇಶ್ವೆಯ ಬಾಜಿರಾಯನು ಕೆಲವು ಯುದ್ಧಗಳಲ್ಲಿ ಸೋತು ಬ್ರಿಟಿಷರಿಗೆ ಅರ್ಧಭಾಗ ಪುಣೆಯನ್ನು ಬಿಟ್ಟುಕೊಟ್ಟಿದ್ದನು. ಆಗ ಮಹರ್‌ರ ವೀರಯೋಧ ಸಿದನಾಕ ಬಾಜಿರಾಯ ಪೇಶ್ವೆಯನ್ನು ಕುರಿತು ”ನಾವಿಬ್ಬರೂ ಈ ದೇಶದವರು, ಬ್ರಿಟಿಷರು ಹೊರಗಿನವರು. ನಾವಿಬ್ಬರೂ ಕೂಡಿ ಅವರನ್ನು ಎದುರಿಸೋಣ. ಅದರೆ ಯುದ್ಧ ಗೆದ್ದ ಮೇಲೆ, ನೀವು ನಮ್ಮನ್ನು ಅಸ್ಪಶ್ಯರೆಂದು ಭಾವಿಸದೆ ಸಮಾನತೆ ಸ್ವಾತಂತ್ರ ನೀಡಬೇಕು” ಎಂದು ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡನು.

ಅದರೆ ಬಾಜಿರಾಯ ”ಪೇಶ್ವೆಗಳು ಯುದ್ಧ ಗೆದ್ದರೆ, ಧರ್ಮ ಗ್ರಂಥಗಳಂತೆ ನಿಮ್ಮಗೆ ಸ್ಥಾನಮಾನ ನೀಡುತ್ತೇವೆ ಹೊರತು ಸಮಾನತೆ ನೀಡುವುದಿಲ್ಲ. ನಮ್ಮ ಧರ್ಮಶಾಸ್ತ್ರದಲ್ಲಿ ಇದಕ್ಕೆ ಅವಕಾಶವಿಲ್ಲ” ಎಂದು ನಿರಾಕರಿಸಿದನು. ಬಾಜಿರಾಯನ ಮಾತಿನಿಂದ ದುಃಖಿತನಾದ ಸಿದನಾಕನು ಗುಲಾಮರಾಗಿರುವುದಕ್ಕಿಂತ ಸ್ವಾಭಿಮಾನಿಯಾಗಿ ಬದುಕುವುದು. ಮೇಲು ಎಂದು ಪೇಶ್ವೆಗಳ ಸೈನ್ಯದಿಂದ ದೂರ ಉಳಿದನು. ಮುಂದೆ, ಹಿಂದೂ ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿ ಬ್ರಿಟಿಷ್ ಸೈನ್ಯವನ್ನು ಸೇರಿಕೊಂಡನು. ಸಿದನಾಕ ಬಹಳ ಪರಾಕ್ರಮಿ, ಧೈರ್ಯಶಾಲಿ, ಇವನಿದ್ದರೆ ಸೈನ್ಯದಲ್ಲಿ ಗೆಲುವು ನಿಶ್ಚಿತ.

ಒಮ್ಮೆ, 2ನೇ ಬಾಜಿರಾವ್ ಪೇಶ್ವೆಗಳು ಸುಸಜ್ಜಿತ ಶಸ್ತ್ರಾಗಳೊಡನೆ ಮರಳಿ ಪುಣೆಯನ್ನು ಪಡೆಯಲು ಚಕ್ಕನ್ ಎಂಬ ಪ್ರದೇಶದಲ್ಲಿ ಮೂವತ್ತು ಸಾವಿರ ಸೈನಿಕರ ಜೊತೆ ಬ್ರಿಟಿಷರನ್ನು ಎದುರಿಸಲು ಸಜ್ಜಾದನು. ಪೇಶ್ವೆಗಳ ಬೃಹತ್ ಸೈನ್ಯ ನೋಡಿ ಬ್ರಿಟಿಷ್ ಜನರಲ್ ಸ್ಮಿತ್ ಯುದ್ಧ ಗೆಲ್ಲುವ ವಿಶ್ವಾಸ ಕಳೆದುಕೊಂಡು ಅಂಜಿದನು. ಆ ಸಂದರ್ಭದಲ್ಲಿ ಸೈನ್ಯದ ಮುಖಂಡ ಫಿಲ್ಸ್‌ಮನ್‌ಡೇರ್ ಧೈರ್ಯ, ಸಾಹಸ, ಸಮರ್ಪಣೆ ಮತ್ತು ಸಾಮರ್ಥ್ಯ ಇರುವ ಮಹರ್ ಬಾಂಬೆ ರೆಜಿಮೆಂಟ್‌ನ 2ನೇ ತುಕಡಿಯ 500 ಸೈನಿಕರಿದ್ದ ಬೆಟಾಲಿಯನ್‌ನನ್ನು ಆಯ್ಕೆ ಮಾಡಿಕೊಂಡನು.

ಇವರಲ್ಲಿ ಕೇವಲ 250 ಕುದುರೆ ಸವಾರರು, 24 ಬ್ರಿಟಿಷ್ ಸೇನಾಧಿಕಾರಿಗಳು, 205 ಸಣ್ಣ ತುಪಾಕಿಗಳಿದ್ದವು. ಸ್ಟ್ಯಾಂಟನ್ ಕ್ಯಾಪ್ಟನ್ ಅಗಿದ್ದ ಈ ತಂಡಕ್ಕೆ ಸಿದನಾಕ 500 ಜನರಲ್ಲಿ ಪ್ರಮುಖ ಕಮಾಂಡರ್ ಆಗಿದ್ದನು. ಈ 500 ಜನ ಯೋಧರ ಸೇನೆಯು 1817 ಡಿಸೆಂಬರ್ 31ರ ರಾತ್ರಿ 8 ಗಂಟೆಗೆ ಶಿರೂರಿನಿಂದ 27 ಗಂಟೆಗಳ ಕಾಲ್ನಡಿಗೆಯ ಮೂಲಕ 1818ರ ಜನವರಿ ಬೆಳಗ್ಗೆ ಭೀಮಾನದಿ ತೀರದ ಕೋರೆಗಾಂವ್‌ನ್ನು ತಲುಪಿದ್ದರು. ಇತ್ತ, ಒಂದು ಸಾವಿರ ಅರಬ್ ಸೈನಿಕರನ್ನೊಳಗೊಂಡ ಪೇಶ್ವೆಗಳ ಸೈನ್ಯವು ಮೂರು ತುಕಡಿಗಳಂತೆ ಪೂನಾ ನಗರವನ್ನು ನುಚ್ಚುನೂರು ಮಾಡಲು ಬಿರುಸಿನಿಂದ ನುಗ್ಗಿ ಬಿಟ್ಟಿದ್ದರು. ಬ್ರಿಟಿಷ್ ಸೈನ್ಯದ ಚಿಶೋಮ್‌ನ ರುಂಡ ಕತ್ತರಿಸಿದ ಪೇಶ್ವೆಗಳ ಸ್ಯೆನ್ಯ, ಗ್ರೇನೇಡಿಯನ್ ಪ್ಯಾಂಟನ್ಸನ್‌ನನ್ನು ಕೊಂದರು. ಈ ಮಹಾ ಕಾದಾಟದಲ್ಲಿ ಕ್ಯಾಪ್ಟನ್ ಸ್ಟ್ಯಾಂಟನ್, ಕೋನ್‌ಲೇನ್ ಇಬ್ಬರೂ ಗಾಯಗೊಂಡರು.

ಬ್ರಿಟಿಷ್ ಸೈನ್ಯದ ಬಲ ಕುಸಿಯಿತೆಂದು ಸ್ಟ್ಯಾಂಟನ್ ಹೆದರಿ ಯುದ್ಧದಿಂದ ಹಿಂದಿರುಗಲು ಚಿಂತಿಸುತ್ತಿರುವಾಗ, ಜಾತಿ ಮತ್ತು ಅಸ್ಪಶ್ಯತೆ ಎಂಬ ಅಸಮಾನತೆಯಿಂದ ನೊಂದು ಬೆಂದು ಬೇಸತ್ತು ಹೋಗಿದ್ದ ಮಹರರು ಪೇಶ್ವೆಗಳ ಸೈನ್ಯವನ್ನು ಸೆದೆಬಡಿಯಲು ಬರಸಿಡಿಲಿನಂತೆ ಮುನ್ನುಗುತ್ತಿದ್ದರು. ಅವರಿಗಿದ್ದ ಧೈರ್ಯವೆಂದರೆ ಸಾವಿಗೆ ಅಂಜದೆ ಇರುವ ಗುಣ ಮತ್ತು ಯುದ್ಧ ಗೆಲ್ಲಲೇಬೇಕೆನ್ನುವ ಮಹಾದಾಶೆ. ಯುದ್ಧ ಅಂದು ದಿನ ಪೂರ್ತಿ ನಡೆಯಿತು.

ಪೇಶ್ವೆಗಳನ್ನು ಗೆಲ್ಲಲು ಸಾಧ್ಯವಿಲ್ಲವೆಂದು ಸ್ಟ್ಯಾಂಟನ್ ಶರಣಾಗಲು ಸೂಚಿಸುತ್ತಿದ್ದರೂ ”ರಣರಂಗದಲ್ಲಿ ಓಡಿ ಹೋಗುವ ಹೇಡಿಗಳು ನಾವಲ್ಲ” ಎಂದು ಮಹರ್ ಯೋಧರು ಕ್ಯಾಪ್ಟನ್ ಸ್ಟ್ಯಾಂಟನ್‌ಗೆ ಧೈರ್ಯ ಹೇಳಿ ಬಿರುಗಾಳಿಯಂತೆ ಖಡ್ಗ ಹಿಡಿದು ಮುನ್ನುಗುತ್ತಿದ್ದರು. ಮಹರ್ ಸೈನಿಕರು ಅತ್ಯಂತ ಶಿಸ್ತುಬದ್ಧ ಅಕ್ರಮಣ ಮಾಡಿ ಪೇಶ್ವೆಗಳ ನಾಯಕ ಬಾಪು ಗೋಖಲೆಯ ಮಗ ಗೋವಿಂದ ಬಾಬಾನ ಮೇಲೆ ಖಡ್ಗ ಬೀಸಿ ರುಂಡ ಕತ್ತರಿಸಿ ವೀರಾವೇಶದಿಂದ ಹೋರಾಡಿದರು. ಪೇಶ್ವೆಗಳ ಸೈನ್ಯ ಮಹರರಿಗಿಂತ ಐವತ್ತು ಪಟ್ಟು ಜಾಸ್ತಿ ಇದ್ದು ಭಯಂಕರ ದಾಳಿ ನಡೆಸಿತ್ತು.

ಕಮಾಂಡರ್ ಸಿದನಾಕ ತನ್ನ ಸೈನ್ಯವನ್ನು ಹುರಿದುಂಬಿಸಿ ವೀರಾವೇಶದಿಂದ ಕಾದಾಡಿ ಪೇಶ್ವೆ ಸೈನ್ಯವನ್ನು ಹಿಂದಿಕ್ಕಿದನು. 1818 ಜನವರಿ 1ರ ರಾತ್ರಿ 9 ಗಂಟೆಯ ಸಮಯದಲ್ಲಿ 2ನೇ ಬಾಜಿರಾವ್ ಪೇಶ್ವೆ ಸೈನ್ಯವು ಹೆದರಿ ದಿಕ್ಕೆಟ್ಟು ಓಡಿತು. ಪೇಶ್ವೆಗಳ ಸೈನ್ಯದ ಒಂದು ನರಪಿಳ್ಳೆಯೂ ಕಾಣಿಸದೆ ದಿಕ್ಕಾಪಾಲಾಗಿ ಯುದ್ಧ ಭೂಮಿಯಿಂದ ಓಡಿ ಹೋಯಿತು. ಬ್ರಿಟಿಷರು 1820 ಜನವರಿ 7ರಂದು ಕ್ಯಾಪ್ಟನ್ ಮತ್ತು ಕಮಾಂಡರ್ ಸಿದನಾಕನನ್ನು ಸನ್ಮಾನಿಸಲಾಯಿತು. ಇದೊಂದು ಅಪ್ರತಿಮ ಯುದ್ಧವಾಗಿ ಭಾರತದ ಇತಿಹಾಸದಲ್ಲಿ ಪುಟದಲ್ಲಿ ಸೇರಿತು.

ಪೂನಾ ನಗರದ ಹತ್ತಿರವಿರುವ ಭೀಮಾತೀರದ ಕೋರೆಗಾಂವ್‌ನಲ್ಲಿ ನಡೆದ ಯುದ್ಧದಲ್ಲಿ 50 ಯೋಧರು ವೀರ ಮರಣ ಹೊಂದಿದರು. 205 ಯೋಧರು ಗಾಯಗೊಂಡರು. ಅತ್ಯಂತ ಧೈರ್ಯ ಸಾಹಸದಿಂದ ಮಹರ್ ಸೈನ್ಯ ಹೋರಾಡಿದ ಪರಿಣಾಮ ಕೋರೆಗಾಂವ್ ಯುದ್ಧದಲ್ಲಿ ಅಭೂತಪೂರ್ವ ಯಶಸ್ಸನ್ನು ಬ್ರಿಟಿಷರು ಪಡೆಯುವಂತಾಯಿತು.

ಮುಂದೆ 110 ವರ್ಷಗಳ ನಂತರ 1927ರ ಜನವರಿ 1ರಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರು ಭೀಮಾ ಕೋರೆಗಾಂವ್ ವೀರಯೋಧ ಹುತ್ಮಾತರಿಗೆ ಕೋರೆಗಾಂವ್ ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಾರೆ. ಭೀಮಾ ನದಿ ತೀರದಲ್ಲಿ ಈಗಲೂ ಈ ಯುದ್ಧ ಗೆದ್ದ ನೆನಪಿಗಾಗಿ ಹತರಾದವರ ಸ್ಮರಣ ಸ್ತಂಭವಿದೆ. 65 ಅಡಿ ಎತ್ತರದಲ್ಲಿ ಸ್ಥಾಪಿಸಿರುವ ಕೋರೆಗಾಂವ್ ವಿಜಯ ಸ್ತಂಭದ ಮೇಲೆ ”ಣ್ಞಛಿ ಣ್ಛ ಕ್ಟೃಟ್ಠಛಿಠಿ ಖ್ಟಜ್ಠಿಞ ಣ್ಛ ಠಿಛಿ ಆಟಜಿಠಿಜಿ ಅಟಞ ಜ್ಞಿ ಠಿಛಿ ಉಠಿ ” ಎಂದು ಬರೆಯಲಾಗಿದೆ.

1941 ರಲ್ಲಿ ಡಾ: ಅಂಬೇಡ್ಕರ್ ರಕ್ಷಣಾ ಇಲಾಖೆಯ ಸಲಹಾ ಸಮಿತಿ ವೈಸ್‌ರಾಯ್ ಆಗಿದ್ದಾಗ, ಅಕ್ಟೋಬರ್ 1941ರಲ್ಲಿ ಲೆಪ್ಟಿನೆಂಟ್ ಕರ್ನಲ್, ಎಚ್.ಜೆ.ಆರ್. ಜಾಕ್ಸನ್ ಹಾಗೂ ಸುಭೇದರ್ ಮೇಜರ್ ಶೇಖ್, ಹಸನುದ್ದೀನ್ ಜೊತೆ ಸೇರಿ ಮೂರನೇ ಮಹರ್ ರೆಜಿಮೆಂಟನ್ನು ಸ್ಥಾಪಿಸಲಾಯಿತ್ತು. ಸಾವಿರಾರು ವರ್ಷಗಳಿಂದ ಜಾತಿ, ಅಸ್ಪಶ್ಯತೆಯ ಕೂಪದಲ್ಲಿ ನೊಂದು ಬಳಲಿದ ನೋವಿನ ಕಿಡಿಯು ಅತ್ಮಾಭಿಮಾನದಿಂದ ಹೋರಾಡಿದ ಪರಿಣಾಮ ಕೋರೆಗಾಂವ್ ಯುದ್ಧ, ಕೇವಲ ಯುದ್ಧವಾಗಿರಲಿಲ್ಲ ಅದೊಂದು ಶೋಷಿತರ ಸ್ವಾಭಿಮಾನದ ಪ್ರತೀಕ..!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here