ಕಲಬುರಗಿ: ನಗರದ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಕನ್ನಡ ಮಾತೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಇಂದು 67ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಕನ್ನಡ ಭಾಷೆ ಅತ್ಯಂತ ಹಳೆಯ ಭಾಷೆಯಾಗಿದೆ.ಕನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ.ಕನ್ನಡ ಭಾಷೆ, ನಾಡು, ನುಡಿ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.ಹಿರಿಯ ಹೋರಾಟಗಾರರಾದ ಡಾ.ಎ.ಎಸ್.ಭದ್ರಶೆಟ್ಟಿ ಮಾತನಾಡಿ ಕನ್ನಡ ನಾಡಿನಾದ್ಯಂತ ಕನ್ನಡ ಸಂಭ್ರಮ ಎಲ್ಲರೂ ಆಚರಿಸಬೇಕು ಎಂದು ಕರೆ ನೀಡಿದರು.ಹಿರಿಯ ಸದಸ್ಯರಾದ ಎಂ.ಡಿ.ಮಠಪತಿ ಮಾತನಾಡಿ ಕಲ್ಯಾಣ ನಾಡಿನಲ್ಲಿ ಕನ್ನಡ ಹುಟ್ಟಿಕೊಂಡಿರುವುದು ಹೆಮ್ಮೆ ವಿಷಯವಾಗಿದೆ ಎಂದು ಬಣ್ಣಿಸಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಬಾಲಕೊಂದೆ ಮಾತನಾಡಿ ಎಲ್ಲರೂ ಕನ್ನಡಾಭಿಮಾನ ಮೆರೆಯಬೇಕು ಎಂದರು.ಸದಸ್ಯರಾದ ಬಸವರಾಜ ಮಾಗಿ, ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ವಿನೋದ ಪಾಟೀಲ್, ಮಲ್ಲಯ್ಯ ಸ್ವಾಮಿ ಬಿದಿಮನಿ, ಬಸವರಾಜ ಪುರ್ಮಾ, ಮಲ್ಲಯ್ಯ ಹಿರೇಮಠ, ಪರಮೇಶ್ವರ ರಾಜಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.