ಕಲಬುರಗಿ: ಇತ್ತೀಚೆಗೆ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಧಕ್ಕೆಯಾಗುತ್ತಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪತ್ರಿಕೆಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಆದರೆ, ಸಂವಿಧಾನದ ಮೂಲಕ ಪಡೆದ ಅಧಿಕಾರ ಮೊಟಕುಗೊಳ್ಳುತ್ತಿರುವ ಪರಿಸ್ಥಿತಿ ಎದುರಾಗಿದೆ.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಪ್ರಜಾಪ್ರಭುತ್ವದ ನಾಲ್ಕನೆಯ ಸ್ಥಂಬ ಎಂದು ಕರೆಯಲ್ಪಡುವ ಪತ್ರಿಕಾರಂಗ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುವ ಭೀತಿ ಎದುರಿಸಲಿದೆ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.
ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಎರಡನೆಯ ದಿನದ 36 ನೆ ರಾಜ್ಯ ಪತ್ರಕರ್ತರ ಸಮಾವೇಶದ ಸಮಾರೋಪ ಸಮಾರಂಭದ ಅಭಿನಂದನಾ ನುಡಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇತ್ತೀಚಿಗೆ ಪತ್ರಿಕಾರಂಗದಲ್ಲಿ ಬಂಡವಾಳಶಾಹಿಗಳು ಬಂಡವಾಳ ಹೂಡಿದ್ದರಿಂದ ಪತ್ರಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಮಾಧ್ಯಮಗಳಲ್ಲಿ ಪ್ರದೇಶವಾರು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದ ಅವರು ಈ ಭಾಗದ ಸುದ್ದಿಗಳನ್ನು ರಾಜ್ಯ ಮಟ್ಟದಲ್ಲಿ ಪ್ರಕಟವಾಗದೇ ಇದೇ ಭಾಗಕ್ಕೆ ಸೀಮಿತಗೊಳಿಸಲಾಗುತ್ತದೆ. ಹೀಗಾದರೇ, ನಮ್ಮ ಭಾಗದ ಧ್ವನಿ ಸಿಎಂ ಗೆ ಹೇಗೆ ಮುಟ್ಟಬೇಕು? ಈ ಭಾಗದ ಜನರ ಕಷ್ಟ ನೀವು ಬೇರೆಯವರಿಗೆ ತಿಳಿಸದೆ ಹೋದರೆ ಆ ಬಗ್ಗೆ ಅವರಿಗೆ ಹೇಗೆ ಗೊತ್ತಾಗಬೇಕು. ಈ ಭಾಗದ ಧ್ವನಿ ಸಿಎಂ ಗೆ, ಸಿದ್ದರಾಮಯ್ಯಗೆ, ಡಿ.ಕೆ. ಶಿವಕುಮಾರ್ ಗೆ ಹಾಗೂ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಮುಟ್ಟಬೇಕು ಆ ರೀತಿಯಲ್ಲಿ ನೀವು ಸುದ್ದಿ ಕಳಿಸಬೇಕು ಎಂದು ಸಲಹೆ ನೀಡಿದರು.
ಈ ಭಾಗಕ್ಕೆ ಜನಪರ ಕಾಳಜಿಯುಳ್ಳ ಅಧಿಕಾರಿಗಳು ಬರಬೇಕು. ಆದರೆ, ಅಧಿಕಾರಿಗಳನ್ನು ಶಿಕ್ಷೆಯ ರೂಪದಲ್ಲಿ ಈ ಭಾಗಕ್ಕೆ ವರ್ಗಾವಣೆ ಮಾಡಲಾಗುತ್ತದೆ ಎಂದೇ ಬಿಂಬಿಸಲಾಗುತ್ತಿದೆ ಇದು ಬಲದಲಾಗಬೇಕು. ಈ ರೀತಿಯ ಬದಲಾವಣೆ ಅದು ನಿಮ್ಮಿಂದ ಮಾತ್ರ ಸಾಧ್ಯ ಎಂದರು.
ಇತ್ತೀಚಿಗೆ ಪತ್ರಿಕಾರಂಗ ಬೇರೆ ಕಡೆ ತಿರುಗಿಕೊಂಡಿದೆ. ಹೆಚ್ಚು ಜಾಹೀರಾತು ಕೊಡುವವರ ಸುದ್ದಿಗಳನ್ನು ಹೆಚ್ಚು ಪ್ರಕಟ ಮಾಡುವ ವ್ಯವಸ್ಥೆ ನಡೆಯುತ್ತಿದೆ. ಇದು ನಾನು ಗಮನಿಸಿದ್ದು ಎಂದರು.
ಈ ದೇಶದ ಮಹಾನ್ ನಾಯಕರು ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಬಳಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಳಸಿಕೊಂಡರು ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರು,ಲೋಕಮಾನ್ಯ ತಿಲಕ್ ಹಾಗೂ ಡಾ ಅಂಬೇಡ್ಕರ್ ಕೂಡಾ ಪತ್ರಕರ್ತರಾಗಿಯೇ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವೇದಿಕೆಯ ವೇದಿಕೆಯ ಮೇಲೆ ಕಕಾನಿಪಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಶಾಸಕರಾದ ಎಂ.ವೈ.ಪಾಟೀಲ್, ಮತಿ ಕನೀಜ್ ಫಾತಿಮಾ, ಮಾಜಿಎಂಎಲ್ ಸಿಗಳಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಡಾ.ಸಿ.ಸೋಮಶೇಖರ್, ಅಧ್ಯಕ್ಷರು ಗಡಿಅಭಿವೃದ್ದಿ ಪ್ರಾಧಿಕಾರ ಸೇರಿದಂತೆ ಮತ್ತಿತರಿದ್ದರು.