ಕನ್ನಡ ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕಲಿಸಲು ಮನವಿ

0
37

ಕಲಬುರಗಿ: ರಾಜ್ಯದ ಎಲ್ಲ ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಅಂತಾರಾಷ್ಟ್ರೀಯ ಮಂಡಳಿ (ಐಬಿ) ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕೆಂದು ಎಂದು ಪಾಳಾ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪದಾಧಿಕಾರಿಗಳು ಆಗ್ರಹಿಸಿದರು.

ಈವರೆಗೆ ಇದ್ದ ನಿಯಮಕ್ಕೆ ತಿದ್ದುಪಡಿ ತಂದು ಇನ್ನು ಮುಂದೆ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕನ್ನಡ ಕಲಿಯಬೇಕೆಂಬ ಕರಡು ನಿಯಮಾವಳಿ ರೂಪಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದು
ಖಂಡನೀಯ ಎಂದು ತಿಳಿಸಿದರು.

Contact Your\'s Advertisement; 9902492681

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಟ್ರಸ್ಟ್ ಅಧ್ಯಕ್ಷ ಹಾಗೂ ಸದಸ್ಯರು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಮಾತ್ರ ಕಡ್ಡಾಯವಾಗಿ ಕಲಿಯುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣ ಕನ್ನಡ ಭಾಷಾ ಕಲಿಕಾ ಕಾಯ್ದೆ ೨೦೧೫ರ ಅನುಸಾರ ಕನ್ನಡ ಭಾಷೆಯನ್ನು ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಲ್ಲಿ ದ್ವಿತೀಯ ಅಥವಾ ತೃತೀಯವಾಗಿ ಕಲಿಸುವ ಅವಕಾಶ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಇದರಿಂದ ಕನ್ನಡಕ್ಕೆ ತೀವ್ರ ಹಿನ್ನಡೆಯಾಗಲಿದೆ. ಜೊತೆಗೆ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೂ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಲ್ಲದೆ, ಈ ಶಾಲೆಗಳ ಮೇಲಿನ ಸರ್ಕಾರದ ನಿಯಂತ್ರಣ ಇನ್ನಷ್ಟು ಕೈತಪ್ಪಲು ದಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಇದುವರೆಗೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕೆಂಬ ನಿಯಮ ಇತ್ತು. ಬಹುತೇಕ ಶಾಲೆಗಳಲ್ಲಿ ಇಂಗ್ಲೀಷ್ ಅನ್ನು ಪ್ರಥಮ ಭಾಷೆಯಾಗಿ, ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸಲಾಗುತ್ತಿತ್ತು. ಈಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ರೂಪಿಸಿರುವ ಕರಡು ನಿಯಮಾವಳಿಯಿಂದ ಕನ್ನಡ ಭಾಷೆಯ ಕಲಿಕೆಗೆ ಹಿನ್ನಡೆಯುಂಟಾಗುತ್ತದೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡವನ್ನು ಕಲಿಸಿದಿದ್ದಲ್ಲಿ ಬೇರೆ ರಾಜ್ಯ-ದೇಶಗಳಲ್ಲಿ ಕಲಿಸಲಾದೀತೆ. ಅಲ್ಲದೆ, ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡ ಕಲಿಕೆಗೆ ವಿನಾಯಿತಿ ನೀಡುವುದರಿಂದ ಶಿಕ್ಷಣದಲ್ಲಿ ಕನ್ನಡ ಕಲಿಕೆಗೆ ಹಿನ್ನಡೆಯುಂಟಾಗುತ್ತದೆ. ಕನ್ನಡ ಭಾಷಾ ಕಲಿಕಾ ಅಧಿನಿಯಮದ ಜಾರಿಗೆ ಕನ್ನಡಿಗರು ಎಷ್ಟು ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು ಎಂಬ ವಿಷಯ ತಮಗೂ ತಿಳಿದ ವಿಷಯವಾಗಿದೆ.

ಗೋಕಾಕ್ ಚಳುವಳಿಯ ಮೂಲ ಉದ್ದೇಶವೇ ಇದಾಗಿತ್ತು. ಹಾಗಾಗಿ ಈ ತಿದ್ದುಪಡಿ ಕೇವಲ ಶಾಸಕಾಂಗದ ಅನುಮೋದನೆಯೊಂದಿಗೆ ಜಾರಿಯಲ್ಲಿದ್ದ ಕಾಯ್ದೆಯನ್ನು ತಿದ್ದುವುದಷ್ಟೇ ಅಲ್ಲ; ಬದಲಿಗೆ ಈ ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಗೋಕಾಕ್ ವರದಿಯನ್ನು ಸಹ ತಿದ್ದಿದಂತೆ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕನ್ನಡ ಕಲಿಯಬೇಕೆಂಬ ಕರಡು ನಿಯಮಾವಳಿ ರೂಪಿಸಿ ಇಲಾಖೆಯು ಅಧಿಸೂಚನೆ ಹೊರಡಿಸಿರುವುದು ಪ್ರಜ್ಞಾವಂತ ಕನ್ನಡ ಮನಸ್ಸುಗಳಿಗೆ ಬಹಳಷ್ಟು ನೋವುಂಟು ಮಾಡಿದೆ ಎಂದಿದ್ದಾರೆ.

ಇಲ್ಲವಾದಲ್ಲಿ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಸರ್ಕಾರದ ನಿಲುವಿನ ವಿರುದ್ಧ ಹೋರಾಟದ ದಾರಿ ತುಳಿಯುವುದು ನಮಗೆ ಅನಿವಾರ್ಯವಾಗುತ್ತದೆ. ಇದು ಕನ್ನಡಿಗರ ಅಸ್ತಿತ್ವದ ಪ್ರಶ್ನೆ. ಇದನ್ನು ಅಖಂಡ ಕನ್ನಡಿಗರ ಮನವಿಯಾಗಿ ಸ್ವೀಕರಿಸುವಂತೆ ಕೋರುತ್ತಾ, ರಾಜ್ಯದ ಅಧಿಕೃತ ಭಾಷೆಯ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಸಲುವಾಗಿ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಯಬೇಕೆಂಬ ಹೊಸ ಕರಡು ನಿಯಮಾವಳಿವನ್ನು ಹಿಂಪಡೆದು, ಮೊದಲಿನ ಕನ್ನಡ ಕಲಿಕಾ ವಿಧಾನ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಳಾ, ಬಿ.ಎಚ್. ನಿರಗುಡಿ, ಡಾ. ಆನಂದ ಸಿದ್ದಾಮಣಿ, ಅಂಬಾರಾಯ ಕೋಣೆ, ವಿಜಯಕುಮಾರ ಮಠಪತಿ, ಪರಮೇಶ್ವರ, ಶಿವಯೋಗಿ ಪಾಳಾ, ಗುಂಡಪ್ಪ ನಾಟೀಕಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here