ವಾಡಿ: ಅನ್ಯಾಯ ಪ್ರಶ್ನಿಸಿ ಹಕ್ಕುಗಳನ್ನು ಪಡೆದುಕೊಳ್ಳಲು ಕಾರ್ಮಿಕರು ಸಂಘಟಿತರಾಗಲು ಕಾನೂನು ಅವಕಾಶ ಕೊಟ್ಟಿದೆ. ಆದರೆ ವಾಡಿ ಎಸಿಸಿ ಸಿಮೆಂಟ್ ಕಂಪನಿಯ ಆಡಳಿತ ಮಂಡಳಿಯವರು ಪರೋಕ್ಷವಾಗಿ ಎಐಟಿಯುಸಿ ಚುನಾವಣೆಗೆ ಅಡೆತಡೆಯೊಡ್ಡುವ ಮೂಲಕ ಕಾರ್ಮಿಕರು ಸಂಘಟಿತರಾಗಂತೆ ತಡೆಯುತ್ತಿದೆ ಎಂದು ಎಸಿಸಿ ಸಿಮೆಂಟ್ ಮಜ್ದೂರ್ ಐಂಡ್ ಸ್ಟಾಫ್ ಯೂನಿಯನ್ (ಎಐಟಿಯುಸಿಗೆ ಸಂಯೋಜಿತ) ಪ್ರಧಾನ ಕಾರ್ಯದರ್ಶಿ ಶಾಮಸನ್ ಐ.ರೆಡ್ಡಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಮಸನ್, ಎಸಿಸಿ ಚುನಾಯಿತ ಕಾರ್ಮಿಕ ಸಂಘದ (ಎಐಟಿಯುಸಿ) ಪದಾಧಿಕಾರಿಗಳ ಅವದಿ ೨೦೧೮ಕ್ಕೆ ಮುಕ್ತಾಯಗೊಂಡಿದೆ. ಪುನಃಹ ಚುನಾವಣೆ ನಡೆಸಲು ಸಂಘ ಮುಂದಾಗಿದ್ದರೂ ಕಂಪನಿ ಹಿಂಬಾಗಿಲಿನಿಂದ ತೊಂದರೆ ನೀಡುತ್ತಿದೆ. ಸಂಘದ ಪದಾಧಿಕಾರಿಗಳಲ್ಲೇ ಬೇಧ ಭಾವ ಮೂಡಿಸಿ ಒಗ್ಗಟ್ಟು ಮುರಿದಿದೆ. ಕೆಲ ಕಾರ್ಮಿಕ ನಾಯಕರನ್ನು ಕಂಪನಿ ತನ್ನ ಗುಲಾಮರನ್ನಾಗಿಸಿಕೊಂಡಿದೆ. ಆ ಮೂಲಕ ಚುನಾವಣೆ ನಡೆಯದಂತೆ ಷಢ್ಯಂತ್ರ ರೂಪಿಸಿದೆ.
ಅನ್ಯಾಯ ಪ್ರಶ್ನಿಸಲು ಮುಂದಾದ ಕಾರ್ಮಿಕ ಮುಖಂಡರ ವಿರುದ್ಧ ಇಲ್ಲಸಲ್ಲದ ಆರೋಪ ಹೊರೆಸಿ ಪೊಲೀಸರಿಗೆ ಸುಳ್ಳು ಮಾಹಿತಿ ಕೊಟ್ಟು ದೂರು ದಾಖಲಿಸುವ ಪರಿಪಾಟ ರೂಢಿಸಿಕೊಂಡಿದೆ. ಕಂಪನಿಯ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರಶ್ನಿಸುವ ಬಿಸಿ ರಕ್ತದ ಗುತ್ತಿಗೆ ಕಾರ್ಮಿಕರಿಗೆ ಅನಗತ್ಯವಾಗಿ ನೋಟೀಸ್ ನೀಡಿ ಹೆದರಿಸಲಾಗುತ್ತಿದೆ. ಕಾರ್ಮಿಕರ ದನಿ ಹುಟ್ಟಡಗಿಸುತ್ತಿರುವ ಕಂಪನಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಹೀಗಾಗಿ ಕಂಪನಿ ವಿರುದ್ಧ ದನಿ ಎತ್ತಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಎಸಿಸಿಯಲ್ಲಿ ಹಿಟ್ಲರ್ ನೀತಿ ಜಾರಿಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸಿಸಿ ಕಂಪನಿಯ ಕಾರ್ಮಿಕ ಸಂಘದ ಚುನಾವಣೆ ನಡೆಸಲು ತಾಲೂಕು ನ್ಯಾಯಾಲಯ ಆದೇಶ ನೀಡಿದೆ. ಚುನಾವಣೆ ನಡೆಸಲು ನಿಯಮ ಬದ್ಧವಾಗಿ ಎಸಿಸಿಯಲ್ಲಿ ತಾಜ್ ಗ್ರೂಪ್ ಕ್ರಾರ್ಮಿಕರು ಸೇರಿದಂತೆ ಒಟ್ಟು ೮೨೦ ಜನ ಕಾರ್ಮಿಕರಿದ್ದಾರೆ. ಹೀಗಿರುವಾಗಲೂ ಕಂಪನಿ ಆಡಳಿತ ಕಾರ್ಮಿಕ ಸಂಘದ ಚುನಾವಣೆ ನಡೆಸಲು ಸಹಕಾರ ನೀಡುತ್ತಿಲ್ಲ. ಚುನಾವಣೆ ನಡೆಸಲು ಕೋಣೆಗಳ ಸ್ಥಳಾವಕಾಶ ನೀಡುತ್ತಿಲ್ಲ.
ಕಾರ್ಮಿಕ ಸಂಘದ ಕಚೇರಿಯಲ್ಲಿ ನಡೆಸಲೂ ಕೂಡ ತಕರಾರು ಮುಂದಿಟ್ಟಿದೆ. ಕಂಪನಿ ಆವರಣದಲ್ಲಿ ಕಾರ್ಮಿಕರ ಚುನಾವಣೆ ನಡೆಸದಂತೆ ಮೌಕಿಕ ಎಚ್ಚರಿಕೆ ನೀಡಿದೆ. ಸಂವಿಧಾನ ಬದ್ಧವಾದ ಚುನಾವಣಾ ಹಕ್ಕನ್ನು ಎಸಿಸಿ ಕಂಪನಿ ಕಸಿದುಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಕಾರ್ಮಿಕ ನಾಯಕ ಶಾಮಸನ್ ಐ.ರೆಡ್ಡಿ, ಅಕ್ಟೋಬರ್ ತಿಂಗಳಲ್ಲಿ ಕಾರ್ಮಿಕ ಸಂಘದ ಚುನಾವಣೆ ನಡೆಸಲು ತೀರ್ಮಾನಿಸಿದ್ದೇವೆ.
ಚುನಾವಣೆ ಘೋಷಣೆ ಮಾಡಲು ಪ್ರಧಾನ ಕಾರ್ಯದರ್ಶಿಗೆ ಅಧಿಕಾರವಿದೆ. ಆದಷ್ಟು ಬೇಗ ಚುನಾವಣಾ ದಿನಾಂಕ ಮತ್ತು ಚುನಾವಣಾಧಿಕಾರಿಗಳ ಹೆಸರು ಘೋಷಣೆ ಮಾಡುತ್ತೇವೆ. ಎಸಿಸಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ನಾಯಕರು ಒಮ್ಮತದಿಂದ ಸಹಕಾರ ನೀಡಬೇಕು. ಚುನಾವಣೆ ನಡೆಯದಂತೆ ತಕರಾರು ಮುಂದಿಟ್ಟು ತೊಂದರೆ ನೀಡಿದರೆ ಕಾರ್ಮಿಕರೇ ಸೂಕ್ತ ಉತ್ತರ ನೀಡುತ್ತಾರೆ ಎಂದಿದ್ದಾರೆ.