ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಜನ ಸಂಚಾರ ಸ್ತಬ್ಧ

0
14

ಬೆಂಗಳೂರು: ಕೊರೋನಾ 3ನೇ ಅಲೆ ತಡೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ (Weekend Curfew) ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ನಾಗರಿಕ ವಲಯದಿಂದ ಉತ್ತಮ ಸ್ಪಂದನೆ ದೊರಕಿದೆ.

ಜೊತೆಗೆ ಪೊಲೀಸರು ಸಹ ಬಿಗಿ ಬಂದೋಬಸ್ತ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ರಾಜ್ಯ ಸರ್ಕಾರದ ಉದ್ದೇಶಕ್ಕೆ ಆರಂಭಿಕ ಯಶಸ್ಸು ದೊರೆತಿದೆ.

Contact Your\'s Advertisement; 9902492681

ರಾಜಧಾನಿ ಬೆಂಗಳೂರು, ರಾಯಚೂರು, ಬೀದರ್‌, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಮೈಸೂರು, ಹಾಸನ, ಕೋಲಾರ, ದಾವಣಗೆರೆ, ತುಮಕೂರು, ಮಂಡ್ಯಗಳಲ್ಲಿ ಕರ್ಫ್ಯೂಗೆ ಜನರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದರು. ಆದರೆ ಕೊಪ್ಪಳ, ಚಾಮರಾಜನಗರ, ಬೆಳಗಾವಿಗಳಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ದೊರೆತಿದ್ದು, ಪೊಲೀಸರ (Police) ಶ್ರಮದ ಬಳಿಕವೂ ಜನಜೀವನ ಎಂದಿನಂತೆಯೇ ಇತ್ತು. ಇನ್ನು ಚಿತ್ರದುರ್ಗ, ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಬೆಳಗ್ಗೆ ಮಾಮೂಲಿನಂತಿದ್ದ ಜನಸಂಚಾರ ಮಧ್ಯಾಹ್ನದ ಮೇಲೆ ವಿರಳಗೊಳ್ಳುವ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಹೆಚ್ಚಿನ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ ನಾಗರಿಕರೇ ಸ್ವಯಂಪ್ರೇರಿತರಾಗಿ ಮನೆಯಿಂದ ಹೊರಗಡೆ ಬಾರದ್ದರಿಂದ ಪ್ರಮುಖ ರಸ್ತೆಗಳು ಬಿಕೋ (Main Roads) ಎನ್ನುತ್ತಿದ್ದವು. ಬಸ್‌ ನಿಲ್ದಾಣದಲ್ಲಿ (Bus Station) ಬಸ್‌ಗಳಿದ್ದರೂ ಪ್ರಯಾಣಿಕರಿರಲಿಲ್ಲ. ಖಾಸಗಿ ಬಸ್‌ಗಳು ಪ್ರಯಾಣಿಕರಿಲ್ಲದೆ ಓಡಾಟ ನಿಲ್ಲಿಸಿದರೆ, ಸರ್ಕಾರಿ ಬಸ್‌ಗಳು ಬೆರಳೆಣಿಕೆಯ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಇನ್ನು ಅಗತ್ಯ ವಸ್ತುಗಳ ಖರೀದಿಗೆ 10 ಗಂಟೆವರೆಗೆ ಅವಕಾಶ ನೀಡಲಾಗಿದ್ದರೂ ಜನ ಇಲ್ಲದೆ ಇದ್ದುದಕ್ಕೆ ಹಣ್ಣು, ತರಕಾರಿ, ದಿನಸಿ ಅಂಗಡಿಗಳಿಗೆ ನಷ್ಟವುಂಟಾಯಿತು.

ಕಲಬುರಗಿ, ರಾಯಚೂರು, ದಾವಣಗೆರೆ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರಗಳಲ್ಲಿ ಶುಕ್ರವಾರ ರಾತ್ರಿ ಹತ್ತು ಗಂಟೆಯಿಂದಲೇ ನಗರದಲ್ಲಿ ಸಂಚರಿಸುತ್ತಿದ್ದ ವಾಹನಗಳ ಪ್ರಮಾಣ ಇಳಿಮುಖವಾಗಿತ್ತು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದರಿಂದ ಸಾರ್ವಜನಿಕರು ಬಂದು ಖರೀದಿ ಮಾಡಿ ಹಿಂದಿರುಗುತ್ತಿದ್ದರು. ಮಂಗಳೂರಿನಲ್ಲಿ ನಿಯಮ ಮೀರಿ ಗ್ರಾಹಕರಿಗೆ ಕುಳಿತು ಆಹಾರ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದ ಹೋಟೆಲ್‌, ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ದಂಡ ವಿಧಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಪೊಲೀಸರು ತುರ್ತು ಮತ್ತು ಅಗತ್ಯ ಸೇವೆಗಳನ್ನು (Essential Services) ಹೊರತುಪಡಿಸಿ ಬಂದ್‌ ಮಾಡಿಸಿದರು.

ವೀಕೆಂಡ್‌ನಲ್ಲಿ ಭಾರೀ ಜನಜಂಗುಳಿಯಿಂದ ಕೂಡಿರುತ್ತಿದ್ದ ಚಿಕ್ಕಮಗಳೂರು (Chikmagaluru) ಜಿಲ್ಲೆಯ ಗಿರಿಧಾಮಗಳು, ಮೈಸೂರು (Mysuru) ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ, ಹಂಪಿ ಮೊದಲಾದ ಪ್ರವಾಸಿ ತಾಣಗಳು, ಕುಕ್ಕೆ ಸುಬ್ರಹ್ಮಣ್ಯ, ಮೈಸೂರಿನ ಚಾಮುಂಡಿ ಬೆಟ್ಟ, ಬಾದಾಮಿ ಬನಶಂಕರಿ, ಉಡುಪಿ, ಕೊಲ್ಲೂರು, ಮೇಲುಕೋಟೆ ದೇವಸ್ಥಾನಗಳಲ್ಲಿ ಶನಿವಾರ ಜನಪ್ರವೇಶಕ್ಕೆ ನಿರ್ಬಂಧ ಇದ್ದುದರಿಂದ ಖಾಲಿಖಾಲಿಯಾಗಿದ್ದವು. ಹೀಗಾಗಿ ಪ್ರವಾಸಿಗರ ಮೇಲೆ ಅವಲಂಬಿತರಾಗಿರುವ ಟಾಂಗಾವಾಲಗಳು, ದಿನಗೂಲಿ ನೌಕರರು ಸಂಕಷ್ಟಅನುಭವಿಸಿದರು.

ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಮೈಸೂರು, ಮಂಗಳೂರು, ಶಿವಮೊಗ್ಗ, ಬೀದರ್‌, ಹುಬ್ಬಳ್ಳಿ, ಧಾರವಾಡಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಇರಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ದಾಖಲಾತಿಗಳನ್ನು ಪರಿಶೀಲಿಸಿ ಸಕಾರಣಕ್ಕೆ ಹೊರಗೆ ಬಂದವರನ್ನು ಮಾತ್ರ ಕಳುಹಿಸುತ್ತಿದ್ದರು. ಅನಗತ್ಯವಾಗಿ ಹೊರಗೆ ಬಂದವರಿಗೆ ಎಚ್ಚರಿಕೆ ನೀಡಿ ವಾಪಸ್‌ ಕಳುಹಿಸುತ್ತಿದ್ದರು. ಇನ್ನು ರಾಯಚೂರಿನಲ್ಲಿ ಮಾಸ್ಕ್‌ ಧರಿಸದವರಿಗೆ ಪೊಲೀಸರು ದಂಡ ವಿಧಿಸಿ, ವಾಹನಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದರೆ, ವಿಜಯಪುರ, ಮಂಗಳೂರುಗಳಲ್ಲಿ ಬೇಕಾಬಿಟ್ಟಿಓಡಾಡುತ್ತಿದ್ದವರಿಗೆ ಬೆತ್ತದ ರುಚಿ ತೋರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here