ರಾಜ್ಯದಲ್ಲಿ 5000 ಶಾಲೆಗಳ ದುರಸ್ತಿ: ಸಚಿವ ಮುರುಗೇಶ ನಿರಾಣಿ

0
19

ಕಲಬುರಗಿ: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಮ್ಮ ಸರ್ಕಾರ ರಾಜ್ಯದಲ್ಲಿ 5000 ಶಾಲೆಗಳನ್ನು ದುರಸ್ತಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಯುದ್ದೋಪಾದಿಯಲ್ಲಿ ಈ ಕಾರ್ಯ ಸಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.

ಬುಧವಾರ ಅಫಜಲಪೂರ ತಾಲೂಕಿನ ಮಾತೋಳಿ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದ್ದರಿಂದ ಹಾನಿಯಾದ ಮನೆ ವೀಕ್ಷಿಸಿ, ಮನೆಯ ಮಾಲೀಕ ಗ್ರಾಮದ ಪಂಡಿತ್ ತಂ. ಶಿವಯೋಗಿ ಅವರಿಗೆ ಶಾಸಕ ಎಂ.ವೈ.ಪಾಟೀಲ ಅವರೊಂದಿಗೆ 10 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಶಾಲೆ ಕಟ್ಟಡ ಸುಸ್ಥಿತಿ ಕುರಿತು ಲೋಕೋಪಯೋಗಿ ಇಲಾಖೆಯಿಂದ ಒಂದು ವಾರದೊಳಗೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಬಿ.ಇ.ಓ ಗಳಿಗೆ ಸೂಚಿಸಿಲಾಗಿದೆ. ಉತ್ತಮ ಸ್ಥಿತಿಯಲ್ಲಿರುವ ಶಾಲೆಗಳಿಗೆ ಮಳೆ ಬಂದರೆ ರಜೆ ನೀಡುವುದಿಲ್ಲ. ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದ್ದಲ್ಲಿ ರಜೆಗೆ ಪರಿಗಣಿಸಲಾಗುವುದು ಎಂದರು.

ಎರಡು ವರ್ಷದ ಹಿಂದೆ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ ಲಕ್ಷಾಂತರ ಕ್ಯುಸೆಕ್ ನೀರು ಹರಿಬಿಟ್ಟ ಪರಿಣಾಮ ಎಂದೂ ಕಾಣದ ಪ್ರವಾಹಕ್ಕೆ ಜಿಲ್ಲೆ ಸಾಕ್ಷಿಯಾಗಿತ್ತು. ಇದು ಮತ್ತೆ ಮರುಕಳಿಸದಂತೆ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತೆ ಕೈಗೊಂಡಿದೆ ಎಂದರು.

ಮಹಾರಾಷ್ಟ್ರದ ಉಜನಿ ಜಲಾಶಯದ ಅಧಿಕಾರಿಗಳು ಮತ್ತು ಅಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ನಮ್ಮ ಅಧಿಕಾರಿಗಳು ಸತತ ಸಂಪರ್ಕ ಸಾಧಿಸಲು ವಾಟ್ಸ್ಯಾಪ್ ಗ್ರೂಪ್ ರಚಿಸಲಾಗಿದೆ. ಪ್ರತಿ ಗಂಟೆಗೆ ಆ ರಾಜ್ಯದಲ್ಲಿನ ಡ್ಯಾಂನಿಂದ ನೀರು ಹರಿಬಿಡುವ ಮಾಹಿತಿ ನಮಗೆ ಸಿಗಲಿದೆ ಎಂದರು.

ಅತಿವೃಷ್ಟಿಯಿಂದ ಮಾನವ, ಪ್ರಾಣಿ ಹಾನಿಯಾದಲ್ಲಿ ಎಸ್.ಡಿ.ಆರ್.ಎಫ್/ ಎನ್.ಡಿ.ಅರ್.ಎಫ್ ಮಾರ್ಗಸೂಚಿ ಜೊತೆಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಮನೆ ಕುಸಿದ ಪ್ರಕರಣಗಳಲ್ಲಿ ಶೇ.75ರಷ್ಟು ಮೇಲ್ಪಟ್ಟ ಹಾನಿಗೆ 5 ಲಕ್ಷ ರೂ., ಶೇ.25 ರಿಂದ 50ರಷ್ಟು ಹಾನಿಗೆ 3 ಲಕ್ಷ ರೂ. ಹಾಗೂ ಶೇ.15 ರಿಂದ ಶೇ.25 ರಷ್ಟು ಹಾನಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಅನುದಾನ ಸಹ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 8 ದಿನದಲ್ಲಿ ಮಳೆಗೆ 18 ಕುರಿ ಸಾವನಪ್ಪಿದ್ದು, ತಲಾ 3000 ರೂ. ಪರಿಹಾರ ನೀಡಲಾಗುತ್ತದೆ. ಆಕಳು, ಎಮ್ಮೆ ಸಾವನಪ್ಪಿದಲ್ಲಿ 30 ಸಾವಿರ ರೂ. ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಭೀಮಾ ಪ್ರವಾಹದಿಂದ ಭಾದಿತ ಗ್ರಾಮಗಳ ಪುನರ್ವಸತಿ ಕಾರ್ಯವನ್ನು ಸಹ ಹಂತ-ಹಂತವಾಗಿ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

50 ಲಕ್ಷ ರೂ. ನೀಡಲು ಶಾಸಕರ ಮನವಿ: ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಮಳೆಯಿಂದಾಗಿ ತಾಲೂಕಿನಲ್ಲಿ 15 ಮನೆ ಹಾನಿ, ಒಂದು ಆಕಳು, ಎರಡು ಕುರಿ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮಾತೋಳಿ ಗ್ರಾಮಕ್ಕೆ ಹೆದ್ದಾರಿಯಿಂದ ಸಮರ್ಪಕ ರಸ್ತೆ ಇಲ್ಲ. ಇದಕ್ಕೆ 50 ಲಕ್ಷ ರೂ. ಅನುದಾನ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಮತ್ತು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅದರಲ್ಲಿ ಮನವಿ ಮಾಡಿದರು. ಇದಕ್ಕೆ ಸಚಿವರು ಸಮ್ಮತ್ತಿಸಿ ಅನುದಾನ ಬಿಡುಗಡೆಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಡಿ.ಸಿ.ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ತಹಶೀಲ್ದಾರ ಸಂಜೀವಕುಮಾರ ದಾಸರ್, ಗ್ರೇಡ್-2 ತಹಶೀಲ್ದಾರ ಪೃಥ್ವಿರಾಜ ಬಿ. ಪಾಟೀಲ, ಅಫಜಲಪೂರ ಸಿ.ಪಿ.ಐ ಜಗನ್ನಾಥ ಪಾಳಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here