Tuesday, July 16, 2024
ಮನೆಬಿಸಿ ಬಿಸಿ ಸುದ್ದಿಪತ್ರಕರ್ತ ಸಮಾಜಕ್ಕೆ ಸತ್ಯ ತಿಳಿಸುವ ಕೆಲಸ ಮಾಡಲಿ: ಮಕ್ಬೂಲ್ ಅಹ್ಮದ್ ಸಿರಾಜ್ ಸಲಹೆ

ಪತ್ರಕರ್ತ ಸಮಾಜಕ್ಕೆ ಸತ್ಯ ತಿಳಿಸುವ ಕೆಲಸ ಮಾಡಲಿ: ಮಕ್ಬೂಲ್ ಅಹ್ಮದ್ ಸಿರಾಜ್ ಸಲಹೆ

ಬೀದರ್: ಪತ್ರಕರ್ತ ಸಮಾಜಕ್ಕೆ ಸತ್ಯ ತಿಳಿಸುವ ಕೆಲಸ ಮಾಡಬೇಕು. ಮತಾಂಧತೆಯಿಂದ ಅಥವಾ ದುರುದ್ದೇಶದಿಂದ ಬರೆಯಬಾರದು. ಸತ್ಯ ಒಂದಿಲ್ಲೊಂದು ದಿನ ಬಹಿರಂಗಗೊಳ್ಳುತ್ತದೆ. ಎಚ್ಚರಿಕೆಯಿಂದ ಬರೆಯುವ ಮೂಲಕ ಪತ್ರಿಕಾ ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಬಿಬಿಸಿ ಉರ್ದು ನಿವೃತ್ತ ವರದಿಗಾರ ಮಕ್ಬೂಲ್ ಅಹಮ್ಮದ್ ಸಿರಾಜ್ ಅವರು ಇಲ್ಲಿ ಹೇಳಿದರು.

ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಉರ್ದು ಅಕ್ಯಾಡೆಮಿಯ ವತಿಯಿಂದ ಜರುಗಿದ ಉರ್ದು ಪತ್ರಿಕೋದ್ಯಮ ಕುರಿತ ಕಲಬುರ್ಗಿ ವಿಭಾಗಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉರ್ದು ಪತ್ರಿಕೋದ್ಯಮ ಇಂದು ಹಲವು ಕಾರಣಗಳಿಂದಾಗಿ ಹಿಂದೆ ಉಳಿದಿದೆ. ಅಧ್ಯಯನದ ಕೊರತೆ, ತಂತ್ರಜ್ಞಾನದ ಬಳಕೆಯಲ್ಲಿ ಹಿಂದೆ ಬಿದ್ದರೆ ಪತ್ರಿಕೋದ್ಯಮದಲ್ಲೂ ಹಿಂದೆ ಬೀಳುತ್ತೇವೆ. ಕಾಲಕ್ಕೆ ಅನುಗುಣವಾಗಿ ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಉರ್ದು ಪತ್ರಿಕೋದ್ಯಮ ಅವನತಿಯತ್ತ ಸಾಗಲಿದೆ ಎಂದರು.

೧೯೪೫ಕ್ಕೂ ಮೊದಲು ಹಿಂದಿ ಭಾಷೆಯ ಅಸ್ತಿತ್ವಕ್ಕಾಗಿ ಉರ್ದುವಿನಲ್ಲಿ ಪತ್ರ ಬರೆದು ಹೋರಾಟ ನಡೆಸಲಾಗಿತ್ತು. ಇಂದು ಉರ್ದು ಭಾಷೆಯು ಮುಸ್ಲಿಂ ಹಾಗೂ ಇಸ್ಲಾಂಗೆ ಸೀಮಿತವಾಗಿದೆ. ನಾವು ಬದಲಾಗದಿದ್ದರೆ ಭಾಷೆ ಉಳಿಯುವುದಿಲ್ಲ ಎಂದು ಅವರು ಹೇಳಿದರು. ಕರ್ನಾಟಕ ಉರ್ದು ಅಕ್ಯಾಡೆಮಿಯ ಅಧ್ಯಕ್ಷ ಮುಬಿನ್ ಮುನಾವರ್ ಅವರು ಮಾತನಾಡಿ, ಇಂದು ಯಾವುದೇ ನಗರಕ್ಕೆ ಹೋದರೂ ಪ್ರೆಸ್ ಎಂದು ಅಂಟಿಸಿಕೊಂಡು ವಾಹನಗಳನ್ನು ಓಡಿಸಿಕೊಂಡು ಹೋಗುವವರ ಸಂಖ್ಯೆ ಅಧಿಕವಾಗಿದೆ. ನೈಜ ಪತ್ರಕರ್ತರಿಗಿಂತ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂದು ಯಾವುದೇ ಪದವಿ ಇಲ್ಲದಿದ್ದರೂ ಕ್ಯಾಮೆರಾ ಹಾಗೂ ಲೋಗೊ ಹಿಡಿದುಕೊಂಡು ಬರುವ ಪತ್ರಕರ್ತರ ಸಂಖ್ಯೆ ಹೆಚ್ಚಾಗಿದೆ. ಒಳ್ಳೆಯ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರೂ  ನೈಜ ಪತ್ರಕರ್ತರು ಅಪರೂಪಕ್ಕೆ ಹಾಜರಾಗುತ್ತಿದ್ದಾರೆ. ಹೀಗಾಗಿ ಒಳ್ಳೆಯ ಸುದ್ದಿಗಳು ಮಹತ್ವ ಕಳೆದುಕೊಳ್ಳುತ್ತಿವೆ’ ಎಂದು ಅವರು ಹೇಳಿದರು. ‘ಕಲಷಿತಗೊಂಡಿರುವ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪತ್ರಕರ್ತರು ಮಾತೃ ಹೃದಯದಿಂದ ಕಾರ್ಯನಿರ್ವಹಿಸುವ ಅಗತ್ಯ ಇದೆ. ಸಮಾಜದಲ್ಲಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವುಗಳ ಮೇಲೆ ಬೆಳಕು ಚೆಲ್ಲುವ ಅಗತ್ಯ ಇದೆ ಎಂದು ಅವರು ತಿಳಿಸಿದರು. ಹಿರಿಯ ಪತ್ರಕರ್ತ ಸಯ್ಯದ್ ಅಹಮ್ಮದ್ ಜಿಲಾನಿ ಮಾತನಾಡಿ, ಆಧುನಿಕತೆಯ ಹೆಸರಲ್ಲಿ ಪತ್ರಕರ್ತರಿಗೆ ಅನೇಕ ಜವಾಬ್ದಾರಿಗಳನ್ನು ಹೇರಿ ಅವರು ಒತ್ತಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ. ಇದರಿಂದ ಪತ್ರಕರ್ತರ ನೈಜ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ’ ಎಂದು ಹೇಳಿದರು. ಉರ್ದು ಪತ್ರಕರ್ತರು ಅಧ್ಯಯನ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕಾರಣ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ.

ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಎಂದು ಅವರು ತಿಳಿಸಿದರು. ಕರ್ನಾಟಕ ಮುಸ್ಲಿಂ ಪತ್ರಿಕೆಯ ಸಂಪಾದಕ ಸೈಯದ್ ತನ್ವೀರ್ ಅಹಮ್ಮದ್, ವಿಜಯಪುರದ ಡೇಲಿ ಸಾಲರ್‌ನ ಹಿರಿಯ ವರದಿಗಾರ ರಫಿ ಭಂಡಾರಿ, ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿದರು. ಉರ್ದು ಪತ್ರಕರ್ತರು, ಉರ್ದು ಭಾಷೆ ಹಾಗೂ ಸಾಹಿತ್ಯ ಉಳಿಸಿ ಬೆಳೆಸಲು ಶ್ರಮಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಉರ್ದು ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿ ಮೃತಪಟ್ಟ ಪತ್ರಕರ್ತರ ಕುಟುಂಬದವರನ್ನು ಗೌರವಿಸಲಾಯಿತು.

ಕರ್ನಾಟಕ ಉರ್ದು ಅಕ್ಯಾಡೆಮಿಯ ಸದಸ್ಯ ಮಹಮ್ಮದ್ ಶಾಹೇದ್ ಖಾಜಿ, ಹಿರಿಯ ಪತ್ರಕರ್ತ ಕಾಜಿ ಅಲಿಯೊದ್ದಿನ್(ಅಲಿಬಾಬಾ) ಅವರು ಉಪಸ್ಥಿತರಿದ್ದರು.  ಉರ್ದು ಅಕ್ಯಾಡೆಮಿ ಸದಸ್ಯ ಮಹಮ್ಮದ್ ಸಾಜೀದ್ ಪಾಶಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮತ್ತೊಬ್ಬ ಸದಸ್ಯ ಡಾ. ಮಾಜೀದ್ ದಾಗಿ ಅವರು ವಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular