ಕಲಬುರಗಿ: ನಾವು ಆಚರಿಸುವ ಜನ್ಮದಿನ ಸೇರಿದಂತೆ ಮುಂತಾದ ಆಚರಣೆ, ಕಾರ್ಯಕ್ರಮಗಳು ಕೇವಲ ಪ್ರತಿಷ್ಠೆಗೆ ಜೋತುಬಿದ್ದು, ಅನಾವಶ್ಯಕ ವೆಚ್ಚಕ್ಕೆ ಕಾರಣವಾಗಬಾರದು. ಆಚರಣೆಯು ಸ್ವತಃ ತೃಪ್ತಿಯ ಜೊತೆಗೆ ಸಮಾಜಕ್ಕೆ ಅದರಿಂದ ಉಪಯೋಗವಾಗುವ ಅರ್ಥಪೂರ್ಣ ಆಚರಣೆಗಳಿಗೆ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ತುಂಬಾ ಅಗತ್ಯವಾಗಿದೆಯೆಂದು ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.
ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಅವರ 42ನೇ ಜನ್ಮದಿನದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ನಗರದ ಮಹಾದೇವ ನಗರ, ಕಸ್ತೂರಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬೃಹತ ಪ್ರಮಾಣದಲ್ಲಿ ಸಸಿಗಳ ವಿತರಣೆ, ಗಿಡ ನೆಡುವುದು ಮತ್ತು ರಾಮತೀರ್ಥ ಸಮೀಪವಿರುವ ಕೊಳಗೇರಿ ಪ್ರದೇಶದಲ್ಲಿನ ಮಹಿಳೆಯರು, ಮಕ್ಕಳಿಗೆ ಬಟ್ಟೆ ವಿತರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓಂ ಶ್ರೀ ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಸಮಾಜಮುಖಿ ಆಚರಣೆ ನಮ್ಮದಾಗಬೇಕಾಗಿದೆ. ಮೋಜು-ಮಸ್ತಿ ಮಾಡಿ, ಕುಣಿದು ಕುಪ್ಪಳಿಸಿದರೆ ಮಾತ್ರ ಜನ್ಮದಿನಾಚರಣೆಯಾಗುವುದಿಲ್ಲ. ಬದಲಿಗೆ ಕಾಯಕಜೀವಿಗಳು, ಅನಾಥರು, ಬಡವರು, ಅಸಹಾಯಕರು, ವಯೋವೃದ್ಧರಿಗೆ ಅವಶ್ಯಕತೆಗನುಗುಣವಾಗಿ ಸಹಾಯಹಸ್ತ ಚಾಚುವ ಮೂಲಕ ಆಚರಿಸಿದರೆ ಅದಕ್ಕೆ ಹೆಚ್ಚಿನ ಮೌಲ್ಯ ಬರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಚ್.ಬಿ.ಪಾಟೀಲ ಅವರ ಜನ್ಮದಿನಾಚರಣೆ ಅಥರ್Àಪೂರ್ಣ, ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಯಶೀ ಎಚ್.ಪಾಟೀಲ, ಎಚ್.ಬಿ.ಪಾಟೀಲ, ಸಂಗೀತಾ ಸಿ.ಗಾರಂಪಳ್ಳಿ, ಬಸಯ್ಯಸ್ವಾಮಿ ಹೊದಲೂರ, ಪ್ರಭುಲಿಂಗ ಮುಲಗೆ, ಶಿವಯೋಗಪ್ಪ ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ಮಹಾಂತೇಶ ಬಿರಾದಾರ, ರವಿ ಬಿರಾಜಾದಾರ, ದೇವೇಂದ್ರಪ್ಪ ಗಣಮುಖಿ, ಶರಣಬಸಪ್ಪ ನರೋಣಿ, ಮಲ್ಲಿಕಾರ್ಜುನ ಜಮಾದಾರ, ಸದಾನಂದ ಶಿರವಾಳ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.