ಸುರಪುರ: ಡಾ:ಎಪಿಜೆ ಅಬ್ದುಲ ಕಲಾಂ ಅವರು ಈ ದೇಶ ಕಂಡ ಒಬ್ಬ ಶ್ರೇಷ್ಟ ಸಂತ,ಅವರು ಈ ದೇಶದ ಹೆಮ್ಮೆಯ ಪ್ರತೀಕವಾಗಿದ್ದರು.ಇವರ ಸೇವೆಯನ್ನು ಮನಗಂಡ ಎಲ್ಲರು ಅಬ್ದುಲ ಕಲಾಂ ಅಂದರೆ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಆಗಿದ್ದರು ಎಂದು ಮಾನವ ಹಕ್ಕುಗಳು ಹಾಗು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ದಾವುದ್ ಪಠಾಣ ಮಾತನಾಡಿದರು.
ನಗರದ ಟೈಲರ್ ಮಂಜಿಲ್ನಲ್ಲಿ ಹಮ್ಮಿಕೊಂಡಿದ್ದ ಡಾ:ಎಪಿಜೆ ಅಬ್ದುಲ ಕಲಾಂ ಅವರ ನಾಲ್ಕನೆ ವರ್ಷದ ಪುಣ್ಯ ಸ್ಮರಣೋತ್ಸವದಲ್ಲಿ ಭಾಗವಹಿಸಿ ಮಾತನಾಡಿ,ಎಪಿಜೆ ಅಬ್ದುಲ್ ಕಲಾಂ ಅವರು ಸರ್ವ ರಂಗಗಳ ಅರಿತಿದ್ದ ಮಹನಿಯರಾಗಿದ್ದರು.ಅವರೊಬ್ಬ ವಿಜ್ಞಾನಿ,ಸಮಾಜಪರ ಚಿಂತಕ,ಅದ್ಭುತ ಸಂಶೋಧಕ ಜೊತೆಗೆ ಉತ್ತಮ ಬೋಧಕರಾಗಿದ್ದರು.ಅವರ ನೆಚ್ಚಿನ ಸಂಗತಿಗಳಾದ ಬರವಣಿಗೆ ಮತ್ತು ಸಮಾಜಮುಖಿ ಸೇವೆಯಿಂದಾಗಿಯೆ ಅವರು ದೇಶದ ೧೨ನೇ ರಾಷ್ಟ್ರಪತಿಗಳಾಗಿ ಜಗತ್ತು ಮೆಚ್ಚುವಂತೆ ದೇಶ ಸೇವೆ ಮಾಡಿದ ಹೆಮ್ಮೆಯ ಭಾರತೀಯನ ಕುರಿತು ನಿತ್ಯವು ಸ್ಮರಿಸಬೇಕಿದೆ.
ಅವರು ಸದಾಕಾಲ ವಿದ್ಯಾರ್ಥಿಗಳೆಡೆಗೆ ಹೆಚ್ಚಿನ ಕಾಳಜಿಯುಳ್ಳವರಾಗಿದ್ದರು.ಅನೇಕ ಬಾರಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸುತ್ತಿದ್ದ ಸಂವಾದಗಳು ಜಗತ್ಪ್ರಸಿದ್ದವಾಗಿದ್ದವು.ಇಂತಹ ದೇಶದ ಹೆಮ್ಮೆಯ ಸಾಧಕನು ತನ್ನಿಡಿ ಬದುಕನ್ನು ದೇಶ ಸೇವೆಗಾಗಿಯೇ ಬಾಳಿ ಬದುಕಿದವರು.ಇವರ ಸೇವೆಯನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿ ನೀಡುವ ಮೂಲಕ ಅವರ ಸೇವೆಗೆ ಗೌರವಿಸಲಾಗಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಡಾ:ಎಪಿಜೆ ಅಬ್ದುಲ ಕಲಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ರಾಮ್ ಸೇನಾ ತಾಲ್ಲೂಕಾಧ್ಯಕ್ಷ ಶರಣು ನಾಯಕ,ಅಂಬೇಡ್ಕರ ಸೇನೆ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ರಮೀಜ್ ರಾಜಾ, ಕೆಎಮ್ಸಿ ತಾಲ್ಲೂಕಾ ಉಪಾಧ್ಯಕ್ಷ ಮಹಿಬೂಬ ಪಟೇಲ್,ಚಾಂದಪಾಷ ಕುಂಬಾರಪೇಟ,ಪಾಶಾ ಹವಾಲ್ದಾರ,ಜಾಕೀರ್ ರಂಗಂಪೇಟ, ದೇವು ಬೊಮ್ಮನಹಳ್ಳಿ,ದಾವೂದ್ ಇಬ್ರಾಹಿಂ,ದುರ್ಗಪ್ಪ ನಾಯಕ,ಇಮ್ರಾನ್ ಬೇಗ್,ಚಂದ್ರು ಅಲ್ಟಿ ಸೇರಿದಂತೆ ಅನೇಕರಿದ್ದರು.