ಅಜ್ಞಾನವೇ ಮೂಢನಂಬಿಕೆಗೆ ಕಾರಣ: ಎಸ್.ಕೆ. ಕಾಂತಾ

0
24

ಕಲಬುರಗಿ: ಮೂಢನಂಬಿಕೆಗೆ ನಮ್ಮಲ್ಲಿರುವ ಅಜ್ಞಾನವೇ ಕಾರಣವಾಗಿದ್ದು, ಸಮಾಜದ ಸ್ವಾಸ್ಥ್ಯ ಹದಗೆಡಲುಉಳ್ಳವರೇ ನೇರ ಹೊಣೆಗಾರರು ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ಹೇಳಿದರು.

ನಗರದ ಹೊರ ವಲಯದ ಶರಣಸಿರಸಗಿಯ ಬಸವ ಭೂಮಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ, ಗೌರವ ಸತ್ಕಾರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಓದು, ಬರಹ ಬಲ್ಲವರೇ ಮೂಢನಂಬಿಕೆಗೆ ಮೊರೆ ಹೋಗುತ್ತಿರುವುದು ವಿಷಾದದ ಸಂಗತಿ ಎಂದು ತಿಳಿಸಿದರು.

Contact Your\'s Advertisement; 9902492681

ಸಮಾಜದಲ್ಲಿನ ಅಜ್ಞಾನ, ಅಂಧಕಾರ ಹೋಗಲಾಡಿಸುವಲ್ಲಿ ಯುವಕರ ಮೇಲೆ ಹೆಚ್ಚಿನ ಜಬಾಬ್ದಾರಿಯಿದ್ದು, ಶರಣರ ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ವಚನಗಳಲ್ಲಿ ವೈಜ್ಞಾನಿಕತೆ ವಿಷಯ ಕುರಿತು ಮಾತನಾಡಿದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಸಂಜಯ ಮಾಕಲ್, ಇತರ ಧರ್ಮಗಳಿಗೆ ದೇವರು ಕೇಂದ್ರಬಿಂದುವಾದರೆ, ಶರಣ ಧರ್ಮಕ್ಕೆ ಈ ಬದುಕು ಕೇಂದ್ರಬಿಂದುವಾಗಿತ್ತು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ಕಿತ್ತೆಸೆಯಲು ಪ್ರಯತ್ನಿಸಿದ ಶರಣರು ಅಪ್ಪಟ ವಿಜ್ಞಾನಿಗಳಾಗಿದ್ದರು ಎಂದರು.

ಪಟ್ಟಭದ್ರರರು ಸಮಾಜದ ಅಜ್ಞಾನದ ಮೇಲೆಯೇ ಆಳ್ವಿಕೆ (ಸವಾರಿ) ನಡೆಸುತ್ತಿದ್ದು, ಜನರು ಈ ವ್ಯವಸ್ಥೆಯಿಂದ ಹೊರ ಬಂದು ಬಸವಾದಿ ಶರಣರು ಬದುಕಿ ಬೋಧಿಸಿದ ವೈಜ್ಞಾನಿಕ ತಳಹದಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡು ಸಂತೃಪ್ತಿಯ ಜೀವನ ನಡೆಸಬೇಕು ಎಂದು ತಿಳಿಸಿದರು.

ಬೌದ್ಧ ಮತ್ತು ಜೈನ ಧರ್ಮಗಳು ದೇವರ ಬಗ್ಗೆ ಮೌನವಹಿಸಿದಾಗ, ಬಸವಾದಿ ಶರಣರು ದೇವರ ಇರುವಿಕೆಯನ್ನು ಪ್ರತಿಯೊಬ್ಬರಲ್ಲಿ ಸಾಬೀತುಪಡಿಸಿದರು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ಮಾತನಾಡಿ, ವಚನ ಸಾಹಿತ್ಯವು ಪಕ್ಕಾ ಪ್ರಯೋಗಾತ್ಮಕ ಸಾಹಿತ್ಯವಾಗಿದ್ದು, ವೈಜ್ಞಾನಿಕತೆ, ವೈಚಾರಿಕತೆಯೇ ಅದರ ಮೂಲದ್ರವ್ಯ ಎಂದು ವೈಜ್ಞಾನಿಕ ಪರಿಷತ್‌ ನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಆರ್.ಜಿ. ಶೆಟಗಾರ, ಪರಿಷತ್ ಜಿಲ್ಲಾ ಉಪಾಧ್ಯಕ್ಷ ನೀಲಕಂಠರಾವ ಅವಂಟಿ ವೇದಿಕೆಯಲ್ಲಿದ್ದರು.

ಇದೇವೇಳೆಯಲ್ಲಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಪತ್ರಕರ್ತ ಕುಮಾರ ಬುರಡಿಕಟ್ಟಿ, ಸುಮೇಧ ಪ್ರಕಾಶನದ ಡಾ. ದತ್ತಾತ್ರಯ ಇಕ್ಕಳಕಿ, ಚನ್ನಬಸವ ಬಾಲಪಗೋಳ್, ಅಪ್ಪಾರಾವ ಅಕ್ಕೋಣಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ನೇತಾಜಿ ಸುಸುಭಾಷ್ಚಂದ್ರ ಬೋಸ್ ಹಾಗೂ ವೈಜ್ಞಾನಿಕತೆ ಕುರಿತು ಪುಟ್ಟ ಬಾಲಕರಾದ ಪ್ರಮಥ ಸತ್ಯಂಪೇಟೆ ಹಾಗೂ ಪ್ರಣವ ಸತ್ಯಂಪೇಟೆ ಮಾಡಿದ ಭಾಷಣಗಳು ಗಮನಸೆಳೆದವು.

ಶರಣಸಿರಸಗಿ ಹಾಗೂ ಸುತ್ತಲಿನ ಗ್ರಾಮದ 22 ಜನ ಯುವಕರು ರಕ್ತದಾನ ಮಾಡಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ ನಿರೂಪಿಸಿದರು. ಸಂಗಣ್ಣ ಎಸ್. ಗುಳಗಿ ಸ್ವಾಗತಿಸಿದರು. ವಿಶ್ವನಾಥ ಮಂಗಲಗಿ ವಂದಿಸಿದರು.

ಹಣಮಂತ್ರಾಯ ಐನೂಲಿ, ಸತೀಶ ಸಜ್ಜನ, ಎಲ್. ಎಸ್. ಬೀದಿ, ಶಾಂತಕುಮಾರ ಮಳಖೇಡ, ಗಿರಿಮಲ್ಲಪ್ಪ ವಳಸಂಗ, ಹಣಮಂತರಾಯ ಕುಸನೂರ, ಬಸವರಾಜ ಜನಕಟ್ಟಿ, ಸಂತೋಷ ಹೂಗಾರ, ಶಂಕರಪ್ಪ ಮಣ್ಣೂರ, ಬಸವರಾಜ ಚಾಂದಕವಟೆ, ಕಮಲಾಬಾಯಿ, ಸಾಕ್ಷಿ, ಬಸವಪ್ರಭು, ಶಿವಕುಮಾರ ಶಾಬಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here