ದೇಶಕ್ಕೆ ಸಮಬಾಳು ಸಮಪಾಲು ನೀಡಿದ ಸಂವಿಧಾನವೇ ದಾರಿದೀಪ: ಉಸ್ತುರಿ ಶ್ರೀ

0
17

ಆಳಂದ: ಭಾರತ ಸಂವಿಧಾನ ಜಗತ್ತಿನಲ್ಲಿಯೇ ಸರ್ವ ಶ್ರೇಷ್ಠವಾಗಿದೆ. ಎಲ್ಲ ಜಾತಿ, ಧರ್ಮಗ್ರಂಥಗಳಿಗಿಂತ ದೊಡ್ಡದಾಗಿರುವ ನಮ್ಮ ಈ ಸಂವಿಧಾನ ಸಮಬಾಳು, ಸಮಪಾಲು ನೀಡುವ ಮೂಲಕ ದೇಶಕ್ಕೆ ದಾರಿದೀಪವಾಗಿದೆ ಎಂದು ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಧುತ್ತರಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಮಾನವರ ಕಲ್ಯಾಣಕ್ಕಾಗಿ ಸಂವಿಧಾನ ಓದು ನಮ್ಮ ಹಕ್ಕು ಕಾನೂನು ಅರಿವು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರಪತಿಗಳು, ಪ್ರಧಾನಮಂತ್ರಿ, ನ್ಯಾಯಾಧೀಶರು, ಮುಖ್ಯಮಂತ್ರಿಗಳು ಐಎಎಸ್, ಐಪಿಎಸ್, ತಹಸೀಲ್ದಾರಂತ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲರು ಸಂವಿಧಾನಕ್ಕಿಂತ ಯಾರು ದೊಡ್ಡವರಲ್ಲ. ಜನ ಸಾಮಾನ್ಯರು ಸಂವಿಧಾನ ಓದಿ ಕಾನೂನು ತಿಳಿದುಕೊಂಡು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಡೆಯುವಂತಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬೆಳಮಗಿ ಬುದ್ಧ ವಿಹಾರದ ಬಂತೇ ಅಮರ ಜ್ಯೋತಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಶಾಂತಿಗೆ ಭಂಗತರುವ ಪಿತೂರಿ ಕೆಲಸಗಳು ದೇಶದಲ್ಲಿ ನಡೆದಿವೆ. ಅದ್ದರಿಂದ ಯುವಜನತೆ ಜಾಗೃತಿಯಿಂದ ತಮ್ಮ ಜೀವನೋಪಾಯ ಸಂವಿಧಾನದ ಮಾರ್ಗದಲ್ಲಿ ಸಾಗಿ ಶಾಂತಿ, ಪ್ರೀತಿ ಮೈತ್ರಿಯಿಂದ ಗ್ರಾಮದಲ್ಲಿ ಆರೋಗ್ಯ ಮತ್ತು ನೆಮ್ಮದಿ ಜೀವನ ಸದಾ ಸುಖ, ಸಂಪತ್ತು ಮತ್ತು ಜ್ಞಾನ ವೃದ್ಧಿಸುವಂತಹ ಬುದ್ಧ, ಬಸವ, ಡಾ| ಅಂಬೇಡ್ಕಜರ್ ಬೋಧಿಸಿದ ಸಂದೇಶಗಳು ಹೆಚ್ಚಿನ ಅಧ್ಯಯನ ಮಾಡಿದರೆ ಮಾತ್ರ ಬದುಕಿನಲ್ಲಿ ಸಾಧನೆ ಯಶಸ್ಸಿಗೆ ನಾಂದಿಯಾಗುತ್ತದೆ ಎಂದರು.

ಚಂದ್ರಶೇಖರ ಹಿರೇಮಠ ಮಾತನಾಡಿ, ದೇಶಕ್ಕೆ ಡಾ| ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಾರೆ. ೬ ಸಾವಿರಕ್ಕೂ ಹೆಚ್ಚು ಜಾತಿ ಉಪಜಾತಿಗಳು ನೂರೆಂಟು ಭಾಷೆಗಳು ಎಲ್ಲ ಧರ್ಮಿಯರು ಎಲ್ಲ ರಂಗದಲ್ಲೂ ಅಭಿವೃದ್ಧಿ ಸಾಧಿಸಲು ಅವಕಾಶ ನೀಡುವ ಶ್ರೇಷ್ಠ ಸಂವಿಧನ ಓದಿ ಆಚರಣೆಗೆ ತರಬೇಕು ಎಂದು ಹೇಳಿದರು.

ಮುಖಂಡ ರಮೇಶ ಲೋಹಾರ, ಕರ್ನಾಟಕ ದಲಿತ ಸೇನೆಯ ರಾಜ್ಯ ಅಧ್ಯಕ್ಷ ಬಾಬುರಾವ ಅರುಣೋದಯ ಅವರು ಮಾತನಾಡಿ, ಡಾ| ಅಂಬೇಡ್ಕರ್ ಅವರು ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿ ಎಲ್ಲ ಸಮುದಾಯಗಳ ಅಭಿವೃದ್ಧಿ ಬಯಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡಿದ ಸಂವಿಧಾನವಾಗಿದೆ. ಆದರೆ ಆಳುವ ಸರ್ಕಾರಗಳು ಅಧಿಕಾರದಲ್ಲಿ ಇರುವವರು ಸಮನಾಗಿ ನ್ಯಾಯ ಮತ್ತು ಸೌಲಭ್ಯ ಒದಗಿಸದೆ ಸಂವಿಧಾನ ರಚಿಸಿದ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಮತ್ತು ಸಂವಿಧಾನವನ್ನು ಅಪಪ್ರಚಾರ ಮಾಡುತ್ತಿವೆ. ಅದ್ದರಿಂದ ಯುವಜನತೆ ಸಂವಿಧಾನದ ಅಧ್ಯಯನ ಮಾಡಿ ಆಶಯಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಹೇಳಿದರು.

ಜೆಸ್ಕಾಂ ನಿರ್ದೇಶಕ ವೀರಣ್ಣಾ ಮಂಗಾಣೆ, ಕಲ್ಯಾಣಿ ಭಾವಿಮನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಮಾತನಾಡಿದರು. ಶಾಂತಪ್ಪ ದಿಡ್ಡಿಮನಿ ಸೇರಿದಂತೆ ಗ್ರಾಪಂ ಸದಸ್ಯರು, ಪೊಲೀಸ್ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖಂಡ ಉಮೇಶ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here