ದೇಶದ 2ನೇ ಅತಿ ದೊಡ್ಡ ರಾಷ್ಟ್ರಧ್ವಜ ನಿರ್ಮಾಣ

0
19

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಮಲಾಪುರ ಬಮ್ಮಣ ಪರಿವಾರದಿಂದ ದೇಶದ ಎರಡನೇ ಅತಿ ದೊಡ್ಡ ಭಾರತದ ರಾಷ್ಟ್ರಧ್ವಜ ನಿರ್ಮಿಸಲಾಗಿದ್ದು, ೧೧ ರಿಂದ ೧೭ ರವರೆಗೆ ಕಮಲಾಪುರ ರಾಷ್ಟ್ರೀಯ ಹೆದ್ದಾರಿ ೫೦ರ ಬಾಚನಾಳ ಕ್ರಾಸ್ ಸಮೀಪದ ಕುದುರೆ ಮುಖ ಪರ್ವತದ ಬಳಿ ೨೩ ಎಕರೆ ವಿಶಾಲ ಪ್ರದೇಶದಲ್ಲಿ ಧ್ವಜಾರೋಹಣ ಅನಾವರಣ ಮಾಡಲಾಗುವುದು ಎಂದು ದೇಶಾಭಿಮಾನಿ ವಿನೋದಕುಮಾರ ಬಮ್ಮಣ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೈತರ ಕೃಷಿ ಭೂಮಿಯಲ್ಲಿ ೭೫ ಅಡಿ ಉದ್ದ, ೫೦ ಅಡಿ ಅಗಲದ ಸುಮಾರು ೧೪೦ ಕೆಜಿ ತೂಕದ ರಾಷ್ಟ್ರಧ್ವಜ ಇದಾಗಿದೆ. ಭಾರತೀಯ ಸೈನ್ಯದಿಂದ ಜಮ್ಮುವಿನ ಲಡಾಖ್ ಪ್ರದೇಶದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ೧೫೦ ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಈಗ ದೇಶದಲ್ಲಿ ಎರಡನೇ ಬಾರಿಗೆ ಕಮಲಾಪುರದಲ್ಲಿ ತಿರಂಗಾ ಧ್ವಜ ಹಾರಾಟಕ್ಕೆ ಎಲ್ಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Contact Your\'s Advertisement; 9902492681

ಧಾರವಾಡ ಜಿಲ್ಲೆಯ ಗರಗ ಗ್ರಾಮದ ರಾಷ್ಟ್ರಧ್ವಜ ತಯಾರಕ ೩೦೦ ಮಹಿಳೆಯರು ಇಲ್ಲಿಗೆ ಆಗಮಿಸಿ ಶುದ್ಧ ಹತ್ತಿ ಉಪಯೋಗಿಸಿ ನೇಯ್ದ ಖಾದಿ ಬಟ್ಟೆಯಿಂದ ಒಂದೂವರೆ ತಿಂಗಳ ಪ್ರಯತ್ನದ ಫಲವಾಗಿ ಧ್ವಜ ತಯಾರು ಮಾಡಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಧ್ವಜ ಸಂಹಿತೆ ಮಂಡಳಿ ಮಾರ್ಗಸೂಚಿ ಪಾಲಿಸಲಾಗಿದ್ದು, ಇಂದಿನ ಯುವ ಪೀಳಿಗೆಯಲ್ಲಿ ದೇಶಾಭಿಮಾನ ಮೂಡಿಸಲು ವಿಶಿಷ್ಟವಾಗಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದರು.

೧೧ ರಂದು ಬೆಳಗ್ಗೆ ೧೦: ೩೦ಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರು ರಾಷ್ಟ ಧ್ವಜ ನೆರವೇರಿಸಲಿದ್ದಾರೆ. ಹಾರಕೂಡ ಹಿರೇಮಠ ಸಂಸ್ಥಾನದ ಪೂಜ್ಯ ಚನ್ನವೀರ ಶಿವಾಚಾರ್ಯರು, ಕ-ಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ, ಗುಲಬರ್ಗಾ ವಿವಿ ಕುಲಪತಿ ಯಶವಂತ ಗುರುಕರ, ರಾಷ್ಟ್ರಪತಿಯಿಂದ ಶೌರ್ಯ ಪ್ರಶಸ್ತಿ ಪಡೆದ ಡಾ. ಪಿ.ಆರ್. ಎಸ್. ಚೇತನ ಸೇರಿ ಅನೇಕ ಗಣ್ಯರು ಆಗಮಿಸಲಿದ್ದಾರೆ. ಶ್ರೀ ಶರಣಬಸವೇಶ್ವರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೧೫ ರಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಆಗಮಿಸಲಿದ್ದಾರೆ. ನಂತರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಪ್ರಮುಖರಾದ ರವೀಂದ್ರ ಮುತ್ತಿನ, ಬಾಬು ಮಠಪತಿ, ಮಂಜುನಾಥ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here