ಸೊಂಟದ ನೋವಿಗೆ ಪ್ರಮುಖ ಕಾರಣಗಳೇನು!?

0
68
  •  ಆಯುರ್ವೇದದಲ್ಲಿದೆಯಾ ಶಾಶ್ವತ ಚಿಕಿತ್ಸೆಯೂ.!?

ನಾನು ಬಹಳ ದಿನಗಳಿಂದಲೂ ಮಾನಸಿಕ ಆರೋಗ್ಯದ ಸಮಸ್ಯೆ ಜೊತೆಗೇನೇ ಇತ್ತೀಚೆಗೆ ಅಂದರೆ ಕಳೆದ ಒಂದು ತಿಂಗಳಿಂದ ಬೆನ್ನು ಅಂದರೆ ಸೊಂಟದ ನೋವಿನ ಖಾಯಿಲೆಯಿಂದ ಬಳಲುತ್ತಿದ್ದೇನೆ. ಈಗ ವಿಪರೀತವಾಗಿ ಬೆನ್ನು ನೋವು ಇದೆ ಎಂದು ನಮ್ಮ ಹುಬ್ಬಳ್ಳಿಯ ಬಿ.ಎ.ಎಂ.ಎಸ್. ಡಾಕ್ಟರ್ ವೊಬ್ಬರ ಬಳಿ ಹೇಳಿಕೊಂಡೆನು. ಅವರು ನನ್ನಪ್ಪನ ಕಾಲದಿಂದಲೂ ಅವರಿಗೆ ಮಾವನವರೇ ಎಂದು ಕರೆಯುವುದು..!

ಅವರು ಅದ್ಯಾಕೋ ಸಿಟ್ಟಾದವರಂತೆ ಕಾಣುತ್ತದೆ. ಅವರು ಆನವಟ್ಟಿ ಹತ್ತಿರದ ಕೊಟಿಪುರಕ್ಕೆ ಹೋಗು, ಅಲ್ಲಿಯೇ ಬೆನ್ನು ನೋವಿಗೆ ಚಿಕಿತ್ಸೆ ಪಡೆ ಎಂದು ಉತ್ತರಿಸಿದರು ವಾಟ್ಸ್ ಆಪ್ ನಲ್ಲಿ. ಆವಾಗ ನನಗೆ ವಿಪರೀತವಾಗಿ ಸಿಟ್ಟುಬಂತು. ಏಕೆಂದರೆ ನಾನು ಮೊದಲು ಮಾನಸಿಕ ಆರೋಗ್ಯದ ಚಿಕಿತ್ಸೆಯನ್ನು ಇದೇ ಕೊಟಿಪುರದ ಡಾ.ಮಧುಶ್ರೀ ರಾಗಿಯವರ ಹತ್ತಿರ ಪಡೆದಿದ್ದೇನು. ‘ಆಯಗಾರರು ಆಯಗಾರಿಗೆ’ ಸೇರಲ್ಲ, ಅಂತಾರೆ..!
ಹಾಗೆಯೇ ಆಯಿತು ಎಂದು ಕಾಣುತ್ತದೆ..! ಇರಲಿ…

Contact Your\'s Advertisement; 9902492681

ಆಗ ಅನಿವಾರ್ಯವಾಗಿ ನನ್ನ ನೀಲಗುಂದದ ಕಾಕಾ ಆದ ಸ್ವಾಮಿ ಎಂಬ ನಮ್ಮ ಕಾಕಾನಿಗೆ ಅದಕ್ಕೂ ಮೊದಲು ನಮ್ಮ ಅಳಿಯ ರಫಿಗೆ ವಾಟ್ಸ್ ಆಪ್ ಮೂಲಕ ತಿಳಿಸಿದೆ. ಆ ರಫಿಯೂ ಒಂದು ಔಷಧವನ್ನು ಹೇಳಿದ. ಅವನೂ ಬಿ.ಎ.ಎಂ.ಎಸ್. ಡಾಕ್ಟರ್..!

ಅಲ್ಲಿಂದ ಅದೇ ನಮ್ಮ ನೀಲಗುಂದದ ಸ್ವಾಮಿ ಕಾಕಾಗೆ ಮತ್ತೆ ಮತ್ತೇ ಹೇಳಿದಾಗ, ಅವನು ‘ಜೀರೋ ಡಾಲ್ ಪ್ಲಸ್’ ಗುಳಿಗೆಗಳನ್ನು ಪ್ರಥಮವಾಗಿ ಹೇಳಿದನು ಅಲ್ಲಿಂದ.
ಆನಂತರ ‘BONTON – DQ’, ‘THRIPULA CHURNA’ ಆನಂತರ ಒಂದು ಕ್ಯಾಪ್ಸುಲ್ ಅಲ್ಲದೇ ‘ಮಹಾವಿಷಗರ್ಭ ತೈಲ’ವನ್ನು ಹೇಳಿದ. ಆ ‘ಮಹಾವಿಷಗರ್ಭ ತೈಲ’ ಹೊಟ್ಟೆವೊಳಗೆ ಹೋಗಬಾರದು ಮಾರಾಯ ಎಂಬ ಎಚ್ಚರಿಕೆಯನ್ನೂ ಕೊಟ್ಟನು..!

ಆಯಿತು ಕಾಕಾ ಎಂದು ನಾನು ಹೇಳಿದೆ. ಆ ನೀಲಗುಂದ ನಮ್ಮ ಸ್ವಾಮಿ ಕಾಕಾ ಹೇಳಿದಂತೆ ಮಾಡಿದೆ ಮತ್ತು ಆ ಔಷಧಗಳನ್ನು ಬಳಸಿದೆನು. ಒಂದು ಸ್ವಲ್ಪವೇ ನನ್ನ ಬೆನ್ನುನೋವು ಕಡಿಮೆ ಆಯಿತು..!

ಈ ಔಷಧಗಳನ್ನು ಎಲ್ಲಾ ಫೋನ್ ಮೂಲಕವೇ ಹೇಳಿದಂತೆ ಆಯಿತು. ಏಕೆಂದರೆ ಅವರು ಇರುವುದು ಬೇರೆಡೆಗೆ. ನಾನು ಇರುವುದು ಬೇರೆಕಡೆಗೆ. ಆದರಿಂದ ಅವರು ಔಷಧಗಳನ್ನು ಹೇಳಿದಂತೆ ಬಳಸಿದೆನು.

ಇದಕ್ಕೂ ಹಲವಾರು ವರ್ಷಗಳ ಹಿಂದೆಯೇ ನೀಲಗುಂದದ ನಮ್ಮ ಸ್ವಾಮಿ ಕಾಕಾ ಇದೇ ಖಾಯಿಲೆಗೆ ‘ಗದಗ’ದಲ್ಲಿ ಡಾಕ್ಟರ್ ವೊಬ್ಬರ ಕಡೆಗೆ ನನ್ನನ್ನು ತೋರಿಸಿ, ನನಗೆ ಚಿಕಿತ್ಸೆ ಮತ್ತು ಸೊಂಟಕ್ಕೆ ಒಂದು ಬೆಲ್ಟ್ ಕೊಡಿಸಿದ್ದನು. ಅದೇ ಖಾಯಿಲೆ ಈಗ ನನ್ನ ಶಕ್ತಿ ಕಡಿಮೆಯಾದಂತೆ ಮತ್ತೆ ಕಾಣಿಸಿಕೊಂಡಿತು..!
ಇದಿಷ್ಟು ಆಯಿತು. ಈಗ ಇದೇ ನಮ್ಮ ಸ್ವಾಮಿ ಕಾಕಾನನ್ನು ಈ ಖಾಯಿಲೆ ಬಗೆಗೆ ಮಾತಾಡಿಸಿದೆನು, ಅವನು ಈ ರೀತಿಯಲ್ಲಿ ನನಗೆ ಮಾಹಿತಿಯನ್ನು ಕೊಟ್ಟನು..!

# ಈ ಸೊಂಟದ ನೋವು..! —

ಸೈಆಟಿಕ (ಲ್ಯಾಟಿನ್ ಪದ) ಇದನ್ನು ಸೊಂಟದ ನರದ ನೋವು ಅಥವಾ ಕಟಿ ನರದ ಬೇನೆ ಅಥವಾ ಕಟಿವಾಯು ಅಥವಾ ಕಟಿ ವಾತ ಎಂದು ಕರೆಯುತ್ತಾರೆ.
ಹೆಸರೇ ಹೇಳುವಂತೆ ಇದು ಮುಖ್ಯವಾಗಿ ಸೊಂಟದಲ್ಲಿ ಕಂಡುಬರುವ ಸಮಸ್ಯೆಯಾಗಿದೆ..!

ಕೆಳ ಸೊಂಟದಿಂದ ಕಾಲಿನವರೆಗೆ ಕಾಣಿಸಿಕೊಳ್ಳುವ ನೋವಿಗೆ ಸೈಆಟಿಕ ಎಂದು ಕರೆಯಲಾಗುತ್ತದೆ.
ಈ ನೋವು ಮೊದಲು ಬೆನ್ನಿನಲ್ಲಿ ಗೋಚರಿಸಿ ನಂತರ ಹೊರಭಾಗದಿಂದ ಕಾಲಿನ ತನಕ ಹಬ್ಬುತ್ತದೆ. ಸಾಮಾನ್ಯವಾಗಿ ದೇಹದ ಒಂದು ಭಾಗದಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುವ ಮುಖ್ಯ ಲಕ್ಷಣ ಇದಾಗಿದೆ. ಆದಾಗ್ಯೂ ಕೆಲವು ಪ್ರಕರಣಗಳಲ್ಲಿ ಎರಡು ಪಾಶ್ರ್ವಗಳಲ್ಲಿ ಯಾತನೆಗೆ ಕಾರಣವಾಗಬಹುದು..!

ಕಟಿ ವಾತದ ನೋವು ಸಹಿಸಲಸಾಧ್ಯ..!
ನಡೆಯುವಾಗ, ನಿಂತಿರುವಾಗ, ಅಥವಾ ಬಾಗುವಾಗ, ವಾಹನ ಚಾಲನೆ ಮಾಡುವಾಗ, ಕಂಪ್ಯೂಟರ್ ಮುಂದೆ ಕೆಲಸ ಮಾಡುವಾಗ, ಮನೆಗೆಲಸ ನಿರ್ವಹಿಸುವಾಗ, ಕೆಮ್ಮುವಾಗ ಅಥವಾ ಸೀನುವಾಗ ಹಾಗೂ ದಿನನಿತ್ಯದ ಅನೇಕಾನೇಕ ಇತರ ಚಟುವಟಿಕೆಗಳನ್ನು ನಡೆಸುವಾಗ, ಇದು ಹಠಾತ್ ಮತ್ತು ತೀವ್ರ ನೋವು ನೀಡುತ್ತದೆ. ಕಟಿ ವಾಯು ಸಮಸ್ಯೆಯಿಂದ ಬಳಲುತ್ತಿರುವವರು ಅದರಲ್ಲೂ ತೀವ್ರ ಸ್ವರೂಪದ ಯಾತನೆ ಅನುಭವಿಸುವವರಿಗೆ ತಮ್ಮ ಜೀವನದ ಅನೇಕಾನೇಕ ಸಂಗತಿಗಳಿಗೆ ಅಡಚಣೆ ಉಂಟು ಮಾಡುವ ಲಕ್ಷಣಗಳು ಕಂಡುಬರುತ್ತವೆ..!

# ಸೊಂಟ ಬೇನೆಗೆ ಕಾರಣಗಳು —

ಸೊಂಟದ ನರದಲ್ಲಿ ಕಂಡುಬರುವ ಉರಿಯೂತದಿಂದ ಕಟಿ ಬೇನೆ ಕಾಣಿಸಿಕೊಳ್ಳುತ್ತದೆ. ಕೆಳ ಸೊಂಟದ ಭಾಗದಲ್ಲಿರುವ ಅನೇಕ ನರಗಳಲ್ಲಿ ಕಟಿ ನರ ಇರುತ್ತದೆ ಹಾಗೂ ಪಿತಾಶಯದ ಮೂಲಕ ಇದು ಪ್ರತಿ ತೊಡೆವರೆಗೂ ಹಬ್ಬಿರುತ್ತದೆ.

# ಸೈಅಟಿಕಗೆ ಹೆಚ್ಚುವರಿ ಸಾಮಾನ್ಯ ಕಾರಣಗಳೆಂದರೆ —

ಕೆಳ ಬೆನ್ನಿನಲ್ಲಿ ಬೆನ್ನುಹುರಿ ನಾಳವು ಕರಿದಾಗುವಿಕೆ (ಲಂಬರ್ ಸ್ಪೈನಲ್ ಸ್ಟೆನೋಸಿಸ್), ಬೆನ್ನುಮೂಳೆ ನಡುವೆ ಕುಷನ್ ರೀತಿ ಕಾರ್ಯನಿರ್ವಹಿಸುವ ಬೆನ್ನಿನ ತಟ್ಟೆಲುಬು (ಡಿಸ್ಕ್) ಮುರಿಯುವಿಕೆ ಅಥವಾ ತಟ್ಟೆಲುಬು ಅವನತಿ ರೋಗ (ಡಿಜನೆರೇಟಿವ್ ಡಿಸ್ಕ್ ಡೀಸಿಸ್).
ಒಂದು ಬೆನ್ನುಮೂಳೆಯು ಮುಂದಕ್ಕೆ ಜಾರಿ ಇನ್ನೊಂದರ ಮೇಲೆ ಕೂರುವ ಸಮಸ್ಯೆ ಇದಾಗಿರುತ್ತದೆ.
ಇದನ್ನು ಸ್ಪಾಂಡಿಲೊಲಿಸ್‍ಥೆಸಿಸ್ ಎಂದು ಕರೆಯುತ್ತಾರೆ. ಗರ್ಭಿಣಿಯರಲ್ಲಿ ಭ್ರೂಣದ ತೂಕದ ಪರಿಣಾಮವಾಗಿ ಬೆನ್ನು ನರದ ಮೇಲೆ ಒತ್ತಡ ಉಂಟಾಗುವಿಕೆ ಅಥವಾ ಕೆಳ ಬೆನ್ನು ಅಥವಾ ಪೃಷ್ಠ ಭಾಗದಲ್ಲಿನ ಸೆಳೆತದಿಂದಾಗಿ ಕಟಿ ವಾಯು ಕಂಡುಬರುತ್ತದೆ..!

ಕೆಲವು ಸಂಶೋಧನೆಗಳು ಹೇಳುವಂತೆ ಅತಿಯಾದ ತೂಕ ಹೊಂದಿರುವವರು, ಸ್ಥೂಲಕಾಯರು, ಅಥವಾ ಧೂಮಪಾನಿಗಳಲ್ಲಿ ಕಟಿ ಬೇನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ..!
ತಂಬಾಕು ಬಳಕೆ, ಅಥವಾ ಯಾವುದೇ ರೀತಿಯ ನಿಕೋಟಿನ್ ಸೇವನೆಯಿಂದಾಗಿ ತಟ್ಟೆಲುಬು ಅವನತಿಗೆ ಕಾರಣವಾಗುತ್ತದೆ ಎಂಬುದೂ ಅಧ್ಯಯನ ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ. ದಿನನಿತ್ಯ ವ್ಯಾಯಾಮ ಮಾಡದವರು, ಅತಿ ಎತ್ತರದ ಹಿಮ್ಮಡಿ ಇರುವ ಪಾದರಕ್ಷೆಗಳನ್ನು ಧರಿಸುವ ಅಥವಾ ತುಂಬಾ ಮೃದುವಾಗಿರುವ ಹಾಸಿಗೆ ಮೇಲೆ ಮಲಗುವ ಮಂದಿಯಲ್ಲಿ ಕಂಡುಬರುವ ಬೆನ್ನುನೋವು ಈ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗುತ್ತದೆ..!

# ಕಟಿ ಬೇನೆ ಲಕ್ಷಣಗಳು ಮತ್ತು ಚಿಹ್ನೆಗಳು —

ಕೆಳಬೆನ್ನು ನೋವು, ಹಿಂಬದಿ ಅಥವಾ ಕಾಲು ನೋವು, ಇದು ಕುಳಿತ್ತಿದ್ದಾಗ ತೀವ್ರ ಯಾತನೆ ನೀಡುತ್ತದೆ. ಪೃಷ್ಠದ ನೋವು, ಕಾಲಿನಲ್ಲಿ ಉರಿ ಅಥವಾ ಜೋಮು ಹಿಡಿದಂತಾಗುವಿಕೆ, ಜುಮ್ಮೆನ್ನುವಿಕೆ, ದುರ್ಬಲತೆ, ನಿತ್ರಾಣ, ಉದಿಕೊಳ್ಳುವಿಕೆ ಅಥವಾ ಕಾಲು ಇಲ್ಲವೆ ಪಾದವನ್ನು ಚಲಿಸಲು ಕಷ್ಟವಾಗುವಿಕೆ..!

# ಕಟಿ ವಾತದ ಬಗ್ಗೆ ಆಯುರ್ವೇದ ದೃಷ್ಟಿಕೋನ —

ಆಯುರ್ವೇದದಲ್ಲಿ ಸೈಆಟಿಕ ಅಥವಾ ಕಟಿ ಬೇನೆಯಲ್ಲಿ ಗ್ರಿಧ್ರಾಸಿ ಎಂದು ಕರೆಯುತ್ತಾರೆ. ಗ್ರಿಧ್ರಾ ಎಂದರೆ ಹದ್ದು ಎಂದರ್ಥ. ಈ ಸಮಸ್ಯೆಯಿಂದ ನರಳುತ್ತಿರುವವರು ಹದ್ದು ನಡೆಯುವಂತೆ ನಡೆಯುತ್ತಾರೆ. ವಾತ ದೋಷದಿಂದಾಗಿ ಈ ಸಮಸ್ಯೆ ಕಂಡುಬರುತ್ತದೆ ಎಂದೂ ಆಯುರ್ವೇದದಲ್ಲಿ ಪರಿಗಣಿಸಲಾಗಿದೆ. ವಾತ ಮತ್ತು ಕೆಲವೊಮ್ಮೆ ಕಫ ದೋಷದಿಂದಾಗಿ ಕಟಿ ವಾಯು ಗೋಚರಿಸುತ್ತದೆ..!

# ಬೆನ್ನು ನರದ ನೋವು ನಿರ್ವಹಣೆ —

ಆಯುರ್ವೇದದಲ್ಲಿ ಈ ಸಮಸ್ಯೆಗೆ ಶಸ್ತ್ರಚಿಕಿತ್ಸಾರಹಿತ ಉಪಶಮನವಿದೆ ಹಾಗೂ ಚಿಕಿತ್ಸೆ ಯಶಸ್ಸಿನ ಅತ್ಯಧಿಕ ಪ್ರಮಾಣದೊಂದಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಿತಿ ಹೊಂದಿದೆ. ದೇಹದಲ್ಲಿನ ದೋಷಗಳನ್ನು ಸಮತೋಲನ ಮಾಡುವ ಮೂಲಕ ಶರೀರದ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು ಈ ಚಿಕಿತ್ಸೆಯ ಗುರಿಯಾಗಿದೆ..!
ಈ ಸಮಸ್ಯೆಗೆ ಅನೇಕ ರೀತಿಯ ಚಿಕಿತ್ಸೆಗೆ ಲಭ್ಯವಿದೆ. ಮೌಖಿಕ ಚಿಕಿತ್ಸೆಗಳಿಂದ ಪಂಚಕರ್ಮ ವಿಧಾನಗಳ ತನಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕಟಿ ವಾತ ಅಥವಾ ಕಟಿ ಬೇನೆಗೆ ಆಯುರ್ವೇದಲ್ಲಿ ಮೂರು ವಿವಿಧ ವಿಧಾನಗಳಿವೆ..! ಮೊದಲನೆಯದು ಶೋಧನ, ಅಂದರೆ ದೇಹದಿಂದ ದೋಷಗಳು ಮತ್ತು ವಿಷ ವಸ್ತುಗಳನ್ನು ಹೊರ ಹಾಕುವುದು. ಎರಡನೆಯದು ಶಮನ, ಅಂದರೆ ಅಸಮತೋಲನಗೊಂಡ ದೋಷಗಳು ಅಥವಾ ದೇಹದಲ್ಲಿ ಮಾರ್ಪಾಡು ಕಾರ್ಯಕ್ಕೆ ಕಾರಣವಾದ ಅಂಗಗಳನ್ನು ಸರಿಪಡಿಸುವಿಕೆ, ಹಾಗೂ ಕೊನೆಯದಾಗಿ ರಸಾಯನ, ಅಂದರೆ, ಸ್ವಾಭಾವಿಕ ಮತ್ತು ನೈಸರ್ಗಿಕ ರೀತಿಯಲ್ಲಿ ದೇಹದ ಸ್ಥಿತಿಯ ಮರುಸ್ಥಾಪನೆ ಮತ್ತು ನಿರ್ವಹಣೆಯನ್ನು ಪುನ:ಶ್ಚೇತನಗೊಳಿಸುವಿಕೆ..!

ಇದನ್ನು ಬಸ್ತಿ, ಅಭ್ಯಂಗ ರೀತಿಯ ವಿವಿಧ ಚಿಕಿತ್ಸೆಗಳಿಂದ ಸಾಧಿಸಬಹುದಾಗಿದೆ. ಕಟಿಬಸ್ತಿ, ಪರಿಶೇಕ, ಪಿಂಡಸ್ವೇದಾ ಇತ್ಯಾದಿಯಂತ ವಿವಿಧ ಬಗೆಯ ಉಪಚಾರಗಳ ಮೂಲಕ ಉಪಶಮನ ಮಾಡಬಹುದಾಗಿರುತ್ತದೆ.
ಈ ಚಿಕಿತ್ಸೆಗಳಿಂದ ದೇಹದಲ್ಲಿ ಮಾರ್ಪಾಡುಗಳು ಆಗುತ್ತವೆ. ದೋಷ, ವಾತ ಮತ್ತು ಪಿತ್ತ ಸಮತೋಲನಕ್ಕೆ ಬರುತ್ತವೆ. ಮಾಂಸಖಂಡಗಳು ಮತ್ತು ಸ್ನಾಯಗಳ ಸೆಳೆತ ದೂರವಾಗುತ್ತದೆ. ನರದ ಮೇಲೆ ಒತ್ತಡ ನಿವಾರಣೆಯಾಗುತ್ತದೆ..!

ಆಯುರ್ವೇದ ಚಿಕಿತ್ಸೆಯಿಂದ ಬೆನ್ನುಹುರಿ, ಬೆನ್ನಿನ ತಟ್ಟೆಲುಬು ಮತ್ತು ಇವುಗಳಿಗೆ ಆಧಾರ ನೀಡುವ ಅಂಗಾಂಶಗಳನ್ನು ಬಲಗೊಳಿಸುವ ಮತ್ತು ಪೋಷಿಸುವ ಗುರಿಯನ್ನು ಸಹ ಇವು ಹೊಂದಿರುತ್ತವೆ. ಈ ಚಿಕಿತ್ಸೆಗಳೊಂದಿಗೆ ಸಿರವೈದ್ಯ (ರಕ್ತಸ್ರಾವಣ — ನರವನ್ನು ಚುಚ್ಚುವ ಮೂಲಕ ನಂಜುಯುಕ್ತ ರಕ್ತವನ್ನು ಹೊರ ಹೋಗುವಂತೆ ಮಾಡುವ ಚಿಕಿತ್ಸೆ) ಹಾಗೂ ಅಗ್ನಿ ಕರ್ಮ (ಸುಡಣೆ ಅಥವಾ ಬರೆ ಹಾಕುವಿಕೆ — ದೋಷಪೂರಿತ ಅಂಗಾಂಶದ ಮೇಲ್ಮೈಗೆ ಬಿಸಿ ಮುಟ್ಟಿಸಿ ಸರಿಪಡಿಸುವ ಕ್ರಿಯೆ) ವಿಧಾನವನ್ನೂ ಸಹ ಆಯುರ್ವೇದದಲ್ಲಿ ಪರಿಗಣಿಸಲಾಗಿದೆ..!

# ಮಾಡಬೇಕಾದುದು ಮತ್ತು ಮಾಡಬಾರದುದು —

ಆಯುರ್ವೇದದಲ್ಲಿ, ರೋಗಗಳ ನಿರ್ವಹಣೆಯಲ್ಲಿ ಆಹಾರ ಕ್ರಮಗಳು ಮತ್ತು ಪಥ್ಯಾಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಮಸ್ಯೆಯಿಂದ ನರಳುತ್ತಿರುವವರು ಕಾಳುಗಳು, ಹುರಿದ ಆಹಾರಗಳು ಮತ್ತು ಮೊಸರನ್ನು ಸೇವಿಸಬಾರದು. ಭಾರಿ ತೂಕದ ವಸ್ತುಗಳನ್ನು ಎತ್ತುವುದಾಗಲಿ ಅಥವಾ ಶ್ರಮದಾಯಿಕ ಚಟುವಟಿಕೆಗಳನ್ನಾಗಲಿ, ಅಥವಾ ಬಹುದೂರ ಪ್ರಯಾಣವನ್ನಾಗಲಿ ಮಾಡಬಾರದು ಹಾಗೂ ಶೀತಕ್ಕೆ ಒಡ್ಡಿಕೊಳ್ಳಬಾರದು..!

ತುಂಬಾ ಮೃದುವಾದ ಹಾಸಿಗೆ ಬದಲು ದೃಢವಾದ ಹಾಸಿಗೆ ಬಳಸಬೇಕು. ಕೆಲವೊಂದು ಯೋಗಾಸನ ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ಕಟಿ ವಾತವನ್ನು ನಿವಾರಣೆ ಮಾಡಬಹುದು. ಭುಜಂಗಾಸನ, ಅರ್ಧಮತ್ಸ್ಯೇಂದ್ರಾಸನ, ಸುಪ್ತಪಾದಂಗುಷ್ಟಾಸನ, ಸುಪ್ತವೀರಾಸನ ಈ ಸಮಸ್ಯೆ ಉಪಶಮನ ಮತ್ತು ತಡೆಗಟ್ಟುವಲ್ಲಿ ನೆರವಾಗುತ್ತದೆ. ಆಯುರ್ವೇದದಲ್ಲಿ ಪ್ರತಿ ರೋಗ ಮೂಲವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಈ ದೋಷಕ್ಕೂ ಉತ್ತಮ ಉಪಶಮನ ಲಭಿಸುತ್ತದೆ..!

  • # ಕೆ.ಶಿವು.ಲಕ್ಕಣ್ಣವರ
    # ಮತ್ತು ಸ್ವಾಮಿ ನದಾಫ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here